ರಾಷ್ಟ್ರಪತಿಗಳ ವಂದನಾ ನಿರ್ಣಯದ ಚರ್ಚೆ ಮುಂದುವರಿಸುವ ಬದಲಿಗೆ ಏರ್ಸೆಲ್-ಮ್ಯಾಕ್ಸಿಸ್ ಹಗರಣದ ಚರ್ಚೆಗೆ ಅವಕಾಶ ನೀಡಿದ ಸ್ಪೀಕರ್ ಕ್ರಮ ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಈ ವೇಳೆ ಕಾಂಗ್ರೆಸ್ ಸದಸ್ಯರೂ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ಈ ಗದ್ದಲ ನಡುವೆಯೇ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಎಐಎಡಿಎಂಕೆ ನಾಯಕ ಟಿ.ಜೆ.ವೆಂಕಟೇಶ್ ಏರ್ಸೆಲ್-ಮ್ಯಾಕ್ಸಿಸ್ ಹಗರಣ ಸಂಬಂಧ ಡಿಎಂಕೆಯ ಮಾಜಿ ಸಚಿವರಿಬ್ಬರ ಹಾಗೂ ಮಾಜಿ ವಿತ್ತ ಸಚಿವರ ಹೆಸರನ್ನು ಪ್ರಸ್ತಾಪಿಸಲು ಮುಂದಾದರು. ಇದಕ್ಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವಕಾಶ ನೀಡಲಿಲ್ಲ. ಆದರೆ ಅವರು ಪ್ರಧಾನಿ ಮೋದಿ ಸರಕಾರ ಕಪ್ಪುಹಣ ತರುವುದಾಗಿ ದೊಡ್ಡ ಭರವಸೆ ನೀಡಿತ್ತು. ಬಹುಕೋಟಿ 2 ಜಿ ಹಗರಣದೊಂದಿಗೆ ತಳುಕುಹಾಕಿಕೊಂಡಿರುವ ಏರ್ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿಯಾವ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲಗೊಂಡಿದೆ. ಈ ಕೂಡಲೇ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಸಭಾತ್ಯಾಗ: ವೆಂಕಟೇಶ್ ಮಾತನಾಡುವ ಮುನ್ನ ಬಿಜೆಡಿ ನಾಯಕ ಭತೃಹರಿ ಮಹ್ತಾಬ್, 'ಕಾರ್ತಿ ಚಿದಂಬರಂ ಅವರು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಸೇರಿದಂತೆ ವಿಶ್ವದ 14 ದೇಶಗಳಲ್ಲಿ ಬೃಹತ್ ಉದ್ದಿಮೆ ಹೊಂದಿರುವರು. ಅಕ್ರಮವಾಗಿ ಈ ರಾಷ್ಟ್ರಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ದಾಖಲೆಗಳಿದ್ದರೂ ಜಾರಿ ನಿರ್ದೇಶನಾಲಯವಾಗಲೀ ಸಿಬಿಐ ಆಗಲಿ ಚಾರ್ಜ್ಶೀಟ್ ಸಲ್ಲಿಸಿಲ್ಲ,' ಎಂದು ದೂರಿದರು. ಇದರ ಬೆನ್ನಿಗೇ ವೆಂಕಟೇಶ್ ಈ ಪ್ರಕರಣದ ತನಿಖೆಗೆ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸಿಟ್ಟಿಗೆದ್ದ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಸದಸ್ಯರು ಸಭ್ಯಾತ್ಯಾಗ ನಡೆಸಿದರು.
ಮ್ಯಾಚ್ ಫಿಕ್ಸಿಂಗ್: ಏರ್ಸೆಲ್-ಮ್ಯಾಕ್ಸಿಸ್ ಹಗರಣದ ಕುರಿತು ಗದ್ದಲ ಶುರುವಾಗುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಸದಸ್ಯರು ಸರಕಾರ ಹಾಗೂ ಕೆಲ ಪ್ರತಿಪಕ್ಷಗಳ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ದೂರಿದರು.
ತನಿಖೆ ನಿರ್ಣಾಯಕ ಘಟ್ಟದಲ್ಲಿದೆ: ಜೇಟ್ಲಿ
ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಏರ್ಸೆಲ್-ಮ್ಯಾಕ್ಸಿಸ್ ಹಗರಣದ ತನಿಖೆ ನಿರ್ಣಾಯಕ ಘಟ್ಟದಲ್ಲಿದೆ. ತನಿಖೆಯನ್ನು ವಿಳಂಬವಾಗಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನು ಪ್ರಕಾರ ಶಿಕ್ಷಿಸಲಾಗುತ್ತದೆ ಎಂದು ಸದನಕ್ಕೆ ಭರವಸೆ ನೀಡಿದರು. 'ಈ ಪ್ರಕರಣದ ತನಿಖೆಯಲ್ಲಿ ರಾಜಕೀಯ ಹಗೆತನವಿದೆ ಎಂಬ ಆರೋಪಗಳೆಲ್ಲವೂ ಸುಳ್ಳು. ಕೆಲವೊಂದು ಪ್ರತಿಪಕ್ಷಗಳ ಒತ್ತಡಕ್ಕೆ ಸರಕಾರ ಮಣಿದಿಲ್ಲ. ಈಗಾಗಲೇ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದ್ದು, ತನಿಖೆ ನಿರ್ಣಾಯಕ ಘಟ್ಟಕದಲ್ಲಿದೆ,' ಎಂದು ಅವರು ಹೇಳಿದರು.
ರಾಜ್ಯಸಭೆಯಲ್ಲಿ ಗುಜರಾತ್ ಸಿಎಂ ಟಾರ್ಗೆಟ್
ಇತ್ತ ರಾಜ್ಯಸಭೆಯಲ್ಲೂ ಏರ್ಸೆಲ್-ಮ್ಯಾಕ್ಸಿಸ್ ಹಗರಣ ಮುಂದಿರಿಸಿಕೊಂಡು ಎಐಎಡಿಎಂಕೆ ಸದಸ್ಯರು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿಕೊಂಡಿದ್ದರೆ, ಕಾಂಗ್ರೆಸ್ ಸದಸ್ಯರು ಗುಜರಾತ್ ಸರಕಾರವನ್ನು ಗುರಿಯಾಗಿಸಿಕೊಂಡು ಎದಿರೇಟು ನೀಡಿದರು. ಎಐಎಡಿಎಂಕೆ ಸದಸ್ಯರು ಕಾರ್ತಿ ಚಿದಂಬರಂ ಕೈವಾಡವಿರುವ ಹಗರಣವನ್ನು ಆರೋಪಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು 2010ರಲ್ಲಿ ಗುಜರಾತ್ ಸರಕಾರವು, ಹಾಲಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಪುತ್ರಿ ಅನಾರ್ ಪಟೇಲ್ರ ಉದ್ಯಮಿ ಪಾಲದಾರನಿಗೆ 422 ಎಕರೆ ಜಮೀನು ಮಾರುಕಟ್ಟೆ ಬೆಲೆಗಿಂತಲೂ ಕಡಿಮೆ ದರಕ್ಕೆ ಮಾರಾಟ ಮಾಡಿ ಅಕ್ರಮ ಎಸಗಿದೆ ಎಂಬ ಪತ್ರಿಕಾ ವರದಿಗಳನ್ನು ಪ್ರದರ್ಶಿಸಿ ಗದ್ದಲ ನಡೆಸಿದರು.
ಸೇವಾ ತೆರಿಗೆ ವಂಚನೆದಾರರಿಗೆ ಬಂಧನದ ರಿಲೀಫ್
2 ಕೋಟಿ ರೂ.ವರೆಗೂ ಸೇವಾ ತೆರಿಗೆ ವಂಚಿಸಿ ಅಕ್ರಮ ಎಸಗಿದ ಕಂಪನಿಗಳ ಅಧಿಕಾರಿಗಳನ್ನು ಬಂಧಿಸದೇ ಕೇವಲ ಕೇಸು ದಾಖಲಿಸಿ ಪ್ರಕರಣದ ವಿಚಾರಣೆ ನಡೆಸುವ ಪ್ರಸ್ತಾವನೆ ಸರಕಾರದ ಮುಂದಿದೆ. ಈಗಿರುವ ನಿಯಮಗಳ ಅನುಸಾರ 1 ಕೋಟಿ ರೂ.ವರೆಗೂ ಸೇವಾ ತೆರಿಗೆ ವಂಚಿಸುವ ಕಂಪನಿಗಳ ಅಧಿಕಾರಿಗಳನ್ನು ಯಾವುದೇ ಕ್ಷಣದಲ್ಲಿ ಬಂಧಿಸಿ ವಿಚಾರಣೆ ನಡೆಸಬಹುದಾಗಿತ್ತು. ಆದರೆ ಈ ನಿಯಮಕ್ಕೆ ತಿದ್ದುಪಡಿಸಿರುವ ತರುವ ಹೊಸ ವಿಧೇಯಕವನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಹೊಸದಿಲ್ಲಿ: ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಮತ್ತವರ ಪುತ್ರ ಕಾರ್ತಿ ಚಿದಂಬರಂ ಪಾಲ್ಗೊಂಡಿದ್ದಾರೆಂಬ ಆರೋಪ ಕೇಳಿಬಂದಿರುವ ಬಹುಕೋಟಿ ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಆಗ್ರಹ ಸಂಸತ್ತಿನಲ್ಲಿ ಬುಧವಾರವೂ ಕೇಳಿಬಂತು. ಇದೇ ವಿಚಾರವಾಗಿ ಗದ್ದಲ ಉಂಟಾಗಿ ಕೆಲಹೊತ್ತು ಕಲಾಪವನ್ನು ಮೂಂದಡಲಾಗಿತ್ತು.