ಬೆಂಗಳೂರು: ಕೊಂಕಣ ರೈಲ್ವೆ ಮಾರ್ಗದ ಮೊದಲ ಹಂತದ ವಿದ್ಯುದೀಕರಣ ಯೋಜನೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೆ ನಿಗಮದ (ಕೆಆರ್ಸಿಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಕೊಂಕಣ ರೈಲ್ವೆಯಲ್ಲಿ ರೋಹಾ-ಥೋಕುರ್ ಮಾರ್ಗದ ವಿದ್ಯುದೀಕರಣ ಈಗಾಗಲೇ ಮಂಜೂರಾಗಿದ್ದು, ಮೊದಲ ಹಂತದಲ್ಲಿ ಥೋಕುರ್ನಿಂದ ವೆರ್ನಾ ತನಕ 330 ಕಿ.ಮೀ ಮಾರ್ಗದ ವಿದ್ಯುದೀಕರಣ ಶೀಘ್ರ ನಡೆಯಲಿದೆ ಎಂದರು.
ಥೋಕುರ್ನಿಂದ ರೋಹಾ ತನಕ ವಿದ್ಯುದೀಕರಣದ ಅಂದಾಜು ವೆಚ್ಚ 709 ಕೋಟಿ ರೂ.ಗಳಾಗಿದೆ. ಒಟ್ಟು 740 ಕಿ.ಮೀ ಮಾರ್ಗದ ವಿದ್ಯುದೀಕರಣಕ್ಕೆ ಮೂರು ವರ್ಷ ತಗಲಬಹುದು. ಮೊದಲ ಹಂತದಲ್ಲಿ 330 ಕಿ.ಮೀ ತನಕ ಮಾತ್ರ ಪೂರ್ಣಗೊಳಿಸಲಾಗುವುದು. ರೋಹಾ ಮತ್ತು ಥೋಕುರ್ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿಗೆ ಮತ್ತಷ್ಟು ಕಾಲಾವಕಾಶ ಬೇಕು. ಕೊಂಕಣ ರೈಲ್ವೆ ತನ್ನ ಲಾಭವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ಗೆ (ಎಂಆರ್ಪಿಎಲ್) ಉತ್ಪನ್ನಗಳ ಸಾಗಣೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಿದೆ. ಇದರಿಂದ ಕೊಂಕಣ ರೈಲ್ವೆಯ ಆದಾಯ ಹೆಚ್ಚಲಿದೆ ಎಂದರು.
ಕೆಆರ್ಸಿಎಲ್ ಕೊಂಕಣ ರೈಲ್ವೆಯ ವ್ಯಾಪ್ತಿಯನ್ನು ಉಳ್ಳಾಲದ ತನಕ ವಿಸ್ತರಿಸುವಂತೆ ರೈಲ್ವೆ ಸಚಿವಾಲಯವನ್ನು ಕೋರಿದೆ. ಆರಂಭದಲ್ಲಿ ಉಳ್ಳಾಲದ ತನಕ ಕೊಂಕಣ ರೈಲ್ವೆ ವ್ಯಾಪ್ತಿಯನ್ನು ನಿಗದಿಪಡಿಸುವ ಪ್ರಸ್ತಾಪ ಇತ್ತು ಎಂದರು.
ಮತ್ಸ್ಯಗರ್ಂ ಎಕ್ಸ್ಪ್ರೆಸ್ನಲ್ಲಿ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ರಾಜ್ಯ ಪೊಲೀಸ್ ಇಲಾಖೆಯ ಜತೆ ನಿಕಟ ಸಂಪರ್ಕದಲ್ಲಿದೆ. ಕೆಲವು ಕಳ್ಳರ ಗ್ಯಾಂಗ್ಗಳು ಇಂತಹ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದು, ಆರ್ಪಿಎಫ್ ಇಂತಹ ಪ್ರಕರಣಗಳು ನಡೆಯದಂತೆ ಮುಂಜಾಗರೂಕತೆ ವಹಿಸುತ್ತಿದೆ ಎಂದರು. ಕೆಆರ್ಸಿಎಲ್ ಪ್ರತಿ ವರ್ಷ ರೈಲು ಚಾಲಕರು ಸೇರಿದಂತೆ ನಾನಾ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಭಾರತೀಯ ರೈಲ್ವೆಗೆ ಪ್ರತಿ ವರ್ಷ 15,000ದಿಂದ 20,000 ರೈಲು ಚಾಲಕರ ಅಗತ್ಯವಿದೆ. ಕೊಂಕಣ ರೈಲ್ವೆ 2014-15ರಲ್ಲಿ 40 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಕೊಂಕಣ ರೈಲ್ವೆಗೆ 2014-15ರಲ್ಲಿ 40 ಕೋಟಿ ರೂ. ನಿವ್ವಳ ಲಾಭ