ಮಡಿಕೇರಿ: ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ಕಾಫಿ ಸಂಸ್ಕರಣೆ ನಡೆಸಿ, ಇಂಡಿಯನ್ ಟ್ರೇಡ್ ಅಸೋಸಿಯೇಶನ್ ಮೂಲಕ ಮಾರಾಟ ಮಾಡುವ ಸದಸ್ಯರಿಗೆ ಕಾಫಿಗೆ ಕೆ.ಜಿ.ಗೆ 4 ರೂ.ನಂತೆ ಸಹಾಯಧನ ನೀಡುವ ಯೋಜನೆ ಜಾರಿಗೆ ಬಂದಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಣಸೂರಿನಲ್ಲಿರುವ ಗೋದಾಮಿನಲ್ಲಿ ಉಚಿತವಾಗಿ ಕಾಫಿ ಶೇಖರಣೆ ಮಾಡುವ ಅವಶಕಾಶವಿದೆ. ಬೆಳೆಗಾರರಿಗೆ ಮಾರುಕಟ್ಟೆ ದರದ ಅರ್ಧ ಭಾಗವನ್ನು ಮೊದಲು ನೀಡಲಾಗುವುದು. ಹರಾಜು ಹಾಕಿದ ನಂತರ ಉಳಿದ ಮೊತ್ತವನ್ನು ನೀಡಲಾಗುವುದು. ಈ ಕುರಿತು ಚರ್ಚಿಸಲು ಸದಸ್ಯರ ಸಭೆಯನ್ನು ಫೆ. 22ರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಸಹಕಾರ ಕೆಂದ್ರ ಬ್ಯಾಂಕಿನ ಸಭಾಂಗಣದಲ್ಲಿ ಕರೆಯಲಾಗಿದೆ. ಈ ಸಭೆಗೆ ಕಾಫಿ ಮಂಡಳಿಯ ಅಧಿಕಾರಿಗಳು, ಐಸಿಟಿಯು ಕಾಫಿ ಹರಾಜುದಾರರು ಆಗಮಿಸುವುದರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಈಗಾಗಲೇ ನಬಾರ್ಡ್ನೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲಾ ಬ್ಯಾಂಕ್ಗಳ ಮೂಲಕ ಶೇ. 7 ರ ಬಡ್ಡಿದರಲ್ಲಿ ಬೆಳೆಗಾರರಿಗೆ ಸಾಲ ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರಯತ್ನ ನಡೆಸಲಾಗಿದೆ. ಇದರಿಂದ ಬೆಳೆಗಾಗರರಿಗೆ ಸಾಕಷ್ಟು ಪ್ರಯೋಜನ ಆಗಲಿದೆ ಎಂದು ಹೇಳಿದರು.
ಹುಣಸೂರಿನಲ್ಲಿ ಪೆಪ್ಪರ್ ಪಾರ್ಕ್:
ಹುಣಸೂರಿನಲ್ಲಿ ಪೆಪ್ಪರ್ ಪಾರ್ಕ್ ನಿರ್ಮಿಸುವ ಪ್ರಯತ್ನವನ್ನು ಸಂಘ ನಡೆಸುತ್ತಿದೆ. ಇದಕ್ಕೆ 27 ಕೋಟಿ ರೂ. ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಸರಕಾರ ಶೇ. 50 ಬಂಡವಾಳ ಹಾಕಲಿದೆ. ಉಳಿದ ಮೊತ್ತವನ್ನು ರಾಜ್ಯ ಸರಕಾರ ಇಲ್ಲವೇ ಸಹಕಾರ ಸಂಘ ಹಾಕಬೇಕಿದೆ. ಸಹಕಾರ ಸಂಘ ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಈ ಮೊತ್ತವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಸಂಘಕ್ಕೆ ಸಾಕಷ್ಟು ಗೋದಾಮುಗಳು, ಕಟ್ಟಡಗಳು ಇರುವುದರಿಂದ ಇದರ ಆಧಾರದಲ್ಲಿ ಹಣವನ್ನು ಹೊಂದಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಕಾಫಿ ಮಂಡಳಿ ಹಾಗೂ ನಮ್ಮ ಸಂಘದ ನಡುವೆ ನಡೆಯುತ್ತಿದ್ದ ಮೊಕದ್ದಮೆಯಲ್ಲಿ ನಾವು ಸೋತ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಪರಿಣಾಮ ನೇರ ಕಾಫಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದೀಗ ಸಂಘದ ಬೆಳವಣಿಗೆಗೆ ಸದಸ್ಯರು ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ರಮೇಶ್ ಜೋಯಪ್ಪ, ಎನ್.ಕೆ. ಅಯ್ಯಣ್ಣ, ದೇಚಮ್ಮ, ನಾಣಯ್ಯ ಹಾಜರಿದ್ದರು.
ಕಾಫಿ ಬೆಳೆಗಾರರಿಗೆ ನೆರವು: ಕೆ.ಜಿ.ಗೆ 4 ರೂ. ಪ್ರೋತ್ಸಾಹ ಧನ