ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ 32 ವರ್ಷದ ಪೊಲೀಸ್ ಅಧಿಕಾರಿ ಹರೀಶ್ ಅವರ ದೇಹವು ಚೆನ್ನೈನ ಎಗ್ಮೋರ್ನಲ್ಲಿರುವ ಪೊಲೀಸ್ ಆಫೀಸರ್ಸ್ಸ್ ಮೆಸ್ನಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಮೃತ ದೇಹದ ಬಳಿ ಯಾವುದೇ ಆತ್ಮಹತ್ಯೆ ಚೀಟಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಕರ್ನಾಟಕದವರಾದ ಎನ್.ಹರೀಶ್ ಅವರು 2009ನೇ ಬ್ಯಾಚ್ನ ಭಾರತೀಯ ಪೊಲೀಸ್ ಸೇವೆ(ಐಪಿಸಿ) ಅಧಿಕಾರಿ. ಇತ್ತೀಚೆಗಷ್ಟೇ ಮಧುರೈನಿಂದ ಚೆನ್ನೈಗೆ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ವಿಭಾಗದ ಸಹಾಯಕ ಕಮಿಷನರ್ ಆಗಿ ವರ್ಗಾವಣೆಗೊಂಡಿದ್ದರು. ವರ್ಗಾವಣೆಯಿಂದ ಮಾನಸಿಕವಾಗಿ ನೊಂದಿದ್ದರು. ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಗುರುವಾರ ಬೆಳಗ್ಗೆ 10 ಗಂಟೆಯಾದರೂ ಬಾಗಿಲು ತೆರೆಯದಿದ್ಧಾಗ ಸಿಬ್ಬಂದಿ ಅವರನ್ನು ತಲುಪಲು ಯತ್ನಿಸಿದರು. ಹಾಗೂ ಕೊನೆಗೆ ಬಾಗಿಲು ಮುರಿದು ಒಳಗೆ ಹೋಗಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಸಕೋಟೆ ತಾಲೂಕಿನ ದೊಡ್ಡನೂರನಹಳ್ಳಿಯವರಾದ ಎನ್.ಹರೀಶ್ ಅವರ ತಂದೆ, ತಾಯಿ ಕುಟುಂಬಿಕರು ಬೆಂಗಳೂರಿನಲ್ಲಿ ವಾಸವಿದ್ದು, ಗುರುವಾರ ಬೆಳಗ್ಗೆ ಚೆನ್ನೈ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ. ಹರೀಶ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದರು ಎಂದು ಟಿವಿ ವಾಹಿನಿಗೆ ಕುಟುಂಬದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಅವಿವಾಹಿತರಾಗಿರುವ ಹರೀಶ್ ಅವರಿಗೆ ಒಂದು ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ದಿನ ಮನೆಯವರಿಗೆಲ್ಲ ಬಟ್ಟೆ ತಂದುಕೊಟ್ಟಿದ್ದರು. ಮಾರ್ಚ್ನಲ್ಲಿ ಮದುವೆಗೆ ದಿನವೂ ನಿಗದಿಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವದವರಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚೆನ್ನೈಗೆ ವರ್ಗವಾಗುವ ಮುನ್ನ ರಾಮನಾಥಪುರಂ ಬಳಿಯ ಕಿಲಕಾರೈ ಮತ್ತು ಮಧುರೈ ಸಮೀಪದ ತಲ್ಲಕುಲಂನಲ್ಲಿ ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಖಡಕ್ ಅಧಿಕಾರಿಯಾಗಿ ಭ್ರಷ್ಟಾಚಾರದ ವಿರುದ್ಧ ಸೆಟೆದು ನಿಂತು ಹೆಸರು ಮಾಡಿದ್ದರು. ಹರೀಶ್ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಚೆನ್ನೈ: ಕನ್ನಡಿಗ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ನೆನಪು ಮಾಸುವ ಮುನ್ನವೇ ಚೆನ್ನೈನಲ್ಲಿ ಕನ್ನಡಿಗ ಐಪಿಎಸ್ ಅಧಿಕಾರಿ ಎನ್.ಹರೀಶ್ ಸಂಶಯಾಸ್ಪದ ಸಾವು ಕಂಡಿದ್ದಾರೆ.