- ಮಹಾಂತೇಶ ಬಹಾದುಲೆ
ಇವರು ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರಲ್ಲ. ಲಕ್ಷಗಟ್ಟಲೇ ಸಂಬಳ ಎಣಿಸುತ್ತಿದ್ದರೂ, ಕೆಲಸದ ಒತ್ತಡದಲ್ಲಿ ಒದ್ದಾಡಿ ಹೋಗುವ ಸಾಫ್ಟ್ವೇರ್ ಎಂಜಿನಿಯರ್ನೊಬ್ಬ. ತಾನೇ ಮಾಡಿಕೊಂಡ ಎಡವಟ್ಟುಗಳಿಂದ ಬದುಕಿನಲ್ಲಿ ನಿರಾಶೆ ಹೊಂದಿದ ಹುಡುಗ ಮತ್ತೊಬ್ಬ. ಹೆಂಡತಿ ಸತ್ತ ಮೇಲೆ ಒಂಟಿತನ ಮರೆಯಲು ಬರುವ ವಿದುರ ಲಕ್ಷಾಧೀಶ ಇನ್ನೊಬ್ಬ. ಅವನ ಎದುರಿನ ಟೇಬಲ್ ಮುಂದೆ ಗೆಳೆಯರೊಂದಿಗೆ ಕುಳಿತ ಆತನ ಮಗ. ಎನ್ಜಿಒ ಹೆಸರಿನಲ್ಲಿ ತನ್ನ ಸ್ವಾರ್ಥ ಸಾಧಿಸುವ ಮಹಿಳೆ...
ಹೀಗೆ ಇದೊಂದು ರೀತಿ ಬಾರು ಮೇಜಿನ ಪರಿಷತ್ತು. ಪರಪಂಚ ಅನ್ನೋದು ಆ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಹೆಸರು. ಎಲ್ಲರೂ ಕಷ್ಟಗಳನ್ನು ಮರೆಯೋಕೆ ಬಾರಿನ ಮೊರೆ ಹೋದವರೆ. ಇಂಥವರಿಗೆ ವೈನ್ ಸರ್ವ್ ಮಾಡೋಕೊಬ್ಬ ಸೀನ (ದಿಗಂತ್). ಈತ ಕೈಯಾರೆ ನೀಡುವ 'ಮಧು' ಹೀರಲು ಬರುವ ಬಾರ್ ಗರ್ಲ್ ಕಸ್ತೂರಿ (ರಾಗಿಣಿ). ಇವರೆಲ್ಲರ ಸಮಾಗಮದಲ್ಲಿ ಅವರವರ ಪ್ರಪಂಚದ ಪರಿಚಯ.
ಬದುಕಿನ ವಾಸ್ತವಗಳನ್ನು ಹೇಳಲು ನಿರ್ದೇಶಕ ಕ್ರಿಷ್ ಜೋಶಿ ಬಾರ್ ಅನ್ನು ಆಯ್ದುಕೊಂಡಿದ್ದಾರೆ. ಮನರಂಜನೆಯ ಮೂಲಕ ಹಾಗೂ ಲೈಟ್ ಆದ ಧಾಟಿಯಲ್ಲಿ ಕಟು ಸತ್ಯಗಳನ್ನು ಅರಹುವ ಕೆಲಸ ಮಾಡಿದ್ದಾರೆ. ಕಲ್ಪನೆಯೇನೊ ತುಂಬ ಚೆನ್ನಾಗಿದೆ. ಪ್ರಯತ್ನವೂ ಒಪ್ಪಿಕೊಳ್ಳುವಂಥದ್ದೆ. ಆದರೆ ಮೊದಲರ್ಧದಲ್ಲಿ ಪದೇ ಪದೇ ಬಾರ್ನ ದೃಶ್ಯಗಳು ಹಾಗೂ ಒಂದೇ ಸವನೇ ಜಡಿಮಳೆಯಂತೆ ಸುರಿಯುವ ಸಂಭಾಷಣೆಗಳಿಂದಾಗಿ ಬಾರ್ ಎಂದರೆ ಬೋರೋ ಬೋರು ಎಂದು ಪ್ರೇಕ್ಷಕ ಉಸುರಿದರೆ ಅದು ಅವನ ತಪ್ಪಲ್ಲ.
ದ್ವಿತೀಯಾರ್ಧದಲ್ಲಿ ನೋಡುಗ ಕೊಂಚ ನಿರಾಳ. ಅದಕ್ಕೆ ಕಾರಣ ಬಾರ್ ಸೀನ. ಅಲ್ಲಿಗೆ ಬರುವವರ ಕಷ್ಟಗಳಿಗೆ ತನ್ನದೇ ಆದ ಧಾಟಿಯಲ್ಲಿ ಪರಿಹಾರ ಸೂಚಿಸುತ್ತಾನೆ. ಅದೂ ತುಂಬ ಸರಳವಾಗಿ ಹಾಗೂ ಪ್ರ್ಯಾಕ್ಟಿಕಲ್ ಆಗಿ. ಇಲ್ಲಿ ದಿಗಂತ್ ಅತ್ಯಂತ ಸಹಜವಾಗಿ ಅಭಿನಯಿಸಿ ಗಮನ ಸೆಳೆಯುತ್ತಾರೆ. ಇವರ ಲವಲವಿಕೆಯೇ ಚಿತ್ರದ ಪ್ಲಸ್ ಪಾಯಿಂಟ್. ರಾಗಿಣಿ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಹುಚ್ಚ ವೆಂಕಟ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದು, ಅವರೇ ಧ್ವನಿಯಾದ 'ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ...' ಎಂಬ ಹಾಡು ಸಿನಿಮಾಗೆ ಒಂದಿಷ್ಟು ಪೌಷ್ಟಿಕಾಂಶ ತುಂಬಿದೆ. ಶ್ರೀಮಂತನ ಅಳಿಯನಾದರೂ ಕಷ್ಟ ತಪ್ಪಿದ್ದಲ್ಲ ಎಂದು ಪತ್ರಕರ್ತ ಶ್ಯಾಮ್ ಪ್ರಸಾದ್ ಕಡ್ಡಿಮುರಿದಂತೆ ಹೇಳುವ ದೃಶ್ಯಗಳು ಆಪ್ತ ಎನಿಸುತ್ತವೆ.
ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡದಿದ್ದರೂ, ಇದು ಯೋಗರಾಜ್ ಮೂವಿಸ್ನಡಿ ನಿರ್ಮಾಣ ಆಗಿರುವುದರಿಂದ ಅವರ ಛಾಪು, ಸ್ಟೈಲ್ ಪ್ರತಿ ದೃಶ್ಯದಲ್ಲೂ ಎದ್ದುಕಾಣುತ್ತದೆ. ಇವರು ಈ ಮೊದಲು 'ಬಾರು ಗಂಡಸರ ತವರು...' ಎಂದು ಗೀತೆಯೊಂದರಲ್ಲಿ ಹೇಳಿದ್ದರು. ಆದರೆ ಇಲ್ಲಿನ ಸನ್ನಿವೇಶಗಳಲ್ಲಿ ಅದು ಅಪ್ಡೇಟ್ ಆಗಿ , 'ಗಂಡಸರಷ್ಟೇ ಅಲ್ಲ, ಹೆಂಗಸರ ತವರೂ' ಎಂಬಂತಾಗಿದೆ. ಏಕೆಂದರೆ ಇಲ್ಲಿ ಮಹಿಳಾಮಣಿಗಳ ಹಾಜರಾತಿಯೂ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ವೈನ್ ಶಾಪ್ ಎಂಬುದು ವೈನಾಗಿ ವೇದಾಂತ ಹೇಳುವವರ ಅಡ್ಡಾ' ಅಂತಲೂ ಡಿಫೈನ್ ಮಾಡಬಹುದು.
ಇಲ್ಲಿ ಚರ್ಚೆಯಾಗುವುದೆಲ್ಲವೂ ಎಲ್ಲರ ಮಾತು, ಎಲ್ಲರೊಳಗಿನ ಮಾತು. ಆದರೆ ಎಮೋಷನ್ಸ್ ಅಂತ ಬಂದಾಗ ಆ ಸನ್ನಿವೇಶಗಳು ಎಲ್ಲರೊಳಗಿನ ಭಾವನೆಗಳನ್ನು ಮುಟ್ಟುವಲ್ಲಿ ಸಫಲವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಸಿನಿಮಾ ಆರಂಭವಾದಾಗಿನಿಂದ ಮುಗಿಯುವತನಕ ಮಾತು, ಮಾತು, ಮಾತು. ಈ ಮಾತಿನ ಭರಾಟೆಯಲ್ಲಿ ಭಾವನೆಗಳು ಗೌಣವಾದಂತೆ ಅನಿಸುತ್ತವೆ. ಅಷ್ಟೇ ಅಲ್ಲ, ಈ ಮಾತು ಅಭಿನಯಕ್ಕೆ ಕೊಡಬೇಕಿದ್ದ ಅವಕಾಶವನ್ನೂ ಕಸಿದುಕೊಂಡಂತಿದೆ. ಇನ್ನು ಸಂಗೀತದಲ್ಲಿ ಒಂದೆರಡು ಹಾಡುಗಳು ಇಷ್ಟವಾಗುತ್ತವೆ. ಬಹುತೇಕ ಚಿತ್ರೀಕರಣ ಬಾರ್ನಲ್ಲೇ ಆಗಿದ್ದರಿಂದ ಹೊರಾಂಗಣದ ಸುಂದರ ದೃಶ್ಯಗಳಿಗೆ ಅವಕಾಶ ಇಲ್ಲ. ಹೀಗಾಗಿ ಕ್ಯಾಮೆರಾ ಕೈಚಳಕವನ್ನೂ ನಿರೀಕ್ಷಿಸಲಾಗುವುದಿಲ್ಲ. ಆದರೆ ಇಡೀ ಪ್ರಯತ್ನವನ್ನಂತೂ ಮೆಚ್ಚಬಹುದು. ಆದರೆ ಅಹುದಹುದು ಎನ್ನಬಹುದೇ ಎಂಬುದು ಅವರವರ ಭಾವಕ್ಕೆ ಬಿಟ್ಟಿದ್ದು.
ಕನ್ನಡ ಚಿತ್ರ: ಪರಪಂಚ