-ಮಹಾಬಲೇಶ್ವರ ಕಲ್ಕಣಿ
ನಗುವುದಕ್ಕೂ ಒಂದು ಕಾರಣಬೇಕು. ಕಾರಣವಿಲ್ಲದೆ ನಕ್ಕರೆ ಅದು ಉದ್ದೇಶಪೂರ್ವಕ ನಗುವಾಗುತ್ತೆ. ಅದು ಮನಸ್ಸಿಗೆ ಖುಷಿ ನೀಡುವುದಿಲ್ಲ. ಹೀಗಾಗಿ ನಗಿಸಲೇಬೇಕೆಂದು ಹಠ ತೊಟ್ಟು ಮಾಡಿದಂತಿದೆ ತರ್ಲೆ ನನ್ಮಕ್ಳು ಸಿನಿಮಾ. ನಿರ್ದೇಶಕ ರಾಕೇಶ್ ಉದ್ದೇಶಪೂರ್ವಕ ನಗಿಸಲು ಹೋಗಿ ಎಡವಿದ್ದಾರೆ. ಹೀಗಾಗಿ ನಿರ್ದೇಶಕರು ನಿರೂಪಣೆ, ಸಂಕಲನ, ಡೈಲಾಗ್ ಎಲ್ಲದರಲ್ಲೂ ಇನ್ನಷ್ಟು ಕೃಷಿ ಮಾಡಬೇಕಿದೆ. ಕತೆಯ ಜೊತೆಜೊತೆಗೆ ನಗುವೂ ಸೇರಿಕೊಂಡಿರಬೇಕು. ಕತೆಯೇ ಬೇರೆ ನಗುವೇ ಬೇರೆಯಾದರೆ ಅದು ಅರ್ಥವಿಲ್ಲದ ರೋದನವಾಗುತ್ತದೆ. ಇಲ್ಲಿಯೂ ಅದೇ ಆಗಿದೆ. ಈ ನಡುವೆ ಸಂಗೀತ ನಿರ್ದೇಶಕರ ಜಾಣ್ಮೆಯಿಂದಾಗಿ ನಿರ್ದೇಶನವು ಮುಗ್ಗರಿಸಿ ಬೀಳದಂತೆ ಸಂಗೀತವು ತಡೆದಿದೆ. ಸಿನಿಮಾದ ಬಹುತೇಕ ಹಾಡುಗಳು ಮತ್ತೊಮ್ಮೆ ಕೇಳಬೇಕು ಅನಿಸುತ್ತವೆ. ಗೀತ ರಚನೆಯೂ ಸೊಗಸಾಗಿದೆ.
ನಾಗಶೇಖರ್ ಮತ್ತು ಯತಿರಾಜ್ ಸ್ನೇಹಿತರು. ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ಒಬ್ಬ ಟಿವಿ ನಿರೂಪಕಿಯನ್ನು ( ಅಂಜನಾ ದೇಶಪಾಂಡೆ), ಇನ್ನೊಬ್ಬ ಸಿನಿಮಾ ಹೀರೋಯಿನ್ನ್ನು (ಶುಭ ಪೂಂಜಾ) ಪ್ರೀತಿಸುತ್ತಾನೆ. ಇಬ್ಬರ ತರ್ಲೆ ಕೆಲಸಕ್ಕೆ ಬೇಸತ್ತ ಹುಡುಗಿಯರು ಇವರ ಪ್ರಪೋಸಲ್ ಒಪ್ಪಿಕೊಳ್ಳುವುದಿಲ್ಲ. ಆಗ ಶ್ರೀನಗರ ಕಿಟ್ಟಿ ಒಂದು ಉಪಾಯ ಮಾಡುತ್ತಾರೆ. ಪ್ರೀತಿಸಿದ ಹುಡುಗಿಯರು ಸಿಗೋದಕ್ಕೆ ಹೊಸದೊಂದು ಕಾರ್ಯತಂತ್ರ ರೂಪಿಸುತ್ತಾರೆ. ಆ ಹೊಸ ಕಾರ್ಯತಂತ್ರ ಏನು, ಆ ಮೂಲಕ ಹೇಗೆ ಪ್ರಪೋಸಲ್ ಒಪ್ಪುವಂತೆ ಮಾಡುತ್ತಾರೆ ಎನ್ನುವುದೇ ಚಿತ್ರದ ಕಥೆ. ನಾಯಕ ನಾಗಶೇಖರ್ ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದು, ಸ್ಯಾಂಡಲ್ವುಡ್ನ ಕೆಲವು ನಿರ್ದೇಶಕರಿಗೆ ಹಿಂಬಾಗಿಲಿನಿಂದ ಜಾಡಿಸಿದ್ದಾರೆ. ಚಿತ್ರ ಆರಂಭದಿಂದ ಕೊನೆವರೆಗೂ ಆಗೊಂದು ಈಗೊಂದು ಡಬಲ್ ಮೀನಿಂಗ್ ಮಾತಿನಿಂದ ನಗಿಸುತ್ತಲೇ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ನಾಗಶೇಖರ್. ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ ಯತಿರಾಜ್ (ಜಗ್ಗೇಶ್ ಪುತ್ರ) ನಟನೆಯಲ್ಲಿ ಇನ್ನೂ ಪಳಗಬೇಕಿದೆ. ಶುಭಾ ಪೂಂಜಾ ಸಖತ್ ಹಾಟ್ಆಗಿ ಕಾಣಿಸ್ಕೊಂಡಿದ್ದಾರೆ. ಹೊಸ ಪರಿಚಯದ ಅಂಜನಾ ದೇಶಪಾಂಡೆ ತಕ್ಕಮಟ್ಟಿಗೆ ಸೈ ಎನಿಸಿಕೊಳ್ಳುತ್ತಾರೆ.
ಜೆರಾಲ್ಡ್ ಕ್ಯಾಮೆರಾ ಕಣ್ಣಲ್ಲಿ ಹೊಸತೇನೂ ಕಾಣುವುದಿಲ್ಲ. ಚಿತ್ರದಲ್ಲಿ ಇರುವುದು ಕೇವಲ ಒಂದು ಫೈಟ್ ಇದಕ್ಕೆ ಸಾಹಸ ನಿರ್ದೇಶನದ ಅನಿವಾರ್ಯ ಇರಲಿಲ್ಲ. ಒಟ್ಟಾರೆ ಚಿತ್ರವು ಸಂಗೀತ ಪ್ರಿಯರಿಗೆ ಇಷ್ಟ ವಾಗಿ ಹಾಸ್ಯ ಪ್ರಿಯರಿಗೆ ಸ್ವಲ್ಪ ಸಂಕಷ್ಟದ ನಗು ತರಿಸುತ್ತದೆ.
ಕನ್ನಡ ಚಿತ್ರ : ತರ್ಲೆ ನನ್ಮಕ್ಳು