Quantcast
Channel: VijayKarnataka
Viewing all articles
Browse latest Browse all 6795

ರಾಜಪಥದಲಿ ದೇಶದ ಧೀಃಶಕ್ತಿ!

$
0
0

ಮಂಜಿನ ಹೊದಿಕೆಯಡಿ ಗಣತಂತ್ರ ವೈಭವ ಕಣ್ತುಂಬಿಕೊಂಡ ಹೊಲಾಂಡ್

ಹೊಸದಿಲ್ಲಿ : ಗಣರಾಜ್ಯವೆಂಬ ಕಿರೀಟ ಹೊತ್ತಿರುವ ಭಾರತದ ನಿಜವಾದ ಮಿಲಿಟರಿ ಶಕ್ತಿ ಎಂತಹುದು ಮತ್ತು ಇಡೀ ರಾಷ್ಟ್ರದ ಸಂಸ್ಕೃತಿ, ಪರಂಪರೆ ಎಷ್ಟು ಶಶಕ್ತವಾಗಿದೆ ಎಂಬುದಕ್ಕೆ ಮಂಗಳವಾರ ರಾಜಪಥ ಸಾಕ್ಷಿಯಾಯಿತು. ಈ ವೈವಿಧ್ಯ, ವೈಭವವನ್ನು ಕಂಡು ವಿಶೇಷ ಅತಿಥಿ ಹೊಲಾಂಡ್ ನಿಜಕ್ಕೂ ಬೆರಗಾದರು.

ದಿಲ್ಲಿಯ ಆಗಸ ಸಂಪೂರ್ಣ ಮಂಜಿನಿಂದ ಆವರಿಸಿದ್ದ, ಮೈ ನಡುಗಿಸುವ ಚುಮು ಚುಮು ಚಳಿಯ ವಾತಾವರಣದ ನಡುವೆ ದಿಲ್ಲಿಯ ರಾಜಪಥದಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಪರೇಡ್ ದೇಶದ ಸೇನಾಬಲ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಏಳು ಸುತ್ತಿನ ಕೋಟೆಯಂತೆ ಅತ್ಯದ್ಭುತ ಭದ್ರತಾ ವ್ಯವಸ್ಥೆಯನ್ನು ಹೊಂದಿದ್ದ ದಿಲ್ಲಿಯಲ್ಲಿ ಸಶಸ್ತ್ರಪಡೆಗಳ ಶಕ್ತಿ ಪ್ರದರ್ಶನ ಅನಾವರಣಗೊಂಡರೆ, ಮೊದಲ ಬಾರಿಗೆ ಸಮಾರಂಭದ ಮುಖ್ಯ ಅತಿಥಿ ಪ್ರತಿನಿಧಿಸುವ ಅನ್ಯ ದೇಶದ ಸೇನಾ ತುಕಡಿ ಪಾಲ್ಗೊಂಡು ಹೊಸ ಇತಿಹಾಸ ಸೃಷ್ಟಿಯಾಯಿತು. ವಿವಿಧತೆ ಏಕತೆ ಸಾರುವ ಟ್ಯಾಬೊಗಳ ಪ್ರದರ್ಶನದೊಂದಿಗೆ ದೇಶದ ಒಕ್ಕೂಟ ವ್ಯವಸ್ಥೆಯ ಮಂತ್ರ ಜಪಿಸಲಾಯಿತು. ಗಣತಂತ್ರ ಭಾರತದ ವೈಭವವನ್ನು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಕಣ್ತುಂಬಿಕೊಂಡರು.

ತರಹೇವಾರಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಧ್ವಜಾರೋಹಣ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಫ್ರಾಂಕೋಯಿಸ್ ಹೊಲಾಂಡ್ ಸೇರಿದಂತೆ ಮೊದಲಾದ ಗಣ್ಯರು ಪಥಸಂಚಲನದಲ್ಲಿ ಪಾಲ್ಗೊಂಡು ಯೋಧರಿಂದ ಗೌರವ ವಂದನೆ ಸ್ವೀಕರಿಸಿದರು. ರಾಜಪಥಕ್ಕೆ ಆಗಮಿಸುವ ಮುನ್ನ ಮೋದಿ ಅವರು, 'ಅಮರ್ ಜವಾನ್' ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಬ್ರಹ್ಮೊಸ್, ಆಕಾಶ್ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ವಾಯುಪಡೆ, ನೌಕಾಪಡೆ, ಭೂಸೇನಾ ಪಡೆಗಳ 61ನೇ ಅಶ್ವದಳ, ಪ್ಯಾರಚೂಟ್ ರೆಜಿಮೆಂಟ್, ಕಾರ್ಪ್ಸ್ ಆಫ್ ಸಿಗ್ನಲ್ಸ್, ರಜಪೂತ್ ರೆಜಿಮೆಂಟ್, ಘರ್‌ವಾಲ್ ರೈಫಲ್ಸ್, ಅಸ್ಸಾಂ ರೆಜಿಮೆಂಟ್, 11 ಗೋರ್ಖಾ ರೈಫಲ್ಸ್ ಮತ್ತು ರೇಮೌಂಟ್ ವೆಟರ್ನರಿ ಕಾರ್ಪ್ಸ್ ಡಾಗ್ ಸ್ಕ್ಯಾಡ್ ತುಕಡಿಗಳ ಆಕರ್ಷಕ ಪಥಸಂಚಲನವು ಜನರ ಗಮನ ಸೆಳೆದವು. ಟಿ-90 ಭೀಷ್ಮ ಟ್ಯಾಂಕ್, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ, ಅಕ್ಷಯ್ ವೆಪನ್ ಸಿಸ್ಟಮ್, ಇಂಟಿಗ್ರೇಡೆಟ್ ಕಮೂನಿಕೇಷನ್ ಎಲೆಕ್ಟ್ರಾನಿಕ್ಸ್ ವಾರ್‌ಫೇರ್ ಸಿಸ್ಟಮ್‌ನ ಶಕ್ತಿ ಪ್ರದರ್ಶನ ನಡೆಯಿತು. ಮೊಟಾರು ಬೈಕ್ ಸಾಹಸಗಳು ಗಮನ ಸೆಳೆದವು. ಕರಾವಳಿ ಕಾವಲು ಪಡೆ, ಸಿಆರ್‌ಪಿಎಫ್, ಎನ್‌ಸಿಸಿ, ಸ್ಕೌಟ್ಸ್, ಗೈಡ್ಸ್ ಹಾಗೂ ಶೌರ್ಯ ಪ್ರಶಸ್ತಿ ವಿಜೇತ ಮಕ್ಕಳು ಪೆರೇಡ್‌ನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಒಂಟೆಗಳ ಗತ್ತು:



66 ವರ್ಷಗಳ ಇತಿಹಾಸ ಹೊಂದಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗಡಿ ಭದ್ರತಾ ಪಡೆ ರೆಜಿಮೆಂಟ್ ಪಾಲ್ಗೊಳ್ಳುವುದಿಲ್ಲ ಎಂಬ ವರದಿ ಸುಳ್ಳಾಗಿತು. 56 ಒಂಟೆಗಳು ಶಿಸ್ತಿನ ಸಿಪಾಯಿಂತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಬಾನಂಗಳದಲ್ಲಿ ಸಾಹಸ:

ಮಿಗ್, ಸಿ-130 ಜೆ ಸೂಪರ್ ಹರ್ಕ್ಯೂಲಸ್ ವಿಮಾನ, ಸಿ-17 ಗ್ಲೋಬ್ ಮಾಸ್ಟರ್, ಸುಖೋಯ್ 30 ಮಿಗ್-29 ವಿಮಾನಗಳಿಂದ ಬಾನಂಗಳದಲ್ಲಿ ಮೈನವಿರೇಳಿಸುವ ಸಾಹಸ ಪ್ರದರ್ಶನಗಳು ನಡೆದವು. ಇದರೊಂದಿಗೆ ವರ್ಣರಂಜಿತ ರಾಷ್ಟ್ರೀಯ ಹಬ್ಬಕ್ಕೆ ತೆರೆಬಿದ್ದಿತು.

23 ಸ್ತಬ್ಧಚಿತ್ರ:

ಕರ್ನಾಟಕದ ಕಾಫಿ ಕುರಿತ ಸ್ತಬ್ಧಚಿತ್ರ ಸೇರಿದಂತೆ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 17 ಸ್ತಬ್ಧ ಚಿತ್ರಗಳು ದೇಶದ ಸಾಂಸ್ಕೃತಿಕ ಹಾಗೂ ಜೀವನ ಶೈಲಿಯನ್ನು ಕಟ್ಟಿಕೊಟ್ಟಿತು. ಇದೇ ಮೊದಲಬಾರಿಗೆ ನಿವೃತ್ತ ಯೋಧರ ಸ್ತಬ್ಧಚಿತ್ರ ಸಹ ಪಾಲ್ಗೊಂಡಿತ್ತು. ಇದರ ಜತೆಗೆ ವಿವಿಧ ಇಲಾಖೆಗಳಿಂದ 6 ಟ್ಯಾಬ್ಲೊಗಳೂ ಕಾಣಿಸಿಕೊಂಡವು.

**

ಹೊಸ ಇತಿಹಾಸ ಬರೆದ ಫ್ರೆಂಚ್ ಯೋಧರು

ದಿಲ್ಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನ್ಯ ದೇಶದ ಸೇನಾ ತುಕಡಿ ಪಾಲ್ಗೊಂಡಿದ್ದು ಇದೇ ಮೊದಲು. ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಸರಕಾರ ಈ ಬಾರಿ ಪಥಸಂಚಲನದಲ್ಲಿ ಅವರು ಪ್ರತಿನಿಧಿಸುವ ದೇಶದ ಸೇನೆಗೆ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಅದರಂತೆ ಫ್ರಾನ್ಸ್ ಸೇನೆಯ 35ನೇ ಇನ್‌ಫೆಂಟ್ರಿ ರೆಜಿಮೆಂಟ್‌ನ 76 ಯೋಧರನ್ನೊಳಗೊಂಡ ತುಕಡಿಯು ಆಕರ್ಷಕ ಪರೇಡ್ ನಡೆಸಿ ನೋಡುಗರ ಚಪ್ಪಾಳೆ ಗಿಟ್ಟಿಸಿತು.



ಲೆಫ್ಟಿನೆಂಟ್ ಕರ್ನಲ್ ಪೌಲ್ ಬ್ಯುರಿ ಅವರು ತುಕಡಿಯನ್ನು ಮುನ್ನಡೆಸಿದರು. ಈ ತುಕಡಿಗೆ ಫ್ರಾನ್ಸ್‌ನ 'ದಿ ಮ್ಯೂಸಿಕ್ ಆಫ್ ದಿ ಇನ್‌ಫೆಂಟ್ರಿ' ಬ್ಯಾಂಡ್‌ನ 48 ಯೋಧರು ವಾದನ ನುಡಿಸುತ್ತಾ ಸಾಥ್ ನೀಡಿದರು. 1604ರಲ್ಲಿಯೇ ಜನ್ಮ ತೆಳೆದಿರುವ 35ನೇ ಇನ್‌ಫೆಂಟ್ರಿ ರೆಜಿಮೆಂಟ್ ಫ್ರಾನ್ಸ್ ಸೇನೆಯ ಅತ್ಯಂತ ಹಳೆಯ ರೆಜಿಮೆಂಟ್ ಎಂದು ಗುರುತಿಸಿಕೊಂಡಿದೆ. ಅಫಘಾನಿಸ್ತಾನ, ಅಲ್ಜೀರಿಯಾ, ಆಫ್ರಿಕಾ, ಇರಾಕ್‌ನಲ್ಲಿ ಸಲ್ಲಿಸಿರುವ ಈ ರೆಜಿಮೆಂಟ್‌ಗೆ ಇದುವರೆಗೂ 12 ಗೌರವಗಳು ಸಂದಿವೆ.

**

ಕರ್ನಾಟಕದ ಕಾಫಿ ಘಮಲು

ದಿಲ್ಲಿಯ ರಾಜಪಥದಲ್ಲಿ ನಡೆಯುವ ಪರೇಡ್‌ನ ಮತ್ತೊಂದು ಆಕರ್ಷಣೆ ಸ್ತಬ್ಧಚಿತ್ರಗಳು. ಒಕ್ಕೂಟ ವ್ಯವಸ್ಥೆಯೇ ದೇಶದ ಅಂತಃಶಕ್ತಿ ಎಂಬ ಮಂತ್ರ ಈ ಟ್ಯಾಬ್ಲೊಗಳ ಹಿಂದಿದೆ. ವಿವಿಧ ರಾಜ್ಯ ಹಾಗೂ ಐದು ಕೇಂದ್ರಾಡಳಿತ ಪ್ರದೇಶಗಳು 17 ಬಗೆಯ ಸ್ತಬ್ಧ ಚಿತ್ರಗಳೊಂದಿಗೆ ತಮ್ಮ ಸಂಸ್ಕೃತಿ ಪರಂಪರೆಯನ್ನು ಬಿಂಬಿಸಿದರೆ, ಕರ್ನಾಟಕವು ಕಾಫಿನಾಡಿನ ಘಮಲು ಪಸರಿಸಿತ್ತು. ಚುಮು ಚುಮು ಚಳಿಗೆ ಮೈಯೊಡ್ಡಿ ಕುಳಿತಿದ್ದ ಲಕ್ಷಾಂತರ ದೇಶಭಕ್ತರಿಗೆ ಈ ಸ್ತಬ್ಧ ಚಿತ್ರ ಅಪ್ಪಟ ಬಿಸಿಬಿಸಿ ಕಾಫಿ ನೀಡಿ ಮೈ ಬೆಚ್ಚಗಾಗಿಸಿದ ಅನುಭವ ನೀಡಿತು.



ಕಾಫಿ ಬೀಜಗಳ ಒಕ್ಕಣೆ, ಸಂಸ್ಕರಣೆಯ ಕಾರ್ಯವನ್ನು ಇಲ್ಲಿ ಪ್ರತಿಬಿಂಬಿಸಲಾಗಿತ್ತು. ಜತೆಗೆ ಬಿಸಿಬಿಸಿ ಕಾಫಿ ತಯಾರಿಸಿ ಲೋಟದಿಂದ ಸುರಿಯುತ್ತಿರುವಂತೆ, ಅದರಿಂದ ಹಬೆ ಹೊರಹೊಮ್ಮುತ್ತಿರುವಂತೆ ಸ್ತಬ್ಧಚಿತ್ರವನ್ನು ಸಿದ್ಧಪಡಿಸಲಾಗಿತ್ತು. ಈ ಮೂಲಕ ಕರ್ನಾಟಕ ದಿಲ್ಲಿಯಲ್ಲಿ ಕಾಫಿಯ ಘಮಲನ್ನು ಪಸರಿಸಿ ಗಮನ ಸೆಳೆಯಿತು.

ಇನ್ನುಳಿದಂತೆ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ, ನವೀಕೃತ ಇಂಧನ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ, ಪಂಚಾಯತ್ ರಾಜ್, ಚುನಾವಣಾ ಆಯೋಗದ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಆದರೆ ಸತತ ಮೂರನೇ ಬಾರಿಗೆ ಕೇಂದ್ರಾಡಳಿತ ಪ್ರದೇಶ ದಿಲ್ಲಿಯಿಂದ ಸ್ತಬ್ಧಚಿತ್ರವು ಪರೇಡ್‌ನಲ್ಲಿ ಕಂಡುಬರಲಿಲ್ಲ.

**

ಜಂಗ್-ಕೇಜ್ರಿ ಮುಖಾಬಿಲೆ!

ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಿನ ಸಮರ ದೇಶಕ್ಕೆಲ್ಲಾ ಗೊತ್ತಿರುವ ವಿಚಾರ. ಕಳೆದ ವರ್ಷ ಆಪ್ ಸರಕಾರ ದಿಲ್ಲಿಯ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಅಧಿಕಾರ ವ್ಯಾಪ್ತಿ ವಿಚಾರದಲ್ಲಿ ನಜೀಬ್ ಮತ್ತು ಕೇಜ್ರಿವಾಲ್ ನಡುವೆ ಒಂದಿಲ್ಲೊಂದು ಜಗಳ ನಡೆಯುತ್ತಲೇ ಇದೆ. ಹೀಗಿದ್ದೂ, ಮಂಗಳವಾರ ದಿಲ್ಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಅಚ್ಚರಿ ಮೂಡಿಸಿದರು. ಇವರ ಜತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್ ಕೂಡ ಹಾಜರಿದ್ದರು.

ದಿಲ್ಲಿ ಪೊಲೀಸರ ಮೇಲಿನ ನಿಯಂತ್ರಣ ಮತ್ತು ಭ್ರಷ್ಟಾಚಾರ ನಿರ್ಮೂಲನ ಶಾಖೆಯ ಮೇಲಿನ ಅಧಿಕಾರದ ವಿಚಾರದಲ್ಲಿ ಇಬ್ಬರ ಜಗಳ ತಾರಕಕ್ಕೇರಿತ್ತು. ಕಳೆದ ಬಾರಿ ಬರಾಕ್ ಒಬಾಮ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾಗ ಗಣರಾಜ್ಯೋತ್ಸವಕ್ಕೆ ನನ್ನನ್ನು ಕರೆದೇ ಇಲ್ಲ ಎಂದು ಕೇಜ್ರಿವಾಲ್ ಗದ್ದಲ ಎಬ್ಬಿಸಿದ್ದರು.
**

ಪರೇಡ್‌ನಲ್ಲಿ ಸೆಳೆದ ಚಿತ್ರಗಳು

ಕನ್ನಡಿಗ ಯೋಧನಿಂದ ಗೌರವ ವಂದನೆ

ರಾಷ್ಟ್ರಪತಿ ಅಂಗರಕ್ಷಕ ದಳದ ಮುಖ್ಯಸ್ಥ ಕನ್ನಡಿಗ ಕೊಡಗಿನ ಕರ್ನಲ್ ಬೊಮ್ಮಂಡ ಧೀರಜ್ ಚಂಗಪ್ಪ ಈ ಬಾರಿಯ ಆಕರ್ಷಣೆಯ ಕೇಂದ್ರ ಬಿಂದು. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಚಂಗಪ್ಪ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಗೌರವ ವಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಪರೇಡ್ 90 ನಿಮಿಷಕ್ಕೆ ಸೀಮಿತ

ರಾಜಪಥದಲ್ಲಿ ಈ ವರ್ಷ ನಡೆದ ಸೇನಾ ಪರೇಡ್‌ನ ಸಮಯದಲ್ಲಿ 25 ನಿಮಿಷವನ್ನು ಕಡಿತಗೊಳಿಸಲಾಗಿತ್ತು. ಸಾಮಾನ್ಯವಾಗಿ ಪ್ರತಿವರ್ಷ ಪರೇಡ್ ಅವಧಿ 115 ನಿಮಿಷ. ಆದರೆ ಈ ಬಾರಿ ಅದನ್ನು 90 ನಿಮಿಷಕ್ಕೆ ಸೀಮಿತಗೊಳಿಸಲಾಗಿತ್ತು.

26 ವರ್ಷಗಳ ಬಳಿಕ ಶ್ವಾನಪಡೆ

26 ವರ್ಷಗಳ ಸುದೀರ್ಘ ಅವಧಿಯ ನಂತರ ಭಾರತೀಯ ಸೇನೆಯ ಶ್ವಾನ ದಳವು ಈ ಬಾರಿಯ ಪಥಸಂಚಲನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಲ್ಯಾಬ್ರಡೋರ್ಸ್‌ ಮತ್ತು ಜರ್ಮನ್ ಶೆಫರ್ಡ್ ತಳಿಯ ಶ್ವಾನಗಳು ಶಿಸ್ತಿನ ಸಿಪಾಯಿಯಂತೆ ಯೋಧರ ಜತೆ ನಡಿಗೆ ಹಾಕಿದವು. ಸೇನೆಯ 'ರೇಮೌಂಟ್ ವೆಟರ್ನರಿ' ದಳದಲ್ಲಿ 1200 ಶ್ವಾನಗಳಿದ್ದು, ಇದರಲ್ಲಿ 36 ನಾಯಿಗಳಿಗೆ ಪರೇಡ್‌ನಲ್ಲಿ ಪಾಲ್ಗೊಳ್ಳುವ ತರಬೇತಿ ನೀಡಲಾಗಿತ್ತು. 1963 ಹಾಗೂ 1990ರ ಪರೇಡ್‌ನಲ್ಲಿ ಈ ದಳವು ಭಾಗವಹಿಸಿತ್ತು.

ನಿವೃತ್ತ ಯೋಧರ ಸ್ತಬ್ಧಚಿತ್ರ

ಪರೇಡ್‌ನಲ್ಲಿ ನಿವೃತ್ತ ಯೋಧರು ಪಾಲ್ಗೊಳ್ಳುವುದು ವಾಡಿಕೆ. ಆದರೆ ಈ ಬಾರಿ ವಿಶೇಷ ಎಂಬಂತೆ ನಿವೃತ್ತ ಯೋಧರನ್ನು ಗೌರವಿಸುವ ಉದ್ದೇಶದೊಂದಿಗೆ ರಚಿಸಲಾಗಿದ್ದ ವಿಶೇಷ ಸ್ತಬ್ಧಚಿತ್ರವು ನೋಡುಗರ ಕಣ್ಮನ ಸೆಳೆಯಿತು.

ಸ್ಲೈಡಿಂಗ್ ಗ್ಲಾಸ್ ರೂಫ್

ಕಳೆದ ಬಾರಿಯ ಸಮಾರಂಭದಲ್ಲಿ ತುಂತುರು ಮಳೆ ಸುರಿದಿತ್ತು. ಅಂದು ಪ್ರಧಾನಿ, ರಾಷ್ಟ್ರಪತಿ ಹಾಗೂ ಮುಖ್ಯ ಅತಿಥಿಯಾಗಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮಳೆಯಲ್ಲಿ ನಿಂತೇ ಪರೇಡ್ ವೀಕ್ಷಿಸಿದ್ದರು. ಈ ಬಾರಿ ಹೀಗಾದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅತಿಗಣ್ಯರು ಆಸೀನರಾಗಿದ್ದ ವೇದಿಕೆಗೆ ಯಾಂತ್ರೀಕೃತ ಸ್ಲೈಡಿಂಗ್ ಗ್ಲಾಸ್ ವ್ಯವಸ್ಥೆ ಮಾಡಲಾಗಿತ್ತು. ವಾಯುಪಡೆಯ ವೈಮಾನಿಕ ಪ್ರದರ್ಶನದ ವೇಳೆ ಗಾಜಿನ ಹೊದಿಕೆಯನ್ನು ಬದಿಗೆ ಸರಿಸಲಾಯಿತು.

ಅಶೋಕ ಚಕ್ರ ಪ್ರದಾನ

ಧೀರ ಹುತಾತ್ಮ ಯೋಧ ಲ್ಯಾನ್ಸ್‌ನಾಯಕ್ ಮೋಹನ್‌ನಾಥ್ ಗೋಸ್ವಾಮಿ ಅವರಿಗೆ ಮರಣೋತ್ತರವಾಗಿ 'ಅಶೋಕ ಚಕ್ರ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಗೋಸ್ವಾಮಿ ಪತ್ನಿ ಭಾವನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಆನೆ ಬಿಟ್ಟು ನಡೆದ ಶೌರ್ಯವಂತರು

ಹಿಂದಿನ ಪರೇಡ್‌ಗಳಲ್ಲಿ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳು ಆರಂಭದಲ್ಲಿಯೇ ಆನೆಯ ಮೇಲೆ ಸವಾರಿ ಬರುತ್ತಿದ್ದರು. ಈ ಸಲ ಇಂತಹ ಸಂಪ್ರದಾಯ ಬದಿಗಿರಿಸಿ, ಕೊನೆಯಲ್ಲಿ ಶಿಸ್ತಿನ ಸಿಪಾಯಿಯಂತೆ ಹೆಜ್ಜೆ ಹಾಕಿದರು.
**


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>