ಈ ಬಾರಿಯ ವೀಕೆಂಡ್ ವಿತ್ ರಮೇಶ್ ಷೋನ ಸಾಧಕರ ಸೀಟ್ನಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಕೂತಿದ್ದಾರೆ. ಹೀಗಾಗಿ ಸಾಧಕರ ಸೀಟು ಇನ್ನಷ್ಟು ಕಲರ್ಫುಲ್ಲಾಗಿದೆ. ಮೊದಲ ಸೀಸನ್ಲ್ಲೇ ಅಂಬರೀಷ್ ಬರುತ್ತಾರೆ ಅನ್ನುವ ಮಾತಿತ್ತು. ಎಲ್ಲರ ಬೇಡಿಕೆಯೂ ಅದೇ ಆಗಿತ್ತು. ಪ್ರೇಕ್ಷಕರ ಆಸೆಯನ್ನು ಎರಡನೇ ಸೀಸನ್ನಲ್ಲಿ ಈಡೇರಿಸಿದ್ದಾರೆ ರೆಬೆಲ್ಸ್ಟಾರ್.
ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಹಲವು ಕಾರಣಗಳಿಂದಾಗಿ ವಿಶೇಷವಾಗಿದೆ. ಇಲ್ಲಿ ಸಾಧಕರ ಸಾಧನೆಯನ್ನು ಸಿಲೆಬ್ರೇಟ್ ಮಾಡುವುದರ ಜತೆಗೆ, ಅವರ ಅಚೀವ್ಮೆಂಟ್ ಅನ್ನು ಇತರರಿಗೆ ಸ್ಫೂರ್ತಿಯಾಗುವಂತೆ ಕಟ್ಟಿಕೊಡುತ್ತಾರೆ. ಅಲ್ಲದೇ, ಸಾಧಕರ ಬಗ್ಗೆ ನಮಗೆ ಗೊತ್ತೇ ಇರದ ಅನೇಕ ಸಂಗತಿಗಳನ್ನು ತೋರಿಸಲಾಗುತ್ತದೆ. ಹೀಗಾಗಿ ಕನ್ನಡಿಗರ ಅಚ್ಚುಮೆಚ್ಚಿನ ಕಾರ್ಯಕ್ರಮ ಇದಾಗಿದೆ.
ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಅಂಬರೀಷ್ ಎಪಿಸೋಡ್ನಲ್ಲಿ ಈ ನಟನ ಇಡೀ ಕುಟುಂಬ ಭಾಗವಹಿಸಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಟೀವಿ ಷೋನಲ್ಲಿ ಅಂಬರೀಷ್ ಪುತ್ರ ಅಭಿಷೇಕ್ ಕಾಣಿಸಿಕೊಂಡಿದ್ದಾರೆ. ಅಂಬರೀಷ್ ಬಾಲ್ಯ, ಅವರ ತುಂಟತನ, ಕಾಲೇಜು ದಿನಗಳು, ಸಿನಿಮಾರಂಗಕ್ಕೆ ಬಂದಿದ್ದು, ರಾಜಕೀಯ... ಹೀಗೆ ಸಾಕಷ್ಟು ಸಂಗತಿಗಳಿಗೆ ಈ ವಾರದ ವೀಕೆಂಡ್ ಸಾಕ್ಷಿ ಆಗಲಿದೆ. ಜೊತೆಗೆ ಸರ್ಪ್ರೈಸ್ ಗೆಸ್ಟ್ ಕೂಡ ಇದ್ದಾರೆ.
'ವೀಕೆಂಡ್ ವಿತ್ ರಮೇಶ್ ನನ್ನ ನೆಚ್ಚಿನ ಕಾರ್ಯಕ್ರಮ. ನಮಗೇ ಗೊತ್ತಿಲ್ಲದ ಅನೇಕ ವಿಷಯಗಳನ್ನು ನಮಗೇ ತೋರಿಸುತ್ತಾರೆ. ಹೀಗಾಗಿ ಪ್ರತಿ ಕ್ಷಣವೂ ಥ್ರಿಲ್ ಅನಿಸುತ್ತಿದೆ. ನಮ್ಮ ಜೀವನಕ್ಕೆ ನಾವೇ ಎದುರಾದಾಗ ಆಗುವ ಸಂಭ್ರಮವನ್ನು ಮಾತಿನಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಈ ಕಾರಣದಿಂದಾಗಿಯೇ ಷೋ ಸಕ್ಸೆಸ್ ಆಗಿದೆ' ಅನ್ನುವುದು ಅಂಬರೀಷ್ ಮಾತು.
ಕಳೆದ ಸೀಸನ್ಲ್ಲಿ ಪುನೀತ್, ಶಿವರಾಜ್ಕುಮಾರ್, ಯಶ್, ಉಪೇಂದ್ರ, ರಾಧಿಕಾ ಪಂಡಿತ್, ಅರ್ಜುನ್ ಸರ್ಜಾ ಸೇರಿದಂತೆ ಸಾಕಷ್ಟು ಸಾಧಕರು, ಸಾಧನೆಯ ಸೀಟ್ನಲ್ಲಿ ಕೂತು ಸಂಭ್ರಮಿಸಿದ್ದರು. ಈ ಸೀಸನ್ ಕೂಡ ಅಷ್ಟೇ ಘನತೆಯಿಂದ ಮೂಡಿಬರುತ್ತಿದೆ. ಮುಂದಿನ ವೀಕೆಂಡ್ನಲ್ಲಿ ದರ್ಶನ್ ಬರುವ ಸಾಧ್ಯತೆ ಇದೆ.
---
'ಜೀ ಕನ್ನಡದ ವಾಹಿನಿಗೆ ವೀಕೆಂಡ್ ವಿತ್ ರಮೇಶ್ ವಿಶೇಷವಾದ ಕಾರ್ಯಕ್ರಮ. ಅದೆಷ್ಟೋ ಪ್ರೇಕ್ಷಕರಿಗೆ ಸ್ಫೂರ್ತಿಯಾದ ಸ್ಟೋರಿ ಇಲ್ಲಿ ಮೂಡಿಬಂದಿವೆ. ಚೈತನ್ಯ ತುಂಬಿವೆ. ತಮ್ಮ ಬದುಕನ್ನು ಬದಲಿಸಿಕೊಂಡ ಅನೇಕರು ವಾಹಿನಿಗೆ ಇ-ಮೇಲ್ ಮಾಡಿದ್ದಾರೆ. ಇದಕ್ಕಿಂತ ಗೆಲುವು ಬೇಕಿಲ್ಲ.
- ರಾಘವೇಂದ್ರ ಹುಣಸೂರು, ಜೀ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್.
- ಶರಣು ಹುಲ್ಲೂರು