ತಾವು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಂಗಿತರಂಗ' ಕನ್ನಡ ಸಿನಿಮಾ ಆಸ್ಕರ್ಗೆ ನಾಮನಿರ್ದೇಶನಗೊಂಡಿರುವ ಖುಷಿಯಲ್ಲಿದ್ದಾರವರು. ಆಸ್ಕರ್ ಗೌರವಕ್ಕೆ ನಾಮನಿರ್ದೇಶನಗೊಂಡಿರುವ ಜಗತ್ತಿನ ವಿವಿಧ ಭಾಷೆಗಳ 305 ಚಿತ್ರಗಳ ಪಟ್ಟಿಯಲ್ಲಿ 'ರಂಗಿತರಂಗ'ಕ್ಕೂ ಜಾಗ ಸಿಕ್ಕಿರುವುದು ಸಾಯಿಕುಮಾರ್ ಖುಷಿ ಹೆಚ್ಚಿಸಿದೆ.
'ರಂಗಿತರಂಗ' 25ನೇ ದಿನದ ಸಂಭ್ರಮಾಚರಣೆಯಲ್ಲೇ, ಈ ಚಿತ್ರ ಆಸ್ಕರ್ಗೆ ಹೋಗಲಿದೆ ಎಂದು ಸಾಯಿಕುಮಾರ್ ಹೇಳಿದ್ದರಂತೆ! 'ಭಾರತದ ಜ್ಯೂರಿಗಳು ಅಧಿಕೃತವಾಗಿ ಈ ಚಿತ್ರವನ್ನು ಆಸ್ಕರ್ಗೆ ಆಯ್ಕೆ ಮಾಡಿರಲಿಲ್ಲ. ಆಗ ಲ್ಯಾಟರಲ್ ಎಂಟ್ರಿ ಮೂಲಕ ಚಿತ್ರ ಸ್ಪರ್ಧಿಸಬಹುದು ಎನ್ನುವುದು ತಿಳಿದಾಗ ಸಮಾಧಾನವಾಗಿತ್ತು. ಇದೀಗ 88ನೇ ಅಕಾಡೆಮಿ ಪ್ರಶಸ್ತಿ ಪಟ್ಟಿಯಲ್ಲಿ ನಮ್ಮ ಚಿತ್ರವೂ ಇದೆ ಎನ್ನುವುದು ಅತೀವ ಸಂತಸ ತರುತ್ತದೆ. ಜಗತ್ತಿನ ಅತ್ಯುತ್ತಮ ನಟರ ಹೆಸರುಗಳೊಂದಿಗೆ ನನ್ನ ಹೆಸರುಗಳೂ ಕೇಳಿಸಿದಾಗ ರೋಮಾಂಚನ ಉಂಟಾಗದಿರುತ್ತದೆಯೇ!?' ಎಂದು ಪ್ರಶ್ನಿಸುತ್ತಾರವರು. ಈ ಯಾದಿಯಲ್ಲಿ ಆಸ್ಕರ್ಗೆ ನಾಮನಿರ್ದೇಶನಗೊಂಡಿರುವ ಚಿತ್ರಗಳ ಕಲಾವಿದರಾದ ಜಾನಿ ಡೆಪ್, ಮೈಖೇಲ್ ಡಗ್ಲಾಸ್, ಕ್ರಿಸ್ಚಿಯನ್ ವೇಲ್, ಬ್ರಾಡ್ಲೇ ಕೂಪರ್, ರಾಬರ್ಟ್ ಡೌನೇ ಜೂನಿಯರ್, ಕ್ರಿಸ್ ಹೆಮ್ಸ್ವರ್ಥ್, ವಿಲ್ಸ್ಮಿತ್, ಜೆನಿಫರ್ ಲೋಪೆಜ್ ಹೆಸರುಗಳನ್ನು ಅವರು ಹೆಸರಿಸುತ್ತಾರೆ!
ಹಾಗೆ ನೋಡಿದರೆ ಈ ಚಿತ್ರಕ್ಕೆ ಸಹಿ ಹಾಕುವಾಗ ಕೆಲವರು ಸಾಯಿಕುಮಾರ್ ಅವರನ್ನು ಹೆದರಿಸಿದ್ದೂ ಇದೆ. 'ಚಿತ್ರದ ನಿರ್ದೇಶಕ ಅನೂಪ್ ಭಂಡಾರಿಗೆ ಇದು ಮೊದಲ ಪ್ರಯತ್ನ. ಸಂಪೂರ್ಣ ಹೊಸಬರೇ ತಯಾರಿಸುತ್ತಿರುವ ಚಿತ್ರದ ನೆಗೆಟಿವ್ ಶೇಡ್ನ ಪಾತ್ರದಿಂದ ನನ್ನ ಇಮೇಜ್ಗೆ ಧಕ್ಕೆಯಾಗುತ್ತದೆ ಎಂದು ಹಿತೈಷಿಗಳು ಎಚ್ಚರಿಸಿದ್ದರು. ಆದರೆ ಪಾತ್ರದ ಬಗ್ಗೆ ವಿಶ್ವಾಸವಿಟ್ಟು ಚಿತ್ರ ಒಪ್ಪಿಕೊಂಡೆ' ಎನ್ನುತ್ತಾರೆ ಈ ನಟ.
ಇವರಿಗೆ 'ರಂಗಿತರಂಗ' ಆಸ್ಕರ್ ಫೈನಲ್ ಲಿಸ್ಟ್ಗೆ ಸೇರ್ಪಡೆಯಾಗುವ ವಿಶ್ವಾಸವಿದೆಯೆ? 'ಅಂತಿಮ ಚಿತ್ರಗಳ ನಾಮನಿರ್ದೇಶನಕ್ಕೆ ಮುಂದಿನ ತಿಂಗಳವರೆಗೂ ಸಮಯವಿದೆ. ಪ್ರಶಸ್ತಿ ಬಂದರೆ ಅದನ್ನು ನನ್ನ ಮೊಮ್ಮಗಳಿಗೆ ಅರ್ಪಿಸಲಿದ್ದೇನೆ!' ಎಂದು ನಗುತ್ತಾರವರು.
- ಪ್ರಣೀತಾ ಜೊನ್ನಾಲಗೆಡ್ಡ
ಬಹುಭಾಷಾ ನಟ ಸಾಯಿಕುಮಾರ್ ಇದೀಗ ಸಂಭ್ರಮಪಡಲು ಹಲವು ಕಾರಣಗಳಿವೆ. ವೈಯಕ್ತಿಕ ಬದುಕಿನಲ್ಲಿ ಇತ್ತೀಚೆಗಷ್ಟೇ ಅವರು ತಾತನಾಗಿ ಬಡ್ತಿ ಹೊಂದಿದ್ದಾರೆ! ಈ ಖುಷಿಯಲ್ಲಿರುವ ನಟನಿಗೆ ವೃತ್ತಿ ಜೀವನದಲ್ಲೂ ಒಂದು ತಿರುವು ಸಿಕ್ಕಿರುವುದು ವಿಶೇಷ.