ಶಹಾಪುರ: ಜಾನಪದ ಕಲೆ ಅಪ್ಪಟ ಗ್ರಾಮೀಣಿಗರ ಕಲೆಯಾಗಿದೆ.ಆದರೆ, ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಭಾಗದಲ್ಲಿಯೂ ಈ ಕಲೆ ನಶಿಸಿ ಹೋಗುತ್ತಿರುವುದಕ್ಕೆ ತಾಲೂಕಿನ ಹೋತಪೇಟ ಗ್ರಾಮದ ಕೈಲಾಶ ಆಶ್ರಮದ ಶಿವಲಿಂಗ ಶರಣರು ಕಳವಳ ವ್ಯಕ್ತಪಡಿಸಿದರು. ಭೀಮರಾಯನಗುಡಿಯಲ್ಲಿ ವೀರ ಕೇಸರಿ ಕಲಾ ಮತ್ತು ಸಾಂಸ್ಕೃತಿಕ ಗ್ರಾಮೀಣಾಭೀವೃದ್ಧಿ ಸಂಸ್ಥೆ ಏರ್ಪಡಿಸಿದ್ದ ಜಾನಪದ ಜಾಗರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಕಲಾವಿದರನ್ನು ಕರೆಸಿ ವಿಶೇಷ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜಾನಪದ ಕಲೆ ಮತ್ತು ಸಂಸ್ಕೃತಿಗಳ ಉಳಿವಿಗಾಗಿ ಪ್ರಯತ್ನಿಸುತ್ತಿರುವುದನ್ನು ಶ್ಲಾಘಿಸಿದರು. ಸಂಸ್ಥೆಯ ಅಧ್ಯಕ್ಷ ಭೀಮು ಶಖಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ನಡೆದು ಬಂದ ಬಗ್ಗೆ ವಿವರಿಸಿದರು. ಜಿಪಂ ಸದಸ್ಯ ವಿನೋದ ಮಾಲಿಪಾಟೀಲ,ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಪಾಟೀಲ, ಮುಖಂಡರಾದ ರಾಯಪ್ಪಗೌಡ ದರ್ಶನಾಪುರ,ನಾಗಪ್ಪ ಕಾಶಿರಾಜ,ಸಾಹಿತಿ ಸಿದ್ದರಾಮ ಹೊನ್ಕಲ್,ಸಿಪಿಐ ವೀರಣ್ಣ ದೊಡಮನಿ ಇನ್ನಿತರರು ವೇದಿಕೆಯಲ್ಲಿದ್ದರು. ಸಂಶೋಧಕ ಎಂ.ಎಸ್.ಶಿರವಾಳ,ನಾಗನಟಗಿ ಗ್ರಾಮದ ಕಲಾವಿದ ತಿಪ್ಪಣ್ಣ ಜಾಧವ ಮೊದಲಾದವರನ್ನು ಸನ್ಮಾನಿಸಲಾಯಿತು. ವಿಜಯಸಿಂಗ್ ಸ್ವಾಗತಿಸಿದರು,ಸಿದ್ದು ಪಟ್ಟೇದಾರ ವಂದಿಸಿದರು. ನಂತರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.
↧
ಗ್ರಾಮೀಣ ಕಲೆಗಳು ಉಳಿಸುವುದು ಅನಿವಾರ್ಯ
↧