Quantcast
Channel: VijayKarnataka
Viewing all articles
Browse latest Browse all 6795

ಬ್ಯೂಟಿಫುಲ್‌ ಆದ ಸಿನಿಮಾ

$
0
0

ಹರೀಶ್‌ ಬಸವರಾಜ್‌

ಹೆಸರೇ ಹೇಳುವಂತೆ ಬ್ಯೂಟಿಫುಲ್‌ ಮನಸುಗಳು ಪ್ರೇಮ ಕತೆಯುಳ್ಳ ಚಿತ್ರ. ಇಲ್ಲಿ ಮಧ್ಯಮ ವರ್ಗದ ನವಿರಾದ ಪ್ರೇಮವಿದೆ. ಹುಡುಗರು ತಮ್ಮ ಹರೆಯದಲ್ಲಿ ಮಾಡುವ ತಮಾಷೆಗಳು, ಚೇಷ್ಟೆಗಳು ಇಲ್ಲಿವೆ. ಮೇಲ್ನೋಟಕ್ಕೆ ಈ ಸಿನಿಮಾ ಖಾಲಿ ಖಾಲಿ ಎನಿಸಿದರೂ ಕೆಲವೆಡೆ ಸೂಜಿಗಲ್ಲಿನಂತೆ ಸೆಳೆದುಬಿಡುತ್ತದೆ.

ಚಿತ್ರದ ಕತೆ 2013ರಲ್ಲಿ ಮಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಕುರಿತದ್ದಂತೆ. ಯಾವುದೇ ಹೆಣ್ಣಿಗೆ ಒಮ್ಮೆ ಕಳಂಕ ಅಂಟಿಕೊಂಡರೆ ಅದು ಬದುಕಿನಿಡೀ ಕಾಡುತ್ತದೆ. ಇಬ್ಬರು ಹೆಣ್ಣು ಮಕ್ಕಳು ಬಹುದೊಡ್ಡ ಕಳಂಕದಿಂದ ಹೊರಬರುವ ಕತೆ ಇಲ್ಲಿದೆ. ಒಬ್ಬ ವ್ಯಕ್ತಿ ಸರಿಯಿಲ್ಲ ಎಂದು ನಾವು ಜಗತ್ತಿಗೆ ತಿಳಿಯುವಂತೆ ಹೇಳುವಾಗ ತುಂಬಾ ಯೋಚಿಸಬೇಕು. ಒಂದು ಘಟನೆ ಬಗ್ಗೆ ಸಮಾಜ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಜತೆಗೇ ಜತೆಗಿದ್ದವರ ಬಗ್ಗೆ ಜಗತ್ತು ಸಾವಿರ ಮಾತನಾಡಿದರೂ ನಾವು ವಿಷಯವನ್ನು ಪೂರ್ತಿ ತಿಳಿಯದೇ ಆ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬಾರದು ಎಂದು ಸಹ ನಿರ್ದೇಶಕ ಹೇಳಿದ್ದಾರೆ.

ಬ್ಯೂಟಿಫುಲ್‌ ಮನಸುಗಳು ಸ್ವಲ್ಪ ಸಿದ್ಧಸೂತ್ರವನ್ನು ಬಿಟ್ಟಿರುವ ಸಿನಿಮಾ. ನಾಯಕ ಪ್ರಶಾಂತ್‌(ನೀನಾಸಂ ಸತೀಶ) ವೈನ್‌ಸ್ಟೋರ್‌ ಮಾಲೀಕರ ಮಗ. ಯಾವುದೇ ಕೆಲಸ ಮಾಡದೇ ಓಡಾಡಿಕೊಂಡಿರುವ ಹೈದ. ತನ್ನ ಸ್ನೇಹಿತನ ಅಂಗಡಿಯಲ್ಲಿ ನಾಯಕಿ ನಂದಿನಿ (ಶ್ರುತಿ ಹರಿಹರನ್‌)ಯನ್ನು ನೋಡಿ ಮೊದಲ ನೋಟದಲ್ಲೇ ಪ್ರೇಮದಲ್ಲಿ ಬೀಳುತ್ತಾನೆ. ನಂದಿನಿ ಮಾತ್ರ ಅವನ ಪ್ರೀತಿಯನ್ನು ನಿರಾಕರಿಸುತ್ತಾಳೆ. ಬದಲಿಗೆ ಗಂಡಿಗೆ ಒಂದು ಜವಬ್ದಾರಿ ಇರಬೇಕು, ನಿನಗೆ ಯಾವ ಜವಬ್ದಾರಿ ಇದೆ? ಏನು ಕೆಲಸ ಮಾಡುತ್ತೀಯಾ? ಎಂದು ಎಲ್ಲಾ ಮಧ್ಯಮ ವರ್ಗದ ಹುಡುಗಿಯರಂತೆ ಪ್ರಶ್ನಿಸುತ್ತಾಳೆ. ಅದಕ್ಕೆ ನಾಯಕನಿಂದ ಉತ್ತರ ಬರುವುದಿಲ್ಲ. ಮುಂದೆ ಜವಬ್ದಾರಿ ಅರಿತು ಉದ್ಯೋಗ ಮಾಡುತ್ತೇನೆ ಎಂದು ಹೇಳಿ ಅವಳನ್ನು ಪ್ರೀತಿಗೆ ಒಪ್ಪಿಸುತ್ತಾನೆ. ಇಷ್ಟರಲ್ಲಿ ಸಿನಿಮಾದ ಅರ್ಧ ಭಾಗ ಮುಗಿಯುತ್ತದೆ. ಬರೀ ಹುಡುಗ-ಹುಡುಗಿ ಕತೆ ಇದೆ ಎಂದ ಮಾತ್ರಕ್ಕೆ ಸಿನಿಮಾದಲ್ಲಿ ಬರೀ ಲವ್‌ ಸ್ಟೋರಿ ಮಾತ್ರವೇ ಅಲ್ಲ, ಲಂಚಕ್ಕಾಗಿ ಬಾಯಿಬಿಡುವ ಪೊಲೀಸರ ಕತೆಯಿದೆ. ಸುದ್ದಿಮಾಧ್ಯಮಗಳ ಸುದ್ದಿಯ ಹಸಿವಿದೆ. ನಮ್ಮ ಬದುಕು ಎಲ್ಲಿ ಅರ್ಧಕ್ಕೆ ನಿಂತು ಹೋಗುತ್ತದೋ ಎಂದು ಒದ್ದಾಡುವ ಮಧ್ಯಮ ವರ್ಗದ ಕುಟುಂಬಗಳಿವೆ. ತನ್ನ ತಂದೆಯ ಭ್ರಷ್ಟಾಚಾರದಿಂದ ಬೇಸತ್ತ ನಿಷ್ಕಲ್ಮಶ ಮಗಳಿದ್ದಾಳೆ. ಇಡೀ ಚಿತ್ರದಲ್ಲಿ ನಮ್ಮ ಸುತ್ತಮುತ್ತಲಿನ ಪಾತ್ರಗಳೇ ತುಂಬಿವೆ.

ಈ ಕತೆಯಲ್ಲಿ ಒಂದಷ್ಟು ಫೈಟ್‌ಗಳನ್ನು, ಮತ್ತೊಂದಷ್ಟು ಡ್ಯುಯೆಟ್‌ಗಳನ್ನು , ಬೇಡದ ಎಮೋಷನ್‌ ಸೀನ್‌ಗಳನ್ನು ತರಬಹುದಾಗಿತ್ತು. ಆದರೆ ನಿರ್ದೇಶಕ ಜಯತೀರ್ಥ ಅದಾವುದನ್ನು ಮಾಡದೆ ವಿಭಿನ್ನವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ನೀನಾಸಂ ಸತೀಶ್‌ ಅವರದ್ದು ಸಿನಿಮಾದ ಮೊದಲರ್ಧ ತಮ್ಮ ಚತುರತೆಯಿಂದ ನಗಿಸಿದರೆ, ಉಳಿದರ್ಧ ಜವಾಬ್ದಾರಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹರಿಹರನ್‌ ಅಭಿನಯದಲ್ಲಿ ನೂರಕ್ಕೆ ನೂರು ಅಂಕವನ್ನು ಗಳಿಸುತ್ತಾರೆ. ಮಧ್ಯಮ ವರ್ಗದ ಹುಡುಗಿಯಾಗಿ ಅವರದ್ದು ಮನೋಜ್ಞ ಅಭಿನಯ. ಆಗಾಗ ಬಂದು ಹೋಗುವ ತಬಲಾ ನಾಣಿ ಮಾತುಗಳಲ್ಲಿ ಲಾಲಿತ್ಯವಿದೆ. ಅಚ್ಯುತ್‌ ಕುಮಾರ್‌ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಇವರೆಲ್ಲರಿಗೂ ಸಂದೀಪ್‌, ಪ್ರಶಾಂತ್‌, ಸ್ವಾತಿ ಕೊಂಡೆ ಸಾಥ್‌ ನೀಡಿದ್ದಾರೆ.

ಇಡೀ ಚಿತ್ರದಲ್ಲಿ ಎರಡೇ ಹಾಡಿದ್ದರೂ ಸಂಗೀತ ನಿರ್ದೇಶಕ ಬಿ.ಜೆ. ಭರತ್‌ ಗಮನ ಸೆಳಯುತ್ತಾರೆ. ಎಲ್ಲಕ್ಕಿಂತ ಟೈಟಲ್‌ ಟ್ರ್ಯಾಕ್‌ನ್ನು ಜನ ಹೊರಗೆ ಬಂದರೂ ಗುನುಗಿಕೊಂಡು ಹೋಗುತ್ತಾರೆ. ಇದಕ್ಕೆ ಸಾಹಿತ್ಯ ಬರೆದ ಮದನ್‌ ಕುಮಾರ್‌ ಬೆಳ್ಳಿಸಾಲು ಅವರನ್ನು ಮೆಚ್ಚಬೇಕು. ನಿರ್ದೇಶಕರ ಪರಿಕಲ್ಪನೆಗೆ ತಕ್ಕಂತೆ ಸಿನಿಮಾಟೋಗ್ರಾಫರ್‌ ಕಿರಣ್‌ ಹಂಪಾಪುರ ಕೆಲಸ ಮಾಡಿದ್ದಾರೆ.ಸಂಭಾಷಣೆ ಚೂಪಾಗಿದೆ. ಈ ವೀಕೆಂಡ್‌ಗೆ ಬ್ಯೂಟಿಫುಲ್‌ ಮನಸುಗಳು ಒಳ್ಳೆಯ ಚಿತ್ರ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>