- ಶರಣು ಹುಲ್ಲೂರು ಗಾಳಿಪಟ ಚಿತ್ರದ ನಂತರ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಒಂದಾಗಲಿರುವ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಸಂಚಲನವುಂಟು ಮಾಡಿತ್ತು. ಈ ಚಿತ್ರ ಯಾವಾಗ ಶುರುವಾಗಲಿದೆ ಅನ್ನುವ ಕುತೂಹಲ ಕೂಡ ಮೂಡಿತ್ತು. ಈ ಎಲ್ಲ ಕ್ಯೂರಿಯಾಸಿಟಿಗೂ ಈಗ ತೆರೆ ಬಿದ್ದಿದೆ. ಈ ಸಿನಿಮಾದಲ್ಲಿ ಬರೋಬ್ಬರಿ ನಾಲ್ವರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಇಷ್ಟೊಂದು ಸಂಖ್ಯೆಯ ನಾಯಕಿಯರ ಜತೆ ಗಣೇಶ್ ರೋಮಾನ್ಸ್ ಮಾಡಲಿದ್ದಾರೆ. ಚಿತ್ರಕ್ಕೆ ಮುಗುಳುನಗೆ ಎಂದು ಹೆಸರಿಡಲಾಗಿದೆ. ಅಮೂಲ್ಯ, ನಿಖಿತಾ ನಾರಾಯಣ್ ಮತ್ತು ಆಶಿಕಾ ನಾಯಕಿಯರಿಗಾಗಿ ನಟಿಸುತ್ತಿದ್ದರೆ, ಜಾಕಿ ಖ್ಯಾತಿಯ ಭಾವನಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ತಿಂಗಳು ಎರಡನೇ ವಾರದಿಂದ ಶೂಟಿಂಗ್ ಶುರುವಾಗಲಿದೆ. ಖುಷಿ ಖುಷಿಯಾಗಿ ನಂತರ ಗಣೇಶ್ ಮತ್ತು ಅಮೂಲ್ಯ ಇಲ್ಲಿ ಮತ್ತೆ ಒಂದಾಗುತ್ತಿರುವುದು ವಿಶೇಷ. ಈವರೆಗೂ ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್ನ ಚಿತ್ರಗಳು ಸೂಪರ್ ಹಿಟ್ ಆಗಿವೆ. ಅಲ್ಲದೇ ಹೊಸ ರೀತಿಯ ಕತೆಗಳಿಂದ ಕೂಡಿವೆ. ಹಾಗಾಗಿ ಮುಗುಳುನಗೆ ಚಿತ್ರದ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದೆ. ಈ ಕುರಿತು ಗಣೇಶ್ ಅವರನ್ನೇ ಕೇಳಿದಾಗ, 'ಇಡೀ ಸಿನಿಮಾ ಮಜವಾಗಿದೆ. ಪಾತ್ರಗಳ ಹಿನ್ನೆಲೆ ಮತ್ತು ಅವುಗಳೊಂದಿಗೆ ಸಾಗುವ ಕತೆ ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯಲಿದೆ. ಎಂದಿನಂತೆ ಯೋಗರಾಜ್ ಭಟ್ ಮಾತಿನ ಕಚಗುಳಿ, ಹರಿಕೃಷ್ಣ ಅವರ ಹಾಡಿನ ಮೋಡಿ ಇಲ್ಲಿರಲಿದೆ. ಪ್ರೇಕ್ಷಕರು ನಮ್ಮಿಂದ ಏನೆಲ್ಲ ನಿರೀಕ್ಷೆ ಮಾಡುತ್ತಾರೋ, ಅದೆಲ್ಲವೂ ಚಿತ್ರದಲ್ಲಿ ಇರಲಿದೆ' ಅಂತಾರೆ. ಒಂದೇ ಚಿತ್ರದಲ್ಲಿ ನಾಲ್ವರು ನಾಯಕಿಯರು ಅಭಿನಯಿಸುತ್ತಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಈ ನಟ, 'ಆಯಾ ಪಾತ್ರಗಳಿಗೆ ತಮ್ಮದೇ ಆದ ಹಿನ್ನೆಲೆ ಇದೆ. ನಾಯಕನ ಪಾತ್ರದ ಗಮ್ಮತ್ತೆ ವಿಭಿನ್ನವಾಗಿರುವುದರಿಂದ ಕ್ಯಾರೆಕ್ಟರ್ ಬಗ್ಗೆ ಸಿನಿಮಾದಲ್ಲೇ ನೋಡುವುದು ಚೆಂದ. ಹಾಗಂತ ನನ್ನದು ಫ್ಲರ್ಟ್ ಮಾಡುವಂತಹ ಪಾತ್ರವಲ್ಲ. ತುಂಬಾ ಜವಾಬ್ದಾರಿಯುತ ಹುಡುಗ ಆತ. ಅವನ ಬದುಕಿನಲ್ಲಿ ಈ ಹುಡುಗಿಯರು ಹೇಗೆ ಬರುತ್ತಾರೆ ಅನ್ನುವುದೇ ಇಂಟರೆಸ್ಟಿಂಗ್' ಅನ್ನುವುದು ಗಣೇಶ್ ಮಾತು.
↧
ನಾಲ್ವರು ಸುಂದರಿಯರ ಜತೆ ಗಣೇಶ್ ರೋಮಾನ್ಸ್
↧