ಕಾಠ್ಮಂಡು: ನೇಪಾಳದಲ್ಲಿ ನೂರಾರು ಕೋಟಿ ರೂ. ಹೂಡಿಕೆ ಮಾಡಿ, ಇಲ್ಲಿನ 20 ಸಾವಿರಕ್ಕೂ ಹೆಚ್ಚು ನೇಪಾಳಿ ಯುವಕರಿಗೆ ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಯೋಗ ಗುರು ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್ ಬುಧವಾರ ಹೇಳಿದ್ದಾರೆ. ನೇಪಾಳದಲ್ಲಿ ಒಂದು ವಾರ ಪ್ರವಾಸ ಕೈಗೊಂಡಿರುವ ರಾಮದೇವ್, ಇಲ್ಲಿನ ಬಾರಾ ಜಿಲ್ಲೆಯಲ್ಲಿ ಪತಂಜಲಿ ಆಯುರ್ವೇದ ಗ್ರಾಮ ಉದ್ಯೋಗ ಎನ್ನುವ ತಮ್ಮ ಹೊಸ ಕಾರ್ಖಾನೆಗೆ ಚಾಲನೆ ನೀಡಿದರು. ನೇಪಾಳ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ಅವರು ಉಪಸ್ಥಿತರಿದ್ದರು. ಸಾವಯವ ಔಷಧ ಮತ್ತು ಇತರೆ ಆಯುರ್ವೇದ ಉತ್ಪನ್ನಗಳನ್ನು ಪತಂಜಲಿಯು ಈ ನೂತನ ಕಾರ್ಖಾನೆಯಲ್ಲಿ ಉತ್ಪಾದಿಸಲಿದೆ. ''ಇಲ್ಲಿ ಕಾರ್ಖಾನೆ ಸಲುವಾಗಿ ಆರಂಭಿಕವಾಗಿ 150 ಕೋಟಿ ರೂ. ಹೂಡಿಕೆ ಮಾಡಲಿದ್ದು, ನಂತರದ ದಿನಗಳಲ್ಲಿ ಅದನ್ನು 500 ಕೋಟಿ ರೂ.ಗೆ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ,'' ಎಂದು ರಾಮದೇವ್ ಹೇಳಿದರು. ನೇಪಾಳ ಸಹಯೋಗದೊಂದಿಗೆ ಹೊಸ ಯೋಜನೆ ಜಾರಿಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ರಾಮದೇವ್ ಅವರು ನೇಪಾಳ ವಾಣಿಜ್ಯ ಮತ್ತು ಉದ್ಯಮ ಮಂಡಳಿ ಫೆಡರೇಷನ್ನ ಸದಸ್ಯರು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ತಮ್ಮ ಆಪ್ತ ಆಚಾರ್ಯ ಬಾಲಕೃಷ್ಣ ಜತೆ ಪ್ರವಾಸದಲ್ಲಿರುವ ರಾಮದೇವ್, ಇಲ್ಲಿ ಅವರು 5 ದಿನಗಳ ವಿಶೇಷ ಯೋಗ ಕ್ಯಾಂಪ್ ನಡೆಸಲಿದ್ದಾರೆ ಎಂದು ನೇಪಾಳದಲ್ಲಿನ ಪತಂಜಲಿ ಯೋಗ ಆಶ್ರಮದ ಮೂಲಗಳು ತಿಳಿಸಿವೆ. ವೀರ್ಗುಂಜ್ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನೇಪಾಳ ಅಧ್ಯಕ್ಷೆ ವಿದ್ಯಾ ದೇವಿ ಭಂಡಾರಿ, ಪ್ರಧಾನಿ ಪುಷ್ಪಾ ಕಮಲ್ ದಹಾಲ್, ನೇಪಾಳ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವಾ, ಸಚಿವರು, ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಪ್ರಸಕ್ತ ವರ್ಷ 10 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿರುವ ಪತಂಜಲಿ ಸಂಸ್ಥೆಯು, ತನ್ನ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಮುಂದಾಗಿದೆ.
↧
ನೇಪಾಳಕ್ಕೆ ಪತಂಜಲಿ ಪ್ರವೇಶ, 20 ಸಾವಿರ ಉದ್ಯೋಗ ಸೃಷ್ಟಿ: ರಾಮದೇವ್
↧