ರಾಜಕೀಯ ಸೇಡಿಗೆ ಕೇಂದ್ರದಿಂದ ಜನ ಹಿತ ಬಲಿ: ಸಂಸದ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ: ಐನೂರು, ಸಾವಿರ ರೂಪಾಯಿ ನೋಟನ್ನು ರದ್ದುಗೊಳಿಸಿರುವುದು ಕೇಂದ್ರದ ರಾಜಕೀಯ ಸೇಡಿನ ಕ್ರಮವೇ ಹೊರತು ಇದರಲ್ಲಿ ದೇಶದ ಜನರ ಹಿತಾಸಕ್ತಿ ಅಡಗಿಲ್ಲ ಎಂದು ಸಂಸದ ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿದರು. ವಿಜಯಕರ್ನಾಟಕದೊಂದಿಗೆ ಮಾತನಾಡಿದ ಅವರು, ಯಾವುದೇ ಪೂರ್ವಸಿದ್ಧತೆಯಿಲ್ಲದೆ ನೋಟುಗಳನ್ನು ರದ್ದುಗೊಳಿಸಿದ ಕೇಂದ್ರ ಜನಸಾಮಾನ್ಯರು ಪಡಿಪಾಡಲು ಬೀಳುವಂತೆ ಮಾಡಿದ್ದು, ಕಪ್ಪು ಹಣ ನಿಯಂತ್ರಿಸುವ ಮಹದುದ್ದೇಶ ಅಡಗಿದೆ ಎಂದು ಹೇಳುವ ಮೂಲಕ ಸಾರ್ವಜನಿಕರ ದಿಕ್ಕುತಪ್ಪಿಸುತ್ತಿದೆ. ಕಪ್ಪು ಹಣ ನಿಯಂತ್ರಿಸುವ ಆಗಿದ್ದರೆ ಕಾಳಧನಿಕರ ಮೇಲೆ ಕ್ರಮ ಜರುಗಿಸಬೇಕಿತ್ತು. ಬದಲಾಗಿ ಜನಸಾಮಾನ್ಯರ ನಿತ್ಯದ ವಹಿವಾಟಿಗೆ ಧಕ್ಕೆಯಾಗುವಂತಹ ನೋಟಿನ ರದ್ದತಿ ಮಾಡುತ್ತಿರಲಿಲ್ಲ. ದೇಶದ ಜನರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ನಿರ್ಧಾರವನ್ನು ಕೇಂದ್ರ ತೆಗೆದುಕೊಂಡಿದೆ ಎಂದು ಟೀಕಿಸಿದರು. ವೈಫಲ್ಯ ಮರೆಮಾಚಲು ನೋಟು ರದ್ದತಿಯ ಅವಾಂತರ: ನಮ್ಮ ಸರಕಾರ ಅಧಿಕಾರಕ್ಕೆ ಬಂದ ನೂರು ದಿನದೊಳಗೆ ವಿದೇಶಿ ಬ್ಯಾಂಕುಗಳಲ್ಲಿಟ್ಟಿರುವ ಕಪ್ಪು ಹಣವನ್ನು ಹೊರತಂದು ಪ್ರತಿಯೊಬ್ಬ ಭಾರತೀಯನ ಖಾತೆಗೂ 15 ಲಕ್ಷ ತುಂಬುತ್ತೇವೆ ಎಂದು ಚುನಾವಣೆ ಪೂರ್ವದಲ್ಲಿ ಸಾರಿದ ಪ್ರಧಾನಿ ಮೋದಿಯವರು, ಅದರಲ್ಲಿ ವೈಫಲ್ಯ ಹೊಂದಿದ ಪರಿಣಾಮ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುವ ನೋಟು ರದ್ದತಿಯ ಪ್ರಯೋಗ ನಡೆಸಿದ್ದಾರೆ. ಹಿಂದೆ ಜನತಾ ಪಕ್ಷದ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದಾಗಲೂ ಇಂದಿರಾಗಾಂಧಿ ಅವರ ಮೇಲಿನ ರಾಜಕೀಯ ಸೇಡಿಗೆ ನೋಟು ರದ್ದುಗೊಳಿಸಿ ಒಂದು ತಿಂಗಳ ಬಳಿಕ ಮತ್ತೆ ಹಿಂಪಡೆದರು. ಮುಂದೆ ಅಧಿಕಾರವನ್ನು ಕಳೆದುಕೊಂಡರು. ಎನ್ಡಿಎ ಸರಕಾರವೂ ಇದೇ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೇಂದ್ರದ ನೋಟು ರದ್ಧತಿಯ ಕ್ರಮದಿಂದ ದೇಶದಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಿದ್ದು, ದಿನನಿತ್ಯದ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದೆ. ಈ ಬಗ್ಗೆ ಬುಧವಾರದಿಂದ ನಡೆಯುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ನಿಲುವನ್ನು ಖಂಡಿಸಲಾಗುವುದು ಎಂದರು.
↧
ರಾಜಕೀಯ ಸೇಡಿಗಾಗಿ ಕೇಂದ್ರದಿಂದ ಜನ ಹಿತ ಬಲಿ: ಮೊಯ್ಲಿ
↧