-ಗೃಹ ಸಚಿವರ ಮುಂದೆ ಗೋಳು ಬಿಚ್ಚಿಟ್ಟ ರೋಗಿಗಳು, ವ್ಯಾಪಾರಿಗಳು- ಬೆಂಗಳೂರು : 500-1000 ನೋಟುಗಳ ದಿಢೀರ್ ರದ್ದಿನಿಂದ ಉದ್ಭವಿಸಿರುವ ಭೀಕರ ಸಮಸ್ಯೆಗಳನ್ನು ವ್ಯಾಪಾರಿಗಳು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು ಮತ್ತು ಬ್ಯಾಂಕ್ ಮುಂದೆ ಸಾಲುಗಟ್ಟಿದ್ದ ಜನ ಸಾಮಾನ್ಯರು ಮಂಗಳವಾರ ಬೆಳಗ್ಗೆ ಗೃಹ ಸಚಿವ ಪರಮೇಶ್ವರ್ ಎದುರು ಬಿಚ್ಚಿಟ್ಟರು. ಜನಸಾಮಾನ್ಯರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಜಯನಗರದ ಬಿಬಿಎಂಪಿ ವಾಣಿಜ್ಯ ಮಳಿಗೆಗಳು, ಖಾಸಗಿ ಆಸ್ಪತ್ರೆಗಳು ಮತ್ತು ಬ್ಯಾಂಕ್ಗಳಿಗೆ ಭೇಟಿ ನೀಡಿದ ಗೃಹ ಸಚಿವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟವರಿಗೆ ಅಗತ್ಯ ಸಹಕಾರ ನೀಡುವಂತೆ ಸ್ಥಳದಲ್ಲೇ ಸೂಚಿಸಿದರು. ಮೊದಲಿಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರ ಎದುರು ರೋಗಿಗಳು ಮತ್ತು ಅವರ ಕುಟುಂಬದವರು ಅಳಲು ತೋಡಿಕೊಂಡರು. ಆಸ್ಪತ್ರೆ ಸಿಬ್ಬಂದಿ 500-1000 ರೂ ನೋಟುಗಳನ್ನು ಪಡೆದುಕೊಳ್ಳುತ್ತಿಲ್ಲ ಎಂದು ಸಂಕಟ ಹೇಳಿಕೊಂಡರು. ಈ ಬಗ್ಗೆ ಸ್ಥಳದಲ್ಲೇ ಇದ್ದ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು ಹಳೆಯ ನೋಟುಗಳನ್ನು ಪಡೆದುಕೊಂಡು ಚಿಕಿತ್ಸೆ ನೀಡುವಂತೆ ಕೇಂದ್ರ ಸರಕಾರ ಸೂಚಿಸಿದ್ದರೂ ರೋಗಿಗಳಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಎಚ್ಚರಿಸಿದರು. ಆದರೆ ಈ ಬಗ್ಗೆ ತಮಗೆ ಯಾವುದೇ ಸೂಚನೆ ಬಂದಿಲ್ಲ. ಆದ್ದರಿಂದ ನಾವು ಹಳೆಯ ನೋಟುಗಳನ್ನು ಸ್ವೀಕರಿಸುತ್ತಿಲ್ಲ ಎಂದು ಆಡಳಿತ ಮಂಡಳಿ ಹೇಳಿದ್ದರಿಂದ ಕುಪಿತಗೊಂಡ ಸಚಿವರು ರೋಗಿಗಳ ಬಳಿ ಇರುವ ನೋಟುಗಳನ್ನೇ ತೆಗೆದುಕೊಂಡು ಚಿಕಿತ್ಸೆ ಮುಂದುವರಿಸುವಂತೆ ಸೂಚಿಸಿದರು. ನೋಟುಗಳ ರದ್ದತಿಯಿಂದ ಆಸ್ಪತ್ರೆಯಲ್ಲಿ ಶೇ 60 ರಷ್ಟು ರೋಗಿಗಳ ಸಂಖ್ಯೆ ಕಡಿಮೆ ಆಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಇದೇ ವೇಳೆ ಸಚಿವರಿಗೆ ತಿಳಿಸಿದರು. ರೋಗಿಗಳಿಗೆ ಹಣ್ಣು ವಿತರಿಸಿದ ಸಚಿವರು ಅಲ್ಲಿಂದ ತೆರಳಿದರು. ಜಯನಗರ ಬಿಡಿಎ ಕಾಂಪ್ಲೆಕ್ಸ್ನಲ್ಲಿನ ಬಿಬಿಎಂಪಿ ವ್ಯಾಪಾರಿ ಮಳಿಗೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಾರ ಇಲ್ಲದೆ ಕಂಗಾಲಾಗಿದ್ದ ವ್ಯಾಪಾರಿಗಳು ಸಚಿವರ ಎದುರಿಗೆ ಗೋಳು ತೋಡಿಕೊಂಡರು. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಅವರು ಮನವಿ ಮಾಡಿದರಾದರೂ ಸಚಿವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ''ಕೇಂದ್ರದ ಆತುರದ ಮತ್ತು ಪೂರ್ವ ತಯಾರಿ ಇಲ್ಲದ ನಿರ್ಧಾರದಿಂದ ಜನ ಸಾಮಾನ್ಯರು ಬಹಳ ಸಂಕಟ ಪಡುವಂತಾಗಿದೆ. ಆಸ್ಪತ್ರೆ ಸಿಬ್ಬಂದಿ ಹಳೆ ನೋಟುಗಳನ್ನು ಸ್ವೀಕರಿಸದಿರುವುದಕ್ಕೆ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ,''ಎಂದು ಮಾಧ್ಯಮ ಪ್ರತಿನಿಧಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ತಿಲಕ್ನಗರದ ಬ್ಯಾಂಕ್ ಆಫ್ ಬರೋಡಾಕ್ಕೆ ಭೇಟಿ ನೀಡಿದ ಸಚಿವರು ಬ್ಯಾಂಕ್ ಸಿಬ್ಬಂದಿ ಮತ್ತು ಬ್ಯಾಂಕ್ ಎದುರು ಕಿಲೋಮೀಟರ್ವರೆಗೂ ಸಾಲುಗಟ್ಟಿ ನಿಂತಿದ್ದ ಗ್ರಾಹಕರ ಬಳಿ ಸುಮಾರು ಮುಕ್ಕಾಲು ಗಂಟೆ ಚರ್ಚಿಸಿದರು. ''ನಮಗೆ ಕಚೇರಿಗಳಲ್ಲಿ ರಜೆ ಸಿಗುತ್ತಿಲ್ಲ, ಎಷ್ಟು ದಿನ ಈ ರೀತಿ ಸಾಲುಗಟ್ಟಿ ನಿಲ್ಲಬೇಕು''ಎಂದು ಗ್ರಾಹಕರು ಪ್ರಶ್ನಿಸಿದರು. ಕೇಂದ್ರದ ವಿರುದ್ಧ ಟೀಕೆ ಮಹತ್ವದ ತೀರ್ಮಾನ ತೆಗೆದುಕೊಳ್ಳುವಾಗ ಆ ತೀರ್ಮಾನ ಸಮಾಜದ ಯಾವ ವರ್ಗದವರ ಮೇಲೆ ಯಾವ ಮಟ್ಟದ ಪರಿಣಾಮ ಬೀರುತ್ತದೆ ಎನ್ನುವುದನ್ನು ಸರಿಯಾಗಿ ಅಧ್ಯಯನ ನಡೆಸಿರಬೇಕು. ಕೇಂದ್ರದ ತಯಾರಿ ಇಲ್ಲದ ಕೆಲಸದಿಂದ ಬಡವರು ಸಮಸ್ಯೆಗೆ ಸಿಲುಕಿದ್ದಾರೆ. ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ 500ರ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಯಾವಾಗ ಬಗೆಹರಿಸುತ್ತಾರೋ ನೋಡೋಣ ಎಂದು ಸಚಿವರು ಉತ್ತರಿಸಿದರು. ನನ್ನ ಜೇಬಲ್ಲಿದೆ 20 ಸಾವಿರ ನಿಮಗೆ ಚಿಲ್ಲರೆ ಸಮಸ್ಯೆ ಆಗಿಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ನಾನು 20 ಸಾವಿರಕ್ಕೆ ಚಿಲ್ಲರೆ ಮಾಡಿಸಿಕೊಂಡಿದ್ದೀನಿ. ನನ್ನ ಜೇಬಿನಲ್ಲೇ ಇದೆ. ನಾನು ಸಮಸ್ಯೆಗೆ ಸಿಕ್ಕಿಕೊಂಡಿಲ್ಲ ಎಂದು ಉತ್ತರಿಸಿದರು.
↧
'ಆಸ್ಪತ್ರೆಯಲ್ಲೂ ಹಳೆ ನೋಟು ಸ್ವೀಕರಿಸುತ್ತಿಲ್ಲ'
↧