Quantcast
Channel: VijayKarnataka
Viewing all articles
Browse latest Browse all 6795

ವಿನಿಮಯಕ್ಕೆ ಕಾರ್ಮಿಕರು ಬ್ಯುಸಿ

$
0
0

-ನೋಟು ವಿನಿಮಯದ ಕಮಿಷನ್‌ ಕೆಲಸಕ್ಕೆ ಕಾರ್ಮಿಕರ ಬಳಕೆ-

ವಾರಕ್ಕೆ 150 ವಾಹನಗಳಲ್ಲಿ ನಗರಕ್ಕೆ ಬರುತ್ತಿದ್ದ ಕಾರ್ಮಿಕರು

ಮಂಜುನಾಥ್‌ ನಾಗಲೀಕರ್‌ ಬೆಂಗಳೂರು

ರಾಯಚೂರು, ಕೊಪ್ಪಳ, ಬೀದರ್‌, ಯಾದಗಿರಿಯಿಂದ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು ತುಂಬಿಕೊಂಡು ಬರುತ್ತಿದ್ದ ಕ್ರೂಸರ್‌ ವಾಹನಗಳ ಸಂಚಾರ ಐದು ದಿನಗಳಿಂದ ದಿಢೀರ್‌ ಬಂದ್‌ ಆಗಿದೆ.

ಕಟ್ಟಡ ಕಾರ್ಮಿಕರನ್ನು ಬೆಂಗಳೂರಿಗೆ ಕರೆ ತರುವುದು ಹಾಗೂ ಇಲ್ಲಿಂದ ಅವರ ಊರುಗಳಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದ ಏಜೆಂಟರಿಗೆ ಈಗ ಕೆಲಸವೇ ಇಲ್ಲ. ಈ ಎಲ್ಲ ಬದಲಾವಣೆಗೆ ಕಾರಣ ಹಳೆಯ 500, 1000 ನೋಟುಗಳ ಚಲಾವಣೆ ರದ್ದುಗೊಳಿಸಿರುವುದು.

ಕೆಲಸ ಅರಸಿಕೊಂಡು ಬೆಂಗಳೂರಿಗೆ ಬರುವ ಕಾರ್ಮಿಕರನ್ನು ಒಟ್ಟುಗೂಡಿಸಿ ಬಿಲ್ಡರ್ಸ್‌ಗಳಿಗೆ ಒದಗಿಸುವುದೇ ಏಜೆಂಟರ ಕೆಲಸ. ಕೃಷಿ ಚಟುವಟಿಕೆ ಇಲ್ಲದ ಸಂದರ್ಭದಲ್ಲಿ ಕಟ್ಟಡ ಕೆಲಸಕ್ಕೆ ಭರಪೂರ ಸಂಖ್ಯೆಯಲ್ಲಿ ಕಾರ್ಮಿಕರು ಬರುತ್ತಿದ್ದರು. ಲಗೇಜ್‌ ಸಮೇತ ಕಾರ್ಮಿಕರು ಬೆಂಗಳೂರಿಗೆ ಹೋಗಿ ಬರುವ ವ್ಯವಸ್ಥೆಯನ್ನು ಏಜೆಂಟರು ಮಾಡುತ್ತಿದ್ದರು. ಬೆಂಗಳೂರಿನ ದಾರಿ ಗೊತ್ತಿಲ್ಲದವರು ಸುಲಭವಾಗಿ ಏಜೆಂಟರ ದಾಳವಾಗುತ್ತಿದ್ದರು. ಒಂದು ವಾಹನದಲ್ಲಿ 20 ಮಂದಿಯಂತೆ ಪ್ರತಿ ವಾರ 150ಕ್ಕೂ ಹೆಚ್ಚಿನ ವಾಹನಗಳು ಕಾರ್ಮಿಕರನ್ನು ಕರೆದುಕೊಂಡು ಬೆಂಗಳೂರಿಗೆ ಬರುತ್ತಿದ್ದವು. ಇದು ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿತ್ತು.

ಆದರೆ ಕೇಂದ್ರ ಸರಕಾರ ನ.8ರಂದು ದೊಡ್ಡ ನೋಟುಗಳನ್ನು ನಿಷೇಧಿಸಿದ ಬಳಿಕ ಕಾರ್ಮಿಕರು ಬೆಂಗಳೂರು ಕಡೆಗೆ ಮುಖ ಮಾಡಿಲ್ಲ. ಕಾಳಧನಿಕರು ಈ ಕಾರ್ಮಿಕರಿಗೆ ಕಮಿಷನ್‌ ಆಸೆ ತೋರಿಸಿ ನೋಟು ವಿನಿಯಮ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ ದಿನಕ್ಕೆ 500 ರೂ.ನಿಂದ ಸಾವಿರ ರೂ. ಹಣ ಕೊಡಲಾಗುತ್ತಿದೆ. ಇದರ ಪರಿಣಾಮ ನಮ್ಮ ಬಿಸಿನೆಸ್‌ಗೆ ಹೊಡೆತ ಬಿದ್ದಿದೆ ಎಂದು ಕಾರ್ಮಿಕರ ಏಜೆಂಟ್‌ ಕಮ್‌ ಕ್ರೂಸರ್‌ ಮಾಲೀಕ ಕುಮಾರ್‌ ಬೇಸರ ವ್ಯಕ್ತಪಡಿಸುತ್ತಾರೆ.

ಕಾರ್ಮಿಕರ ದುರುಪಯೋಗ ಕುರಿತು ಪತ್ರಿಕೆ ಜತೆ ಮಾತನಾಡಿದ ಕುಮಾರ್‌ , ''ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆ ಕೊರತೆ ಕಾರಣ ಕೃಷಿ ಕೈ ಕೊಟ್ಟಿದೆ. ಹೊಟ್ಟೆ ಪಾಡಿಗಾಗಿ ಕಾರ್ಮಿಕರು ಬೆಂಗಳೂರಿಗೆ ಬರುವುದು ಅನಿವಾರ್ಯ. ಅವರು ಮಾಡುವ ಕೆಲಸದ ಮೇಲೆ ತಿಂಗಳಿಗೆ 20 ಸಾವಿರ ರೂ.ವರೆಗೂ ಕೂಲಿ ನೀಡಲಾಗುತ್ತದೆ. ಹೀಗಾಗಿ, ಕಾರ್ಮಿಕರು ಇರುವ ಹಳ್ಳಿಗಳಿಂದಲೇ ಅವರನ್ನು ಕರೆದುಕೊಂಡು ಬೆಂಗಳೂರು ನಗರದಲ್ಲಿ ಕೆಲಸ ಮಾಡಬೇಕಿರುವ ಸೈಟ್‌ನಲ್ಲಿ ತಂದುಬಿಡುತ್ತೇವೆ. ಆದರೆ, ಈಗ ಅವರಾರ‍ಯರೂ ಬೆಂಗಳೂರಿಗೆ ಬರುತ್ತಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಇರುವವರು ವಾಪಸ್‌ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಹಲವು ತಿಂಗಳುಗಳಿಂದ ಕೂಡಿಟ್ಟಿರುವ ಅಲ್ಪ ಸ್ವಲ್ಪ ಹಣವನ್ನು ವಿನಿಮಯ ಹಾಗೂ ಡೆಪಾಸಿಟ್‌ ಮಾಡಿಕೊಂಡಿದ್ದಾರೆ. ಆದರೆ, ವಾಪಸ್‌ ಕೆಲಸಕ್ಕೆ ಬರಬೇಕಿದ್ದ ಅಮಾಯಕ ಜನರನ್ನು ಕಾಳಧನಿಕರು, ಫೈನಾನ್ಸರ್‌ಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ,'' ಎಂದು ಹೇಳಿದರು.

ಮನೆಯಲ್ಲಿ ಅನಧಿಕೃತವಾಗಿ ಹಣ ಇಟ್ಟುಕೊಂಡವರ ಪರ ಮಧ್ಯವರ್ತಿಗಳು ಕೃಷಿ ಕಾರ್ಮಿಕರನ್ನು ಸಂಪರ್ಕಿಸುತ್ತಾರೆ. ಹಳೇ ನೋಟುಗಳನ್ನು ವಿನಿಮಯ ಮಾಡಿಸಿ ಹೊಸ ನೋಟುಗಳನ್ನು ತಂದು ಕೊಟ್ಟರೆ ಅವರಿಗೆ ಇಂತಿಷ್ಟು ಕಮೀಷನ್‌ ಹಣ ನೀಡಲಾಗುತ್ತಿದೆ. ಅದಕ್ಕಾಗಿ ಬೇರೆ ಬೇರೆ ಬ್ಯಾಂಕ್‌ಗಳಿಗೆ ತೆರಳಿ ತಮ್ಮ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ನರೇಗಾ ಕಾರ್ಡ್‌, ಬಿಪಿಎಲ್‌ ಕಾರ್ಡ್‌ಗಳನ್ನು ಬ್ಯಾಂಕ್‌ಗಳಿಗೆ ನೀಡಿ ಹಣ ವಿನಿಮಯ ಮಾಡಿಸುತ್ತಿದ್ದಾರೆ. ಬರೀ ಸರತಿ ಸಾಲಿನಲ್ಲಿ ನಿಲ್ಲುವುದರಿಂದಲೇ ಕಮೀಷನ್‌ ಹಣ ಬರುತ್ತಿರುವ ಕಾರಣ ಬೆಂಗಳೂರಿಗೆ ದುಡಿಯಲು ಹೋಗುವುದನ್ನು ನಿಲ್ಲಿಸಿದ್ದಾರೆ. ಹಳೇ ನೋಟುಗಳನ್ನು ನಿಷೇಧಿಸಿರುವ ಸರಕಾರದ ಉದ್ದೇಶದ ಕುರಿತು ಬಡ ಕಾರ್ಮಿಕರಿಗೆ ಮಾಹಿತಿ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಹಳೇ ನೋಟು ನೀಡುವ ಭಯವೂ ಇದೆ

ಬೆಂಗಳೂರಿಗೆ ಕೂಲಿಗೆ ತೆರಳಿದರೆ ಕಟ್ಟಡ ನಿರ್ಮಾಣದ ಮೇಸ್ತ್ರಿಗಳು ಹಳೇ ನೋಟುಗಳನ್ನು ನೀಡುತ್ತಾರೆ. ಆದರೆ, ಆ ನೋಟುಗಳು ಉಪಯೋಗಕ್ಕೆ ಬರುವುದಿಲ್ಲ ಎಂಬುವ ಭಯವೂ ಕಾರ್ಮಿಕರಲ್ಲಿದೆ. ತಾತ್ಕಾಲಿಕವಾಗಿ ದಿನ ನಿತ್ಯದ ಖರ್ಚಿಗೆ ಬೇಕಾದ ಹಣ ನೀಡುತ್ತೇವೆ. ಕೆಲ ದಿನಗಳ ನಂತರ ಮಾಡಿದ ಕೆಲಸಕ್ಕೆ ಪೂರ್ತಿ ಹಣವನ್ನು ಹೊಸ ನೋಟುಗಳ ರೂಪದಲ್ಲೇ ಪಾವತಿ ಮಾಡುವುದಾಗಿ ಮೇಸ್ತ್ರಿಗಳು ಹೇಳುತ್ತಿದ್ದಾರೆ. ಆದರೆ, ಹೇಳಿದ ಬಳಿಕ ಮತ್ತೆ ಹಳೇ ನೋಟುಗಳನ್ನು ಕೊಟ್ಟರೆ ಏನು ಮಾಡುವುದು ಎಂಬ ಅನುಮಾನವೂ ಕಾರ್ಮಿಕರಲ್ಲಿ ಮನೆ ಮಾಡಿದೆ ಎಂದು ಕ್ರೂಸರ್‌ ವಾಹನಗಳ ಮಾಲೀಕರು ಹೇಳುತ್ತಿದ್ದಾರೆ. ಇದರಿಂದಾಗಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರ ಕೊರತೆ ಉಂಟಾಗುತ್ತಿದೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್