-ಪದ್ಮಾ ಶಿವಮೊಗ್ಗ
ಪ್ರಕಾಶ್ ರೈ ನಿರ್ದೇಶನ ಮತ್ತು ಅಭಿನಯವಿರುವ ಚಿತ್ರ ‘ಇದೊಳ್ಳೆ ರಾಮಾಯಣ’ ಮಲಯಾಳಂ ಜನಪ್ರಿಯ ‘ಶಟರ್’ ಚಿತ್ರದ ರಿಮೇಕ್. ಈಗಾಗಲೇ ತಮಿಳಿಗೂ ರಿಮೇಕ್ ಆಗಿದೆ. ಅದನ್ನೇ ಕನ್ನಡ, ತೆಲುಗು ಭಾಷೆಗಳಿಗೆ ರಿಮೇಕ್ ಮಾಡಿದ್ದಾರೆ ಪ್ರಕಾಶ್ ರೈ. ಈ ಅಂಶ ಇಲ್ಲಿ ಮುಖ್ಯವಲ್ಲ. ಇಡೀ ಚಿತ್ರ ಹೇಗೆ ಬಂದಿದೆ ಎನ್ನುವುದೇ ವಿಷಯ. ಒಂದು ಸಾಲಿನಲ್ಲಿ ಹೇಳಬೇಕಾದರೆ, ಈ ಸಿನಿಮಾ ಕ್ಲಾಸ್.
ದುಬೈನಲ್ಲಿ ಕೆಲ ವರ್ಷ ಹಣ ಗಳಿಸ ತಾಯ್ನಾಡಿಗೆ ಬಂದು ನೆಲೆಸುವ ಭುಜಂಗಯ್ಯ (ಪ್ರಕಾಶ್ ರೈ) ಸ್ವ್ವಪ್ರತಿಷ್ಠೆಯ ಮನುಷ್ಯ. ಊರಲ್ಲಿ ನಡೆಯುವ ರಾಮನವಮಿ ನಾಟಕದಲ್ಲಿ ರಾವಣನ ಪಾತ್ರಧಾರಿ. ‘ಊರಿಗೆ ಉಪಕಾರಿ, ಮನೆಗೆ ಮಾರಿ’. ಹೆಂಡತಿ (ಸುಧಾ ಬೆಳವಾಡಿ) ಮತ್ತು ಮಗಳ ಮುಂದೆ ಅಹಂ ತೋರಿಸುವವ. ರಾಮನವಮಿ ವೇಳೆ ಅಪರಿಚಿತ ಹೆಣ್ಣಿನ ಜತೆ ತನ್ನ ಮನೆ ಮುಂದಿನ ಖಾಲಿ ಅಂಗಡಿಯೊಳಗೆ ಇಡೀ ರಾತ್ರಿ ಸಿಕ್ಕಿಕೊಳ್ಳುತ್ತಾನೆ. ಊರಿನ ಜನರೆದುರು ಮರ್ಯಾದೆ ಹೋಗುವುದನ್ನು ಊಹಿಸಿ ಕಣ್ಣೀರು ಹಾಕುತ್ತಾನೆ. ಅಲ್ಲಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ಸಿನಿಮಾ.
ಚಾಲ್ತಿಯಲ್ಲಿ ಇಲ್ಲದ ಚಿತ್ರ ನಿರ್ದೇಶಕ (ಅಚ್ಯುತ್), ಭುಜಂಗಯ್ಯನ ಈ ಸ್ಥಿತಿಗೆ ಕಾರಣನಾಗುವ ಅವನ ಬಲಗೈ ಬಂಟ ಶಿವ (ಅರವಿಂದ್ ಕುಪ್ಲಿಕರ್), ಇವನನ್ನು ಮಟ್ಟ ಹಾಕಲು ಕಾಯುವ ಪೋಲಿಸ್ ರಾಮ್ದಾಸ್ (ರಂಗಾಯಣ ರಘು), ಭುಜಂಗಯ್ಯನ ಜತೆ ಕೋಣೆಯಲ್ಲಿ ಸಿಕ್ಕಿಕೊಳ್ಳುವ ಹುಡುಗಿ (ಪ್ರಿಯಾಮಣಿ). ಎಲ್ಲವೂ ಪ್ರಮುಖ ಪಾತ್ರಗಳೇ.
ಮನೆ ಮುಂದೆಯೇ ಇರುವ ಅಂಗಡಿಯಲ್ಲಿರುವ ಭುಜಂಗಯ್ಯನಿಗೆ ಎಲ್ಲಿ ತಾನು ಹೆಣ್ಣಿನ ಜತೆ ಇರುವ ಸಂಗತಿ ಜನರಿಗೆ ಗೊತ್ತಾಗುತ್ತದೋ ಎಂಬ ಭಯ. ಪ್ರಿಯಾಮಣಿಗೆ ಇದ್ಯಾವುದರ ಪರಿವೇ ಇಲ್ಲ. ಅವಳು ಭಜಾರಿ, ಬಿಂದಾಸ್ ಹುಡುಗಿ. ಶಿವನಿಗೆ ತಾನು ಯಜಮಾನನನ್ನು ಇಕ್ಕಟ್ಟಿಗೆ ಸಿಕ್ಕಿಸಿಬಿಟ್ಟೆ ಎಂಬ ಚಡಪಡಿಕೆ. ಸಿನಿಮಾ ನಿರ್ದೇಶನದ ಕನಸು ಹೊತ್ತು ಬರಿಗೈಯಲ್ಲಿ ತಿರುಗುವ ಅಚ್ಯುತ್. ಇವರೆಲ್ಲರೂ ಪಾತ್ರಕ್ಕೆ ತಕ್ಕಂತೆ ಸಹಜವಾಗಿ ನಟಿಸಿ ದೃಶ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅರವಿಂದ್ ಮತ್ತು ಪ್ರಕಾಶ್ ರೈ ನಟನೆಯಲ್ಲಿ ಹೆಚ್ಚು ಮಿಂಚಿದ್ದಾರೆ.
ಸಂಭಾಷಣೆ, ಪಾತ್ರ ಪೋಷಣೆ ಎಲ್ಲವೂ ಒಂದಕ್ಕೊಂದು ಪೂರಕವಾಗಿದೆ. ಉಳಿದಂತೆ ತಾಂತ್ರಿಕವಾಗಿ ಚಿತ್ರ ಸಮೃದ್ಧವಾಗಿದೆ. ಛಾಯಾಗ್ರಾಹಣ ಸೊಗಸಾಗಿದೆ. ಇಳಯರಾಜ ಅವರ ಸಂಗೀತ ಹಿತವಾಗಿದೆ.
ಚಿತ್ರದಲ್ಲಿ ಸಣ್ಣ ಸಸ್ಪೆನ್ಸ್ ಇದೆ, ಪ್ರೇಕ್ಷಕ ಅದನ್ನು ಸುಲಭವಾಗಿ ಗ್ರಹಿಸುತ್ತಾನೆ. ಅದನ್ನು ಹೇಗೆ ನಿರ್ದೇಶಕ ತೆರೆದಿಡುತ್ತಾನೆ ಎನ್ನುವ ಕುತೂಹಲವಷ್ಟೇ ಉಳಿಯುವುದು. ಕುಡಿತ ಮತ್ತು ಹೆಣ್ಣಿನ ಸಹವಾಸ ಎಂಥ ಇಕ್ಕಟ್ಟಿಗೆ ಸಿಲುಕಿಸಬಲ್ಲದು ಎನ್ನುವುದನ್ನು ತೋರಿಸುವುದರ ಜತೆಗೆ ಒಂದು ಮೆಸೇಜ್ ಕೂಡಾ ಇದೆ. ಡಾನ್ಸ್, ಫೈಟ್ ಇಲ್ಲದ, ಕತೆಗೆ ಪ್ರಾಮಾಣಿಕವಾಗಿ, ಅಚ್ಚುಕಟ್ಟಾಗಿ ಮಾಡಿದ ಚಿತ್ರ ಇದೊಳ್ಳೆ ರಾಮಾಯಣ. ಒಮ್ಮೆ ನೋಡಲು ಅಡ್ಡಿಯಿಲ್ಲ.
ಕನ್ನಡ ಚಿತ್ರ: ಇದೊಳ್ಳೆ ರಾಮಾಯಣ