Quantcast
Channel: VijayKarnataka
Viewing all articles
Browse latest Browse all 6795

ದನ ಕಾಯೋನು ಚಿತ್ರ ವಿಮರ್ಶೆ: ದನ ಕಾಯೋನು ಮತ್ತು ಜಾಗತೀಕರಣ

$
0
0

ಕನ್ನಡ ಚಿತ್ರ: ದನ ಕಾಯೋನು

- ಶರಣು ಹುಲ್ಲೂರು

ದನ ಕಾಯೋನು ಚಿತ್ರದ ಮೂಲಕ ಎರಡು ಭಯಂಕರ ಆರೋಪಗಳಿಂದ ಮುಕ್ತವಾಗಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌ ಮತ್ತು ನಟ ದುನಿಯಾ ವಿಜಯ್‌. ಸಾಮಾನ್ಯವಾಗಿ ಭಟ್ಟರ ಸಿನಿಮಾಗಳಲ್ಲಿ ಕತೆಯೇ ಇರುವುದಿಲ್ಲ ಅನ್ನುವ ಮಾತಿತ್ತು. ಇತ್ತೀಚೆಗೆ ವಿಜಯ್‌ ಕೇವಲ ಸಾಹಸ ಸನ್ನಿವೇಶಗಳಿರುವ ಪಾತ್ರಗಳಿಗೆ ಮಾತ್ರ ಸೀಮಿತವಾಗುತ್ತಿದ್ದಾರೆ ಅನ್ನುವ ಅಸಹನೆ ಇತ್ತು. ಅವೆರಡೂ ಇಲ್ಲಿ ಮಾಯವಾಗಿವೆ. ಈ ಬಾರಿ ನಿರ್ದೇಶಕರು ಗಂಭೀರ ವಿಷಯವನ್ನೇ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ವಿಜಯ್‌ ಮತ್ತೆ ಹಳೆಯ ದಿನಗಳಿಗೆ ಮರಳಿದ್ದಾರೆ. ಈ ಕಾರಣಕ್ಕಾಗಿ ದನ ಕಾಯೋನು ವಿಶೇಷ ಸಿನಿಮಾ ಅನಿಸುತ್ತದೆ.

ಇಂದು ಜಾಗತೀಕರಣದ ಬಿಸಿ ಹಳ್ಳಿಯನ್ನೂ ಬಿಟ್ಟಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಲಾಭಕೋರತನ ನಮಗರಿವಿಗೆ ಬಾರದೇ ದೇಸಿತನದ ಜತೆಗಿನ ಮಾನವ ಸಂಬಂಧದವನ್ನು ನುಂಗಿ ಹಾಕುತ್ತಿವೆ. ಈ ಸೂಕ್ಷ್ಮವಾದ ಎಳೆಯೇ ಸಿನಿಮಾ ಆಗಿದೆ.

ಅದು ನಂದಿಗುಡ್ಡ ಎಂಬ ಗ್ರಾಮ. ದನಗಳನ್ನು ಮೇಯಿಸುವುದರಲ್ಲೇ ಫೇಮಸ್‌ ಆದ ಕೂಡಿಕೆ ಕೃಷ್ಣಪ್ಪ (ಬಿರಾದಾರ್‌), ಅವನ ಮಗ ಕೆಂಪರಾಜು ಅಲಿಯಾಸ್‌ ಡಾಕ್ಟರ್‌ ಡೊಕೊಮೊ (ದುನಿಯಾ ವಿಜಯ್‌) ಮತ್ತು ಕೂಡಿಕೆಗಾಗಿಯೇ ಸಾಕಿರುವ ಹೋರಿ ಶಂಕರ್‌ ಆ ಗ್ರಾಮದಲ್ಲಿರುವ ಕುಟುಂಬ. ತುಂಡು ಭೂಮಿಯೂ ಇಲ್ಲದ ಈ ಜನಕ್ಕೆ ದೊಡ್ಡ ಹಾಲಿನ ಡೈರಿಯನ್ನು ಕಟ್ಟುವ ಆಸೆ. ಈ ಆಸೆಗೆ ತಿದಿ ಒತ್ತುವವನು ಅದೇ ಊರಿನ ಸಬ್ಸಿಡಿ (ರಂಗಾಯಣ ರಘು). ಡೊಕೊಮೊ ಕುಟುಂಬಕ್ಕೆ ಆಧಾರವಾಗಿದ್ದ ಹೋರಿಯನ್ನೇ ಆಧಾರವಾಗಿಟ್ಟುಕೊಂಡು ಸಾಲ ಕೇಳಲು ಸಹಕಾರಿ ಬ್ಯಾಂಕ್‌ಗೆ ಬರುತ್ತಾರೆ. ಬ್ಯಾಂಕಿನ ಕಾಯ್ದೆಯು ಇವರಿಗೆ ಸಾಲ ಸಿಗಲ್ಲ. ಈ ಮಧ್ಯೆ ದನಕರುಗಳ ಅಧ್ಯಯನಕ್ಕಾಗಿ ಆ ಊರಿಗೆ ವಿದೇಶಿ ಯುವತಿಯೊಬ್ಬಳು ಬರುತ್ತಾಳೆ. ಡೊಕೊಮೊ ಹತ್ತಿರದ ಹೋರಿಯಲ್ಲಿ ವಿಶೇಷ ಗುಣಗಳು ಇರುವುದನ್ನು ಪತ್ತೆ ಮಾಡುತ್ತಾಳೆ. ಆಲೋಚನೆಗೂ ನಿಲುಕದ ರೀತಿಯಲ್ಲಿ ವ್ಯವಹಾರ ಕೂಡ ನಡೆಯುತ್ತಿದೆ. ಆಗ ಕೃಷ್ಣಪ್ಪನ ಪಾತ್ರದ ಮೂಲಕ ಜಾಗತೀಕರಣದ ಮತ್ತೊಂದು ಮುಖವನ್ನು ಬಿಚ್ಚಿಡುತ್ತಾರೆ ನಿರ್ದೇಶಕರು. ಇದರ ಜತೆ ಜತೆಗೆ ಪ್ರೀತಿಯ ಎಳೆಯನ್ನೂ ಹೆಣೆದಿದ್ದಾರೆ. ಪೊಲೀಸ್‌ ಆಗುವ ಕನಸು ಹೊತ್ತವಳು ಜುಮ್ಮಿ (ಪ್ರಿಯಾಮಣಿ). ತನ್ನ ಕನಸಿನ ಈಡೇರಿಕೆಗಾಗಿ ಎಂತಹ ಕೆಲಸಕ್ಕೂ ಈಕೆ ಸಿದ್ಧಳು. ಇಂಥವಳ ಮೇಲೆ ಡೊಕೊಮೊನ ಪ್ರೀತಿ. ಆದರ್ಶಪ್ರಾಯ ನಾಯಕ, ಆಸೆಯ ನಾಯಕಿ. ಈ ನಡುವಿನ ಪ್ರೀತಿಯನ್ನು ಕೂಡ ನಿರ್ದೇಶಕರು ಜಾಗತೀಕರಣದ ಮತ್ತೊಂದು ರೂಪಕ್ಕೆ ಹೋಲಿಸುವುದು ವಿಶೇಷ.

ಸಿನಿಮಾ ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವುದರಿಂದ ಆ ಪರಿಸರ. ಅಲ್ಲೊಂದು ಚೇರ್ಮನ್‌ (ಸುಚೇಂದ್ರ ಪ್ರಸಾದ್‌) ಕುಟುಂಬ. ಗ್ರಾಮಸ್ಥರನ್ನು ಬಳಲುವಂತೆ ನೋಡಿಕೊಳ್ಳುವ ಅವರ ಮನಸ್ಥಿತಿ... ಹೀಗೆ ಈ ಹೊತ್ತಿನ ಗ್ರಾಮೀಣ ವ್ಯವಸ್ಥೆಯನ್ನೂ ಪಾತ್ರಗಳ ಮೂಲಕ ಅಣಕ ಮಾಡುತ್ತಾರೆ. ಕತೆಯ ಭಾಗವಾಗಿ ಸಿನಿಮಾ ಇಷ್ಟವಾಗುತ್ತಾ ಹೋದರೂ, ಎಂದಿನಂತೆ ನಿರ್ದೇಶಕರು ಮಾತುಗಳಿಗೆ ಜೋತು ಬಿದ್ದಿರುವುದರಿಂದ, ಪರಿಣಾಮಕಾರಿ ದೃಶ್ಯಗಳೂ ಸಪ್ಪೆ ಅನಿಸಿಬಿಡುತ್ತವೆ. ಹಾಗಾಗಿ ನಿರ್ದೇಶಕರ ಹಿಂದಿನ ಸಿನಿಮಾಗಳ ಮಾದರಿ ಬೇಡವೆಂದರೂ ನೆನಪಾಗಿ ಕಸಿವಿಸಿ ಉಂಟು ಮಾಡುತ್ತವೆ. ಗ್ರಾಮೀಣ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬಂದಿದ್ದರೂ, ಆ ಪರಿಸರವನ್ನು ಮತ್ತಷ್ಟು ಸಮರ್ಥವಾಗಿ ಕಟ್ಟಿಕೊಡಬೇಕಿತ್ತು ಅನಿಸದೇ ಇರದು.

ವಿಜಯ್‌ ಮತ್ತು ರಂಗಾಯಣ ರಘು ಪಾತ್ರಗಳ ಆರ್ಭಟಕ್ಕೆ ಕೊಂಚ ಬ್ರೇಕ್‌ ಹಾಕಿದ್ದರೆ, ಆ ಪಾತ್ರಗಳ ನೋವು ಮತ್ತಷ್ಟು ಮನಮುಟ್ಟುತ್ತಿತ್ತು. ಪ್ರಿಯಾಮಣಿ, ಬಿರಾದಾರ ನಟನೆ ಗಮನಾರ್ಹ. ಬ್ಯಾಂಕಿನ ಮ್ಯಾನೇಜರ್‌ ಆಗಿ ಜಹಾಂಗೀರ ಕೂಡ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿ.ಹರಿಕೃಷ್ಣರ ಸಂಗೀತ ಮತ್ತು ಯೋಗರಾಜ್‌ ಭಟರ್‌ ಸಾಹಿತ್ಯ ಮಾತಿನ ಓಟಕ್ಕೆ ಬ್ರೇಕ್‌ ನೀಡುತ್ತವೆ. ಕಲಾತ್ಮಕ ಸಿನಿಮಾಗಳಿಗೆ ಬೇಕಿರುವ ಎಲ್ಲಾ ಅಂಶಗಳಿರುವ ಕತೆಗೆ, ಕಮರ್ಷಿಯಲ್‌ ಟಚ್‌ ಕೊಟ್ಟು ದನ ಕಾಯೋಕೆ ಹಚ್ಚಿದ್ದಾರೆ ನಿರ್ದೇಶಕರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>