ಬೆಂಗಳೂರು: ನಗರದ ಹಲವೆಡೆ ಸೆ.25ರಂದು 121 ಎಕರೆ ಸರಕಾರಿ ಭೂಮಿ ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರದೊಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ತಹಶೀಲ್ದಾರ್ಗಳಿಗೆ ಆದೇಶಿಸಿದೆ. ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ, ಉತ್ತರ, ಉತ್ತರ (ಹೆಚ್ಚುವರಿ), ಪೂರ್ವ ಮತ್ತು ಆನೇಕಲ್ ತಾಲೂಕಿನಲ್ಲಿ ಒತ್ತುವರಿ ಕಾರ್ಯಾಚರಣೆ ನಡೆಸಿದ್ದ ಜಿಲ್ಲಾಡಳಿತವು ಒಟ್ಟು 121 ಎಕರೆಯನ್ನು ಸರಕಾರದ ಸುಪರ್ದಿಗೆ ಪಡೆದುಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ನ್ಯಾಯಾಲಯದ ಅಧ್ಯಕ್ಷ ನ್ಯಾ. ಎಚ್.ಎನ್.ನಾರಾಯಣ್, ನ್ಯಾಯಿಕ ಸದಸ್ಯರಾದ ಆರ್.ಎಚ್.ರೆಡ್ಡಿ ಮತ್ತು ಬಿ.ಬಾಲಕೃಷ್ಣ ಅವರನ್ನೊಳಗೊಂಡಪೀಠ, ಭೂ ಕಬಳಿಕೆ (ನಿಷೇಧ) ವಿಶೇಷ ಅಧಿನಿಯಮ 2011ರ ಕಲಂ 9ರ ಅನ್ವಯ ಸ್ವಪ್ರೇರಣೆಯಿಂದ ವಿಚಾರಣೆ ಕೈಗೊಂಡಿದೆ. ತಾವರಕೆರೆ ಹೋಬಳಿಯ ಸರ್ವೇ ನಂ. 59ರಲ್ಲಿ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯಕ್ಕೆ ಸೇರಿದ 56.13 ಎಕರೆ, ವರ್ತೂರು ಗ್ರಾಮದ ಸರ್ವೇ ನಂ. 15ರಲ್ಲಿ 1.27 ಎಕರೆ, ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್ ಗ್ರಾಮದ ಸರ್ವೇ ನಂ. 170ರಲ್ಲಿ 8.16 ಎಕರೆ, ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ಅಡಿಗಾರ ಕಲ್ಲಹಳ್ಳಿಯ ಸರ್ವೇ ನಂ. 47ರಲ್ಲಿ 24 ಎಕರೆ, ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಹುಣ್ಣಿಗೆರೆ ಗ್ರಾಮದ ಸರ್ವೇ ನಂ. 109ರಲ್ಲಿ 6.07 ಎಕರೆ, ಸರ್ವೇ ನಂ. 120ರಲ್ಲಿ 1.20 ಎಕರೆಯನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಉತ್ತರ (ಹೆಚ್ಚುವರಿ) ತಾಲೂಕಿನ ಜಾಲ ಹೋಬಳಿಯ ಬೆಟ್ಟಹಲಸೂರು ಗ್ರಾಮದ ಸರ್ವೇ ನಂ. 265ರಲ್ಲಿ 13 ಗುಂಟೆ, ಸಾತನೂರು ಗ್ರಾಮದ ಸರ್ವೇ ನಂ. 31ರಲ್ಲಿ 10 ಗುಂಟೆ, ನವರತ್ನ ಅಗ್ರಹಾರ ಗ್ರಾಮದ ಸರ್ವೇ ನಂ. 13ರಲ್ಲಿ 1.20 ಎಕರೆ, ಬಿ.ಕೆ.ಹಳ್ಳಿ ಗ್ರಾಮದ ಸರ್ವೇ ನಂ. 31ರಲ್ಲಿ 1.08 ಎಕರೆ, ಹೆಸರಘಟ್ಟ ಹೋಬಳಿಯ ಮೈಲಪ್ಪನಹಳ್ಳಿ ಗ್ರಾಮದ ಸರ್ವೇ ನಂ. 22ರಲ್ಲಿ 13.07 ಎಕರೆ, ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಾಡ ಅಗ್ರಹಾರ ಗ್ರಾಮದ ಸರಕಾರಿ ಬಂಡೆ ಸರ್ವೇ ನಂ. 78ರಲ್ಲಿ 3.12 ಎಕರೆಯನ್ನು ಜಿಲ್ಲಾಡಳಿತವು ವಶಕ್ಕೆ ಪಡೆದಿತ್ತು.
↧
ಸರಕಾರಿ ಭೂಮಿ ವಶ: ವರದಿ ಸಲ್ಲಿಕೆಗೆ ವಿಶೇಷ ನ್ಯಾಯಾಲಯ ಆದೇಶ
↧