Quantcast
Channel: VijayKarnataka
Viewing all articles
Browse latest Browse all 6795

ಈರುಳ್ಳಿಗೆ ಬೆಂಬಲ

$
0
0

ಇಂದಿನಿಂದಲೇ ಖರೀದಿ ಕೇಂದ್ರಗಳ ಆರಂಭ / ಪ್ರತಿ ಕಿಲೋಗೆ 6.24 ರೂ. ಬೆಂಬಲ ಬೆಲೆ ನಿಗದಿ

ಬೆಂಗಳೂರು: ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರ ಸಂಕಷ್ಟ ನಿವಾರಣೆಗೆ ಕೊನೆಗೂ ಮುಂದಾಗಿರುವ ರಾಜ್ಯ ಸರಕಾರ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ನಿರ್ಧರಿಸಿದೆ.

ಎಲ್ಲ ಮಾದರಿಯ ಈರುಳ್ಳಿಗೆ ಕಿಲೋಗೆ 6 ರೂ. 24 ಪೈಸೆಯಂತೆ ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ಶುಕ್ರವಾರದಿಂದಲೇ ಖರೀದಿ ಕೇಂದ್ರಗಳನ್ನು ತೆರೆಯಲು ಆದೇಶಿಸಲಾಗಿದೆ. ಜತೆಗೆ ಬೆಂಬಲ ಬೆಲೆಯಲ್ಲಿ ಖರೀದಿಗೆ 50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಸಂಕಷ್ಟಕ್ಕೆ ಸ್ಪಂದನ:

ರಾಜ್ಯದಲ್ಲಿ ಐದಾರು ವಾರಗಳ ಹಿಂದೆಯೇ ಈರುಳ್ಳಿ ಕೊಯ್ಲು ಆರಂಭವಾಗಿದ್ದು, ಬೆಲೆ ಕುಸಿತದಿಂದಾಗಿ ಈರುಳ್ಳಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ ಉದ್ಭವಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನೆರವಿನ ನಿರೀಕ್ಷೆಯಲ್ಲಿ ರಾಜ್ಯ ಸರಕಾರ ಕಾದಿತ್ತು. ಆದರೆ, ಕೇಂದ್ರದಿಂದ ನಿರ್ದಿಷ್ಟ ಭರವಸೆಯ ಮಾಹಿತಿ ಬಾರದ ಕಾರಣ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆದು ಬೆಂಬಲಕ್ಕೆ ನಿಲ್ಲಲು ನಿರ್ಧರಿಸಲಾಯಿತು.

ಸಭೆಯ ತೀರ್ಮಾನವನ್ನು 'ವಿಕ'ಗೆ ತಿಳಿಸಿದ ಜಯಚಂದ್ರ, ಎಷ್ಟೇ ಉತ್ಪನ್ನ ಬಂದರೂ ಖರೀದಿಸುವಂತೆ ಸೂಚಿಸಲಾಗಿದೆ ಎಂದರು.

''ಕೇಂದ್ರದ ನೆರವಿಗೆ ಕಾಯುತ್ತಿದ್ದೆವು. ಸದ್ಯದ ಮಾಹಿತಿ ಪ್ರಕಾರ ಕೇಂದ್ರ ಸರಕಾರ ರಾಜ್ಯದ ಒಟ್ಟಾರೆ 22 ಲಕ್ಷ ಟನ್‌ ಈರುಳ್ಳಿ ಪೈಕಿ ಶೇ.10ನ್ನು ಮಾತ್ರ ಖರೀದಿ ಮಾಡಬಹುದು ಮತ್ತು ಆ ಪೈಕಿ ಶೇ.75 ನಷ್ಟವನ್ನು ರಾಜ್ಯ ಸರಕಾರ ಭರಿಸಬೇಕು. ಹಾಗಾಗಿ, ರಾಜ್ಯ ಸರಕಾರ ಈಗಲೇ ಮಧ್ಯಪ್ರವೇಶಕ್ಕೆ ನಿರ್ಧರಿಸಿತು,'' ಎಂದರು.

ಖರೀದಿ ಕೇಂದ್ರಗಳು

* ಬೆಳಗಾವಿ, ಧಾರವಾಡ, ಗದಗ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಸೇರಿ 8 ಜಿಲ್ಲೆಗಳಲ್ಲಿ ತಲಾ 1 ಖರೀದಿ ಕೇಂದ್ರ

* ಬೇಡಿಕೆ ಆಧರಿಸಿ ಬೇರೆಡೆಯೂ ಖರೀದಿ ಕೇಂದ್ರಗಳ ಸ್ಥಾಪನೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ.

ಸಂಕಷ್ಟದಲ್ಲಿ ರೈತರು

ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ 10 ರೂ.ಗಿಂತಲೂ ಕಡಿಮೆ ಬೆಲೆಗೆ ದೊರೆಯುತ್ತಿದೆ. ಇದರಲ್ಲಿ ರೈತರಿಗೆ ಸಿಗುವ ಮೊತ್ತ ಅತ್ಯಲ್ಪ. ಹಾಗಾಗಿ, ಅವರು ಬೆಳೆದ ಬೆಳೆಯನ್ನು ಹೊಲದಲ್ಲೇ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಬಲ ಬೆಲೆ ಸ್ವಲ್ಪ ಮಟ್ಟಿಗೆ ಸಾಂತ್ವನ ನೀಡಬಹುದು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>