Quantcast
Channel: VijayKarnataka
Viewing all articles
Browse latest Browse all 6795

ಉಗ್ರ ಹರಣಕ್ಕೆ ಪ್ರಧಾನಿ ಸಂಕಲ್ಪ

$
0
0

ಲಖನೌ ರಾಮಲೀಲಾ ಉತ್ಸವದಲ್ಲಿ ಪ್ರಧಾನಿ /ಲಂಕಾಸುರನ ದಹನದ ಮೂಲಕ ಪಾಕ್‌ಗೆ ಎಚ್ಚರಿಕೆ ರವಾನಿಸಿದ ಮೋದಿ

ಲಖನೌ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಸೇನೆ ನಡೆಸಿದ ‘ಸರ್ಜಿಕಲ್ ದಾಳಿ’ಯ ನಂತರ, ದಸರಾ ಉತ್ಸವದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ವಿಚಾರ ಮುಂದಿಟ್ಟುಕೊಂಡು ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸಂಪ್ರದಾಯ ಬದಿಗೊತ್ತಿ ಇದೇ ಮೊದಲ ಬಾರಿಗೆ ಪ್ರಧಾನಿ, ಲಖನೌದಲ್ಲಿ ನಡೆದ ಐತಿಹಾಸಿಕ ರಾಮಲೀಲಾ ಉತ್ಸವದಲ್ಲಿ ಪಾಲ್ಗೊಂಡು, ಎಲ್ಲರಿಗೂ ವಿಜಯದಶಮಿಯ ಶುಭಾಶಯ ಕೋರುತ್ತಾ ಭಾಷಣ ಶುರು ಮಾಡಿದರು. ಸುಮಾರು 20 ನಿಮಿಷದ ಭಾಷಣದಲ್ಲಿ ಭಾರತದ ಶ್ರೀಮಂತ ಪರಂಪರೆಯಿಂದ ಹಿಡಿದು ಭಯೋತ್ಪಾದನೆವರೆಗೆ ಮಾತನಾಡಿದರು.

‘‘ಗಡಿಯ ಎಲ್ಲೆಗಳಿಲ್ಲದ ಉಗ್ರವಾದ ಮಾನವತೆಯ ಅತಿ ದೊಡ್ಡ ಶತ್ರು. ಅದೊಂದು ನಮ್ಮ ಸಮಾಜಕ್ಕಂಟಿದ ವೈರಸ್. ಈ ರೋಗಾಣುವಿನ ವಿರುದ್ಧ ಹೋರಾಡಲು ಇಡೀ ಜಗತ್ತು ಒಂದಾಗಿ ನಿಲ್ಲಬೇಕು. ಭಯೋತ್ಪಾದನೆಗೆ ಬೆಂಬಲ ನೀಡುವವರಿಗೆ ತಕ್ಕ ಪಾಠ ಕಲಿಸಬೇಕಾಗಿದ್ದು, ಆ ಪ್ರಕ್ರಿಯೆಯನ್ನು ನಾವು ಈಗಾಗಲೇ ಪ್ರಾರಂಭಿಸಿದ್ದೇವೆ,’’ ಎಂದು ಪಾಕ್ ವಿರುದ್ಧ ಗುಡುಗಿದರು.

‘‘ಶ್ರೀಕೃಷ್ಣ, ಶ್ರೀರಾಮಚಂದ್ರನಂತಹ ದಿವ್ಯ ಪುರುಷರು ನೆಲೆಸಿದ ನಾಡು ಭಾರತ. ನಮ್ಮದು ಯುದ್ಧ ಮತ್ತು ಶಾಂತಿ ಎರಡನ್ನೂ ಸಮನಾಗಿ ಪರಿಗಣಿಸಿದ ದೇಶ. ಸಂಘರ್ಷದ ಬದಲು, ಶಾಂತಿಯತ್ತ ಹೋಗಲು ಬಯಸುತ್ತೇವೆ. ಆದರೆ ಆತ್ಮರಕ್ಷಣೆಗೆ ಪ್ರತಿದಾಳಿ ಅನಿವಾರ್ಯವಾಗುತ್ತದೆ,’’ ಎಂದು ಪಾಕ್‌ಗೆ ಎಚ್ಚರಿಸಿದರು.

ದುಷ್ಟತನ ಸಂಹರಿಸಬೇಕು:

‘‘ಪ್ರತಿ ವರ್ಷವೂ ವಿಜಯದಶಮಿಯಂದು ಲಂಕಾಸುರನ ಪ್ರತಿಕೃತಿ ಸುಟ್ಟು ಹಾಕುತ್ತೇವೆ. ಈ ಪದ್ಧತಿಯ ಅರ್ಥವೇನು? ರಾವಣನ ಪ್ರತಿಕೃತಿ ದಹಿಸಿದಾಗ ಇದೇ ದುಷ್ಟ ಶಕ್ತಿ ನಮ್ಮ ಜೀವನ ಹಾಗೂ ಸಮಾಜದಲ್ಲಿಯೂ ನಡೆಯುತ್ತಿದೆ ಎಂಬುದನ್ನು ಮನಗಾಣಬೇಕು. ವರ್ಷಪೂರ್ತಿ ಮಾಡಿದ ತಪ್ಪುಗಳನ್ನು ಪರಾಮರ್ಶಿಸಿಕೊಳ್ಳಬೇಕು. ಆ ತಪ್ಪುಗಳಿಂದ ಪಾಠ ಕಲಿಯಬೇಕು,’’ ಎಂದರು. ‘‘ಸೀತೆಗೆ ಕಾಟ ಕೊಟ್ಟಿದ್ದಕ್ಕೆ ಪ್ರತಿಯಾಗಿ ಪ್ರತಿ ವರ್ಷವೂ ನಾವು ರಾವಣನ ಪ್ರತಿಕೃತಿಯನ್ನು ದಹಿಸುತ್ತೇವೆ. ತಾಯಿ ಗರ್ಭದಲ್ಲಿರುವಾಗಲೇ ಹೆಣ್ಣು ಭ್ರೂಣವನ್ನು ಕೊಲ್ಲುವಂಥ ರಾವಣನಂಥ ಮನಸ್ಥಿತಿಯನ್ನು ನಮ್ಮಿಂದ ದೂರ ಮಾಡಿಕೊಳ್ಳಬೇಕು,’’ ಎಂದೂ ಹೇಳಿದರು.

ಜಟಾಯು ಆದರೂ ಆಗೋಣ:

‘‘ದುಷ್ಟರ ವಿರುದ್ದದ ಹೋರಾಟಕ್ಕೆ ರಾಮಾಯಣವೇ ಸಾಕ್ಷಿ. ರಾವಣನ ಉಗ್ರತನದ ವಿರುದ್ಧ ಮೊದಲು ಯುದ್ಧ ಸಾರಿದ್ದು ಜಟಾಯು. ನಾವೆಲ್ಲರೂ ರಾಮನಾಗಲು ಸಾಧ್ಯವಾಗದೆ ಹೋದರೂ, ಹೆಣ್ಣಿನ ರಕ್ಷಣೆಗಾಗಿ ಹೋರಾಡಿದ ಜಟಾಯುವಾಗಲಾದರೂ ಪ್ರಯತ್ನಿಸೋಣ, ಭಯೋತ್ಪಾದನೆಯನ್ನು ತೊಲಗಿಸಲು ಒಂದಾಗೋಣ,’’ ಎಂದು ಕರೆ ನೀಡಿದರು.

-----

ಭಾರತೀಯರಿಗೆ ‘ಸುದರ್ಶನ ಚಕ್ರ’ ಹಾಗೂ ಗಾಂಧೀಜಿಯವರ ‘ಚರಕ’ದ ಶಕ್ತಿಯೇನೆಂಬುದು ಗೊತ್ತು. ನಾವು ಯುದ್ಧ ಹಾಗೂ ಬುದ್ಧನನ್ನೂ ಕಂಡಿದ್ದೇವೆ. ನಮ್ಮದು ಯಾವತ್ತಿದ್ದರೂ ಬುದ್ಧ ಪಥವೇ (ಶಾಂತಿ ಮಾರ್ಗ). ಆದರೆ ಆತ್ಮರಕ್ಷಣೆಗೆ ‘ಯುದ್ಧಪಥ’ವೂ ಅನಿವಾರ್ಯವಾಗುತ್ತದೆ.

* ನರೇಂದ್ರ ಮೋದಿ, ಪ್ರಧಾನಿ

ದಿಲ್ಲಿ ಕಾರ‌್ಯಕ್ರಮದಲ್ಲಿ ಗಣ್ಯರ ದಂಡು

ದಿಲ್ಲಿಯ ಕೆಂಪುಕೋಟೆಯ ಆವರಣದಲ್ಲಿ ಆಯೋಜಿಸಲಾಗಿದ್ದ ‘ರಾಮಲೀಲಾ ಉತ್ಸವ’ದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪಾಧ್ಯಕ್ಷ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವ ಹರ್ಷವರ್ಧನ್, ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಸೇರಿದಂತೆ ಗಣ್ಯರ ದಂಡು ಹಾಜರಿತ್ತು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>