ತೂಫಾನ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದ ನಿರ್ದೇಶಕ ಸ್ಮೈಲ್ ಸೀನು, ಮೂರ್ನಾಲ್ಕು ವರ್ಷಗಳ ನಂತರ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ಬಳ್ಳಾರಿ ದರ್ಬಾರ್ ಎಂದು ಹೆಸರಿಟ್ಟು ಕುತೂಹಲ ಮೂಡಿಸಿದ್ದಾರೆ. ಎರಡ್ಮೂರು ವರ್ಷಗಳ ಹಿಂದೆ ಸ್ಯಾಂಡಲ್ವುಡ್ನಲ್ಲಿ ತೂಫಾನ್ ಸೃಷ್ಟಿ ಮಾಡಿದ್ದರು ನಿರ್ದೇಶಕ ಸ್ಮೈಲ್ ಸೀನು. ಆನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಈಗ ಮತ್ತೊಂದು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ವಾಪಸ್ಸಾಗಿದ್ದಾರೆ. ಈ ಬಾರಿ ತಮ್ಮದೇ ನೆಲದ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಟೈಟಲ್ನಿಂದಾಗಿಯೇ ಚಿತ್ರವು ಸದ್ದು ಮಾಡುತ್ತಿದೆ. ತಮ್ಮ ಎರಡನೇ ಸಿನಿಮಾಗೆ ಬಳ್ಳಾರಿ ದರ್ಬಾರ್ ಎಂದು ಹೆಸರಿಟ್ಟಿರುವ ಸೀನು, ಬಳ್ಳಾರಿಯಲ್ಲಿ ನಡೆದ ಒಂದಿಷ್ಟು ಘಟನೆಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಹೇಳುತ್ತಾರೆ. 'ಬಳ್ಳಾರಿ ಅಂದಾಕ್ಷಣ ಗಣಿಧಣಿಗಳ ನಾಡು ಎಂದು ಕರೆಯುವುದು ವಾಡಿಕೆ. ರಾಜಕಾರಣದಲ್ಲೂ ಈ ಪ್ರದೇಶ ಪ್ರಮುಖವಾಗಿ ಕೇಳಿ ಬರುವಂಥದ್ದು. ಅಲ್ಲದೇ ಸಿನಿಮಾ ರಂಗಕ್ಕೂ ನಂಟಿದೆ. ಈ ಎಲ್ಲಾ ಅಂಶವನ್ನು ಸಿನಿಮಾದಲ್ಲಿ ತರುತ್ತಿದ್ದೇನೆ. ಯಾರಿಗೂ ನೋಯಿಸದಂತೆ ಅವೆಲ್ಲವನನೂ ಕಟ್ಟಿಕೊಡುತ್ತಿದ್ದೇನೆ' ಅನ್ನುವುದು ನಿರ್ದೇಶಕರ ಮಾತು. ತೂಫಾನ್ ಸಿನಿಮಾದ ನಂತರ ತೆಲುಗು ಸಿನಿಮಾ ರಂಗಕ್ಕೆ ಹಾರಿದ್ದ ಸೀನು, ಅಲ್ಲೊಂದಿಷ್ಟು ಅನುಭವ ಪಡೆದುಕೊಂಡಿದ್ದಾರೆ. ಅವೆಲ್ಲವನ್ನೂ ಈ ಸಿನಿಮಾಗಾಗಿ ಬಳಸಿಕೊಳ್ಳುತ್ತಿದ್ದಾರೆ. ನಿರ್ದೇಶನದ ಜತೆಗೆ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಇವರೇ ಬರೆದಿದ್ದಾರೆ. ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ಹೀರೋ ಮತ್ತು ಹೀರೋಯಿನ್ ಅಂತ ಸಿನಿಮಾದಲ್ಲಿಲ್ಲ. ಪ್ರಮುಖ ಪಾತ್ರಗಳೇ ಸಿನಿಮಾದ ಜೀವಾಳವಂತೆ. 'ಕತೆಯೇ ಸಿನಿಮಾದ ಹೀರೋ. ಹಾಗಾಗಿ ಪ್ರತೇಕವಾಗಿ ನಾಯಕ ಮತ್ತು ನಾಯಕಿ ಕಾನ್ಸೆಪ್ಟ್ ಸಿನಿಮಾದಲ್ಲಿ ಇಲ್ಲ. ಅನುಭವಿ ಕಲಾವಿದರ ಜತೆಗೆ ಹೊಸ ನಟ ನಟಿಯರು ಈ ಚಿತ್ರದಲ್ಲಿದ್ದಾರೆ. ಒಂದೇ ಚಿತ್ರದಲ್ಲಿ ನಾಲ್ಕೈದು ಕಥೆಗಳನ್ನು ಹೇಳುವ ಪ್ರಯತ್ನ ಮಾಡಿದ್ದರಿಂದ ಇಡೀ ಸಿನಿಮಾ ಹೊಸದಾಗಿ ಕಾಣಲಿದೆ' ಅನ್ನುವುದು ನಿರ್ದೇಶಕರ ಮಾತು. ಮೈನಿಂಗ್ ವ್ಯವಹಾರ ನಡೆಯುತ್ತಿದ್ದಾಗ ಬಳ್ಳಾರಿ ಚಿತ್ರಣವೇ ಬೇರೆಯಿತ್ತು. ಈಗ ಅದು ಮತ್ತೊಂದು ರೀತಿಯಲ್ಲಿ ಕಾಣುತ್ತಿದೆ. ಈ ಸನ್ನಿವೇಶವನ್ನೂ ಸಿನಿಮಾಗಾಗಿ ಬಳಸಿಕೊಂಡಿದ್ದಾರಂತೆ. ಹಾಗಾಗಿ ಒಂಚೂರು ರೋಚಕ ಸ್ಟೋರಿಗಳನ್ನೂ ಈ ಚಿತ್ರದಲ್ಲಿ ನಿರೀಕ್ಷೆ ಮಾಡಬಹುದಂತೆ. ಹಲವು ವಿಶೇಷತೆಗಳನ್ನು ಈ ಸಿನಿಮಾ ಹೊಂದಿದೆ. ತೆಲುಗಿನ ಸಂಗೀತ ನಿರ್ದೇಶಕ ಚರಣ್ ಅರ್ಜುನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕಾರ್ತಿಕ್ ಸುಬ್ರಮಣಿ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು, ಪೋಲಾ ಶ್ರೀನಿವಾಶ್ ಬಾಬು, ಆಜಿ ಬಾಬಾ ಖಾನ್, ಮಮತಾ ರಾಹುತ್, ಶುಭ ರಕ್ಷಾ, ಸುಭಾಶ್ಚಂದ್ರ ಮುಂತಾದ ತಾರಾಗಣವಿದೆ.
↧
ತೂಫಾನ್ ನಿರ್ದೇಶಕನ ದರ್ಬಾರ್ ಶುರು
↧