ಪೊರ್ಕಿ ಹುಚ್ಚ ವೆಂಕಟ್ ಸಿನಿಮಾದ ನಾಯಕಿಯ ಹುಡುಕಾಟಕ್ಕೆ ಇಡೀ ಕೂರ್ಗ್ ಸುತ್ತಿದ್ದ ಬಂದಿದ್ದರು ವೆಂಕಟ್. ಕೊನೆಗೆ ಬೆಂಗಳೂರಿನ ಹುಡುಗಿಯನ್ನೇ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ನಿರೂಪಕಿಯಾಗಿದ್ದ ಸೌಮ್ಯ ರಾವ್ಗೆ ನಾಯಕಿಯ ಸ್ಥಾನ ಕೊಟ್ಟಿದ್ದಾರೆ. ಅವರೊಂದಿಗಿನ ಮಾತುಕತೆ ಇಲ್ಲಿದೆ. ನಿರ್ದೇಶಕ ಕಂ ನಟ ವೆಂಕಟ್ ಅವರ 'ಪೊರ್ಕಿ ಹುಚ್ಚ ವೆಂಕಟ್' ಚಿತ್ರಕ್ಕೆ ನಾಯಕಿ ಯಾರು ಅನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ನಾಯಕಿಗಾಗಿ ಇಡೀ ಕೂರ್ಗ್ ಸುತ್ತಿ ಬಂದಿದ್ದ ವೆಂಕಟ್ ಕೊನೆಗೂ ಬೆಂಗಳೂರಿನ ಹುಡುಗಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈವರೆಗೂ ಹಲವು ವಾಹಿನಿಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸೌಮ್ಯ ರಾವ್, ಈ ಸಿನಿಮಾದ ನಾಯಕಿ. ವೆಂಕಟ್ ಜತೆಗಿನ ಸಿನಿಮಾ ಅನುಭವಗಳನ್ನು ಸೌಮ್ಯ ಇಲ್ಲಿ ಹಂಚಿಕೊಂಡಿದ್ದಾರೆ. * ಪೊರ್ಕಿ ಹುಚ್ಚ ವೆಂಕಟ್ ಸಿನಿಮಾಗೆ ನೀವು ಆಯ್ಕೆಯಾಗಿದ್ದು ಹೇಗೆ? ಅವರು ಬಂದು ಅಪ್ರೋಚ್ ಮಾಡಿದರು. ಪಾತ್ರದ ಬಗ್ಗೆ ವಿವರಿಸಿದರು. ನನಗೆ ಆ ಪಾತ್ರ ತುಂಬಾನೇ ಇಷ್ಟವಾಯಿತು. ಅಲ್ಲದೇ ವೆಂಕಟ್ ಅಂದರೆ ನನಗೆ ಮೊದಲಿನಿಂದಲೂ ಗೌರವ. ಈ ಕಾರಣಕ್ಕಾಗಿ ಒಪ್ಪಿಕೊಂಡೆ. * ನೋಡುವುದಕ್ಕೆ ವಿಚಿತ್ರವಾಗಿ ಕಾಣುವ ವ್ಯಕ್ತಿ ವೆಂಕಟ್. ಶೂಟಿಂಗ್ ಸ್ಪಾಟ್ನಲ್ಲಿ ಹೇಗಿರುತ್ತಾರೆ? ನನಗಂತೂ ವಿಚಿತ್ರ ಅಂತ ಅನಿಸಿಲ್ಲ. ತಮ್ಮ ಪಾಡಿಗೆ ತಾವು ಶೂಟಿಂಗ್ನಲ್ಲಿ ತೊಡಗಿರುತ್ತಾರೆ. ಯಾವಾಗಲೂ ಪಾತ್ರ ಮತ್ತು ನಿರ್ದೇಶನದ ಬಗ್ಗೆ ಯೋಚಿಸುತ್ತಾ ಇರುತ್ತಾರೆ. * ಈ ಸಿನಿಮಾದಲ್ಲಿ ನಿಮ್ಮ ಪಾತ್ರ ಏನು? ಯಾವ ರೀತಿಯಲ್ಲಿ ಅದು ಸಾಗುತ್ತದೆ? ಕಾವೇರಿ ಪಾತ್ರವನ್ನು ನಾನಿಲ್ಲಿ ನಿರ್ವಹಿಸಿದ್ದೇನೆ. ನಾಯಕನಿಗೆ ಆಗಲೇ ಮದುವೆ ಆಗಿರುತ್ತದೆ. ಹೆಂಡತಿ ದೂರ ಆಗಿರುತ್ತಾಳೆ. ಆ ಸಮಯದಲ್ಲಿ ಕಾವೇರಿ ಆತನಿಗೆ ಸಿಗುತ್ತಾಳೆ. ನೀನು ಕೂಡ ಮೋಸ ಮಾಡಬೇಡ ಎಂದು ಅವಳಿಗೆ ನಾಯಕ ಕೇಳಿಕೊಳ್ಳುತ್ತಾನೆ. ಆತನಿಗೆ ಆಸರೆಯಾಗಿ ಕಾವೇರಿ ನಿಲ್ಲುತ್ತಾಳೆ. ಇಂಥದ್ದೊಂದು ಪಾತ್ರ ನನ್ನದು. *ಸಾಮಾನ್ಯವಾಗಿ ಗ್ಲಾಮ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ನಾಯಕಿಯರ ಬಯಸುತ್ತಾರೆ. ಇಲ್ಲಿ ಕಾವೇರಿ ಪಾತ್ರ ಹೇಗಿದೆ? ಎಲ್ಲರಿಗೂ ಗೊತ್ತಿರುವಂತೆ ವೆಂಕಟ್ ಅವರು ನಾಯಕಿಯನ್ನು ತೀರಾ ಗ್ಲಾಮ್ ಆಗಿ ತೋರಿಸುವುದಿಲ್ಲ. ಐಟಂ ಸಾಂಗ್ ವಿರುದ್ಧ ಗುಡುಗುತ್ತಾರೆ. ಹಾಗಾಗಿ ನಾನು ಇಡೀ ಸಿನಿಮಾದಲ್ಲಿ ಸೀರೆ ಧರಿಸಿದ್ದೇನೆ. ಪಾತ್ರವೇ ಹಾಗಿರುವಾಗ ನಾವೂ ಕೂಡ ಅದಕ್ಕೆ ಸಪೋರ್ಟ್ ಮಾಡಬೇಕು. * ವೆಂಕಟ್ ಮತ್ತೊಂದು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ತಿಕ್ಲ ಹುಚ್ಚ ವೆಂಕಟ್ ಎಂದು ಹೆಸರಿಟ್ಟಿದ್ದಾರೆ. ಆ ಚಿತ್ರಕ್ಕೂ ನೀವೇ ನಾಯಕಿನಾ? ಮೊನ್ನೆಯಷ್ಟೇ ಹೊಸ ಸಿನಿಮಾದ ಬಗ್ಗೆ ಮಾತಾಡಿದ್ದಾರೆ. ಅವರ ಹುಟ್ಟು ಹಬ್ಬದ ದಿನದಂದು ಟೈಟಲ್ ಕೂಡ ಅನೌನ್ಸ್ ಆಗಿದೆ. ಉಳಿದಂತೆ ವೆಂಕಟ್ ಅವರೇ ಹೇಳಬೇಕು. * ಇದು ನಿಮ್ಮ ಚೊಚ್ಚಲು ಸಿನಿಮಾ. ಈ ಚಿತ್ರದ ಬಗ್ಗೆ ತೃಪ್ತಿ ಇದೆಯಾ? ಕತೆ ಇಷ್ಟವಾಗಿಯೇ ನಾನು ಒಪ್ಪಿಕೊಂಡಿದ್ದರಿಂದ ಕಂಡಿತಾ ತೃಪ್ತಿ ಇದೆ. ಒಳ್ಳೆಯ ಸಂದೇಶವನ್ನು ಈ ಸಿನಿಮಾ ಕೊಡುವುದರಿಂದ, ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ ಅನ್ನುವ ವಿಶ್ವಾಸ ನನ್ನದು.
↧
ವೆಂಕಟ್ಗೆ ಸಿಕ್ಕ ಹೊಸ ಕಾವೇರಿ
↧