ಹೊಸದಿಲ್ಲಿ: ಮಂಗಳೂರು ತೈಲ ಶುದ್ಧೀಕರಣ ಮತ್ತು ಪೆಟ್ರೋಕೆಮಿಕಲ್ಸ್ ಸಂಸ್ಥೆ (ಎಂಆರ್ಪಿಎಲ್) ಕನಿಷ್ಠ 10 ಕೋಟಿ ರೂ. ಅಬಕಾರಿ ಸುಂಕವನ್ನು ವಂಚಿಸಿದೆ ಎನ್ನಲಾಗಿದ್ದು, ಈ ಕುರಿತು ಕೇಂದ್ರೀಯ ಕಂದಾಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧ ಕೇಂದ್ರೀಯ ಅಬಕಾರಿ ಗುಪ್ತಚರ ನಿರ್ದೇಶನಾಲಯ ತನಿಖೆ ಆರಂಭಿಸಿದ್ದು, ಮಂಗಳೂರು ಮೂಲದ ಎಂಆರ್ಪಿಎಲ್ನಿಂದ ವಿವರಣೆ ಕೇಳಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಿಶ್ರಣ ಮಾಡಲಾಗಿರುವ ಜಾಯ್ಲಿನ್ ಎನ್ನುವ ಬಣ್ಣರಹಿತ ರಾಸಾಯನಿಕವನ್ನು ತಪ್ಪಾಗಿ ವರ್ಗೀಕರಿಸಿ ಅಬಕಾರಿ ಸುಂಕ ವಂಚಿಸಲಾಗಿದೆ. ಈ ಜಾಯ್ಲಿನ್ ಅನ್ನು ದ್ರಾವಕವಾಗಿ ಬಣ್ಣಗಳು, ಪ್ರಿಂಟಿಂಗ್, ಟೈಲ್ ಅಡೆಸಿವ್ ಮತ್ತಿತರ ಉತ್ಪನ್ನಗಳಲ್ಲಿ ಬಳಸುತ್ತಾರೆ. ಆದರೆ, ಜಾಯ್ಲಿನ್ ಅನ್ನು ಸಾವಯವ ರಾಸಾಯನಿಕವೆಂದು ಪ್ರಕಟಿಸಿ, ಶೇ.12.5ರಷ್ಟು ಸುಂಕವನ್ನು ಎಂಆರ್ಪಿಎಲ್ ಪಾವತಿಸಿದೆ. ಜಾಯ್ಲಿನ್ ಅನ್ನು ಮಿನರಲ್ ಆಯಿಲ್ ಎಂದು ಪರಿಗಣಿಸಿ ಶೇ.14ರಷ್ಟು ಸುಂಕವನ್ನು ಪಾವತಿಸಬೇಕಿತ್ತು. ಈ ವಂಚನೆಯಲ್ಲಿ ಕಡಿಮೆಯೆಂದರೂ 10 ಕೋಟಿ ರೂ.ನಷ್ಟು ಅಬಕಾರಿ ಸುಂಕವನ್ನು ಸರಕಾರಕ್ಕೆ ನಷ್ಟ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಸುದ್ದಿಸಂಸ್ಥೆಯು ಪ್ರತಿಕ್ರಿಯೆ ಪಡೆಯಲು ಎಂಆರ್ಪಿಎಲ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ''ಕಂಪನಿಯು ತಜ್ಞರ ಅಭಿಪ್ರಾಯ ಪಡೆಯುವ ನಿಟ್ಟಿನಲ್ಲಿ ಸಕ್ರಿಯವಾಗಿದೆ. ಕೇಂದ್ರೀಯ ಅಬಕಾರಿ ಸುಂಕದ ಕಾಯ್ದೆಯನ್ವಯವೇ ಜಾಯ್ಲಿನ್ ಅನ್ನು ಮಿಶ್ರಣ ಮಾಡಿ ವರ್ಗೀಕರಿಸಿದ್ದೇವೆ. ಇಲ್ಲಿ ಲೋಪವೆಸಗುವ ಪ್ರಶ್ನೆಯೇ ಇಲ್ಲ. ಅಂದಿನಿಂದಲೂ ಸೂಕ್ತ ಸುಂಕವನ್ನು ನಿಯಮಿತವಾಗಿ ಪಾವತಿಸುತ್ತಾ ಬಂದಿದ್ದೇವೆ. ಇತ್ತೀಚಿನ ಹೊಸ ವಿಚಾರಣೆ ಕುರಿತಾಗಿ ಪರಾಮರ್ಶಿಸಲಾಗುತ್ತಿದೆ,'' ಎಂದು ಎಂಆರ್ಪಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
↧
ಎಂಆರ್ಪಿಎಲ್ ಮೇಲೆ ಅಬಕಾರಿ ಗುಪ್ತಚರದ ಕಣ್ಣು
↧