ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ(ಎಸ್ಬಿಐ) ಸಹವರ್ತಿ 5 ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಎಸ್ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಸರಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ''ಮಹಾವಿಲೀನದ ಸಂದರ್ಭದಲ್ಲಿ ಭಟ್ಟಾಚಾರ್ಯ ಅವರ ಉಪಸ್ಥಿತಿ ಅಗತ್ಯವಿದೆ. ಹೀಗಾಗಿ ಅಧಿಕಾರಾವಧಿ ವಿಸ್ತರಿಸಲು ಸರಕಾರ ಒಲವು ತೋರಿದೆ,'' ಎಂದು ಮೂಲಗಳು ಹೇಳಿವೆ. ಅವರ ಮೂರು ವರ್ಷಗಳ ಅಧಿಕಾರಾವಧಿ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯವಾಗಬೇಕಿತ್ತು. ''ಬ್ಯಾಂಕ್ ಸಂಸ್ಥೆಗಳ ಮಂಡಳಿಯ(ಬಿಬಿಬಿ) ಅಭಿಪ್ರಾಯವನ್ನು ಈಗಾಗಲೇ ಸರಕಾರ ಸ್ವೀಕರಿಸಿದ್ದು, ಅರುಂಧತಿ ಭಟ್ಟಾಚಾರ್ಯರ ವಿಸ್ತರಣೆ ಸಂಬಂಧಿ ಆದೇಶವು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ,'' ಎಂದು ಮೂಲಗಳು ಹೇಳಿವೆ. ವರ್ಷದ ಆರಂಭದಲ್ಲಿಯೇ ಎಸ್ಬಿಐನಲ್ಲಿ ಮಹಾವಿಲೀನಕ್ಕೆ ಕೇಂದ್ರ ಸಂಪುಟ ಸಮ್ಮತಿ ನೀಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್, ಸ್ಟೇಟ್ ಬ್ಯಾಂಕ್ ಆಫ್ ತಿರುವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಭಾರತೀಯ ಮಹಿಳಾ ಬ್ಯಾಂಕ್(ಬಿಎಂಬಿ) ಅನ್ನು ಎಸ್ಬಿಐನಲ್ಲಿ ವಿಲೀನಗೊಳಿಸುವುದು ಸರಕಾರದ ಉದ್ದೇಶ. ಈ ವಿಲೀನದಿಂದ 37 ಲಕ್ಷ ಕೋಟಿ ರೂ. ಆಸ್ತಿಯನ್ನು ಎಸ್ಬಿಐ ಹೊಂದಲಿದ್ದು, ವಿಶ್ವದ ಬೃಹತ್ ಬ್ಯಾಂಕ್ಗಳಲ್ಲಿ ಒಂದಾಗಲಿದೆ.
↧
ಅರುಂಧತಿ ಭಟ್ಟಾಚಾರ್ಯ ಮುಂದುವರಿಕೆ ಸಂಭವ
↧