ಗಣೇಶ್, ರವಿಚಂದ್ರನ್ ಮತ್ತು ನಿರ್ದೇಶಕ ಶಶಾಂಕ್ ಕಾಂಬಿನೇಷನ್ನ ಮೊದಲ ಸಿನಿಮಾ 'ಮುಂಗಾರು ಮಳೆ-2' ಇಂದು ರಾಜ್ಯಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದ ವಿಶೇಷತೆಯ ಬಗ್ಗೆ ನಿರ್ದೇಶಕರು ಮಾತಾಡಿದ್ದಾರೆ. ಶರಣು ಹುಲ್ಲೂರು ಮತ್ತೊಂದು ಮುಂಗಾರಿನ ತಂಪಿಗೆ ಸ್ಯಾಂಡಲ್ವುಡ್ ಎದುರು ನೋಡುತ್ತಿತ್ತು. ಆ ಸಮಯ ಈಗ ಕೂಡಿ ಬಂದಿದೆ. ನಿರೀಕ್ಷಿತ 'ಮುಂಗಾರು ಮಳೆ-2' ಚಿತ್ರವು ಇಂದು (ಸೆ.10) ಜಗತ್ತಿನಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಒಟ್ಟು ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಚಿತ್ರವು, ವಿದೇಶಗಳಲ್ಲಿ 24 ತೆರೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಯುಎಸ್ಎ, ಯುಕೆ, ಆಸ್ಪ್ರೇಲಿಯಾ ಮುಂತಾದ ಕಡೆ ಮಳೆಯ ಆರ್ಭಟ ಜೋರಾಗಿದ್ದು, ಹದಿನೈದು ದಿನದ ಮುಂಚೆಯೇ ಟಿಕೆಟ್ ಬುಕ್ ಆಗಿ ಅಚ್ಚರಿ ಮೂಡಿಸಿದೆ. ಅಲ್ಲದೇ, ಮುಂಬಯಿ, ಚೆನ್ನೈ, ಹೈದರಾಬಾದ್, ದೆಹಲಿ ಹೀಗೆ ಹಲವು ಪ್ರತಿಷ್ಠಿತ ಊರುಗಳ 22 ಚಿತ್ರಮಂದಿರಗಳಲ್ಲಿ ಮುಂಗಾರು ಮಳೆ-2 ರಿಲೀಸ್ ಆಗಿ ದಾಖಲೆ ಬರೆದಿದೆ. ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಈಗಾಗಲೇ ಬುಕಿಂಗ್ ಶುರುವಾಗಿದ್ದು, ಶೇಕಡಾ 70ರಷ್ಟು ಟಿಕೆಟ್ ಖರೀದಿ ಆಗಿರುವುದು ವಿಶೇಷ. ಹಲವು ಕಾರಣಗಳಿಂದಾಗಿ ಚಿತ್ರವು ನಿರೀಕ್ಷೆ ಮೂಡಿಸಿದೆ. ಹತ್ತು ವರ್ಷಗಳ ನಂತರ ಮುಂಗಾರು ಮಳೆ ಶೀರ್ಷಿಕೆಯನ್ನೇ ಬಳಸಿಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಶಾಂಕ್. ಟೈಟಲ್ನಲ್ಲೇ ಮ್ಯಾಜಿಕ್ ಇರುವುದರಿಂದ ಮಳೆಯ ಮಾತು ಜೋರಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ರವಿಚಂದ್ರನ್ ಮತ್ತು ಗಣೇಶ್ ಒಂದಾಗಿದ್ದಾರೆ. ರವಿಚಂದ್ರನ್ ಈ ಚಿತ್ರದಲ್ಲಿ ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ತಂದೆ- ಮಗನ ಸೆಂಟಿಮೆಂಟ್ ದೃಶ್ಯಗಳು ಸಿನಿಮಾದ ಜೀವಾಳ ಆಗಿರುವುದರಿಂದ ಗಣೇಶ್ ಪಾತ್ರದ ಬಗ್ಗೆ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಮುಂಗಾರು ಮಳೆಗೂ ಮತ್ತು ಪಾರ್ಟ್-2ಗೂ ಯಾವುದೇ ಸಂಬಂಧವಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಈಗ ಕೆಲವು ಅಂಶಗಳು ಈ ಸಿನಿಮಾದಲ್ಲೂ ಮುಂದುವರೆದಿವೆ ಎಂದು ನಿರ್ದೇಶಕರು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಹೀಗಾಗಿ ಆ ಅಂಶಗಳ ಬಗ್ಗೆ ಚರ್ಚೆ ಶುರುವಾಗಿದೆ. ಮುಂಗಾರು ಮಳೆ ಕೇವಲ ಮಳೆಗಾಲದ ಕತೆಯಾಗಿತ್ತು. ಪಾರ್ಟ್-2ನಲ್ಲಿ ಬೇಸಿಗೆ ಕಾಲ, ಮಳೆಗಾಲ ಮತ್ತು ಚಳಿಗಾಲದಲ್ಲಿ ನಡೆಯುವ ಸ್ಟೋರಿ ಇದೆ. ಈ ಅಂಶ ಕೂಡ ನಿರೀಕ್ಷೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಪಾರ್ಟ್-2 ಅಂದರೆ ಹಳೆಯ ಕತೆಯ ಮುಂದುವರೆದ ಭಾಗ ಆಗಿರುತ್ತದೆ ಅಥವಾ ಹಳೆಯ ಪಾತ್ರಗಳಿದ್ದು ಕತೆ ಹೊಸದಾಗಿರುತ್ತದೆ. ಆದರೆ ಈ ಸಿನಿಮಾ ಇವೆಲ್ಲವುಗಳ ಹೊರತಾದ ಮತ್ತೊಂದು ಫಾರ್ಮಾಟ್ನಲ್ಲಿದೆಯಂತೆ. ಹಾಗಾಗಿ ಪಾರ್ಟ್-2 ಅಂದರೆ ಹೀಗೂ ಇರುತ್ತದೆ ಎಂಬ ಮಾದರಿಯಲ್ಲಿದೆ ಎನ್ನುವುದು ಶಶಾಂಕ್ ಮಾತು. ಈ ಚಿತ್ರವೂ ಮುಂಗಾರು ಮಳೆಯನ್ನು ತಯಾರಿಸಿದ್ದ ಇ.ಕೆ.ಪಿಕ್ಚರ್ಸ್ ಸಂಸ್ಥೆಯಿಂದಲೇ ಮೂಡಿ ಬಂದಿದ್ದು, ಜಿ.ಗಂಗಾಧರ ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರಕ್ಕೆ ಶೇಖರ್ ಚಂದ್ರ ಅವರ ಸಿನಿಮಾಟೋಗ್ರಫಿ ಇದೆ. --- ಮುಂಗಾರು ಮಳೆಯ ಕೆಲವು ಅಂಶಗಳು ಇಲ್ಲಿಯೂ ಮುಂದುವರೆದಿವೆ. ಅದಿಲ್ಲದಿದ್ದರೆ ಪಾರ್ಟ್-2 ಅನ್ನೋಕೆ ಆಗಲ್ಲ. ಆ ಅಂಶಗಳು ತುಂಬಾನೇ ಇಂಟರೆಸ್ಟಿಂಗ್ ಆಗಿದ್ದು, ಅವುಗಳನ್ನು ಪ್ರೇಕ್ಷಕರು ಸಿನಿಮಾದಲ್ಲೇ ನೋಡಲಿ. -ಶಶಾಂಕ್, ನಿರ್ದೇಶಕ --- ಮುಂಗಾರು ಮಳೆ-2 ಯಾಕೆ ನೋಡಬೇಕು? * ಮುಂಗಾರು ಮಳೆ ಶೀರ್ಷಿಕೆಯೇ ಒಂದು ಆಕರ್ಷಣೆ * ಗಣೇಶ್, ರವಿಚಂದ್ರನ್ ಮತ್ತು ಶಶಾಂಕ್ ಕಾಂಬಿನೇಷನ್ * ಮುಂಗಾರು ಮಳೆ ಮಾಡಿರುವ ಸಂಸ್ಥೆಯಿಂದಲೇ ಈ ಚಿತ್ರ ಬಂದಿದೆ * ಹಾಡುಗಳು ಹಿಟ್ ಆಗಿದ್ದು. ಇದು ದಾಖಲೆ ಕೂಡ * ಶನಿವಾರ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಇದು
↧
ಇಂದಿನಿಂದ ಸುರಿಯಲಿದೆ ಮುಂಗಾರು ಮಳೆ-2
↧