Quantcast
Channel: VijayKarnataka
Viewing all articles
Browse latest Browse all 6795

ಕಾವೇರಿ ಕಿಚ್ಚಿಗೆ ತಾರಾಬಲ

$
0
0

ಕನ್ನಡ ಚಿತ್ರರಂಗ ಕಾವೇರಿ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಿದೆಯಲ್ಲದೆ, ಹೋರಾಟಕ್ಕೂ ಧುಮುಕಿದೆ. ರೈತರು ಹಾಗೂ ಕನ್ನಡಪರ ಹೋರಾಟಗಾರರ ರೋಷಾವೇಶಕ್ಕೆ ಸಾಥ್‌ ನೀಡಿರುವ ಸ್ಯಾಂಡಲ್‌ವುಡ್‌ ನೀರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದೆ. ಶುಕ್ರವಾರ ನಡೆದ ಕರ್ನಾಟಕ ಬಂದ್‌ನಲ್ಲಿ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು, ತಂತ್ರಜ್ಞರು, ಕಾರ್ಮಿಕರು ಪಾಲ್ಗೊಂಡಿದ್ದರು.

ಶರಣು ಹುಲ್ಲೂರು

ಕಾವೇರಿ ನದಿ ನೀರಿಗಾಗಿ ನಡೆದ ಹೋರಾಟದಲ್ಲಿ ಸ್ಯಾಂಡಲ್‌ವುಡ್‌ ಅಕ್ಷರಶಃ ಬೀದಿಗಿಳಿದಿತ್ತು. ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ನಟರಾದ ಜಗ್ಗೇಶ್‌, ಶಿವರಾಜ್‌ಕುಮಾರ್‌, ದರ್ಶನ್‌, ಪುನೀತ್‌ ರಾಜ್‌ಕುಮಾರ್‌, ಉಪೇಂದ್ರ, ಸಂಗೀತ ನಿರ್ದೇಶಕ ಹಂಸಲೇಖ, ನಟಿಯರಾದ ರಾಗಿಣಿ, ಅಮೂಲ್ಯ, ಹರಿಪ್ರಿಯಾ, ಪ್ರೇಮಾ, ತಾರಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ಕರ್ನಾಟಕ ಟೆಲಿವಿಷನ್‌ ಅಸೋಶಿಯೇಷನ್‌ನ ಅಧ್ಯಕ್ಷ ಎಸ್‌.ವಿ.ಶಿವಕುಮಾರ್‌, ಕಾರ್ಮಿಕ ಸಂಘಟನೆ ಅಧ್ಯಕ್ಷ ಅಶೋಕ್‌, ನಿರ್ದೇಶಕರ ಸಂಘದ ಎಂ.ಎಸ್‌.ರಮೇಶ್‌ ಸೇರಿದಂತೆ ಸಿನಿಮಾ ಮತ್ತು ಕಿರುತೆರೆಯ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು. ತಮಿಳುನಾಡಿನ ಸರಕಾರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಟ ಶಿವರಾಜ್‌ಕುಮಾರ್‌ ಮಾತನಾಡಿ, 'ತಮಿಳು ನಾಡಿನಲ್ಲಿ ಇರುವವರೂ ರೈತರೇ, ನಮ್ಮ ನಾಡಿನಲ್ಲಿ ಇರುವವರೂ ರೈತರೇ. ನಮ್ಮ ನಾಡಿನ ರೈತರಿಗೇಕೆ ಅನ್ಯಾಯ ಆಗಬೇಕು?' ಎಂದು ಪ್ರಶ್ನಿಸಿದರು. 'ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾಜಿಮುಖ್ಯಮಂತ್ರಿ ಬಂಗಾರಪ್ಪನವರಂತೆ ಧೈರ್ಯ ತೋರಿ, ನಮ್ಮ ರಾಜ್ಯದ ರೈತರ ಪರ ನಿಲ್ಲಬೇಕೆಂದು' ಕಿವಿಮಾತು ಹೇಳಿದರು. 'ನಾವು ಸರಕಾರಗಳನ್ನು ಯೋಚನೆ ಮಾಡಿ ಆರಿಸಿ ತರಬೇಕು. ನಮ್ಮ ನಾಡು ನುಡಿಗೆ ಕೆಲಸ ಮಾಡುವಂಥವರನ್ನು ಮಾತ್ರ ಇನ್ಮುಂದೆ ಆರಿಸಿ ಕಳುಹಿಸಿ' ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.

ಮೂರು ದಿನಗಳಿಂದಲೂ ಮಂಡ್ಯ ಮತ್ತು ಮೈಸೂರು ರೈತರ ಜತೆ ಹೋರಾಟಕ್ಕೆ ಇಳಿದಿರುವ ದರ್ಶನ್‌, ವಾಣಿಜ್ಯ ಮಂಡಳಿಯ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಆಗಮಿಸಿದರು. ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿ, 'ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಪ್ರಶ್ನೆಯೇ ಇಲ್ಲ. ಕೂಡಲೇ ರಾಜ್ಯ ಸರಕಾರ ನೀರು ಹರಿಸುವುದನ್ನು ನಿಲ್ಲಿಸಬೇಕು. ನಮ್ಮ ನಾಡಿನ ರೈತರ ಬಗ್ಗೆ ಕಾಳಜಿ ವಹಿಸಬೇಕು' ಎಂದರು.

ವಿಧಾನ ಪರಿಷತ್‌ ಸದಸ್ಯೆ ಮತ್ತು ನಟಿ ತಾರಾ ಕೂಡ ತಮಿಳುನಾಡು ಸರಕಾರದ ನಡೆಯನ್ನು ಖಂಡಿಸಿದರು. 'ಕಾವೇರಿ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾವೆಲ್ಲರೂ ಕಾವೇರಿ ನೀರು ಕುಡಿದು ಬದುಕುತ್ತಿರುವವರು. ಆ ನೀರಿನ ಋುಣ ತೀರಿಸಲು ಯೋಚಿಸಬೇಕು' ಎಂದು ರಾಜಕಾರಣಿಗಳನ್ನು ಕುಟುಕಿದರು.

ಕರ್ನಾಟಕ ಟೆಲಿವಿಷನ್‌ ಅಸೋಶಿಯೇಷನ್‌ ಅಧ್ಯಕ್ಷ ಎಸ್‌.ವಿ.ಶಿವಕುಮಾರ್‌ ಮಾತನಾಡಿ 'ಕಾವೇರಿ ನೀರಿನ ವಿಚಾರ ಭಾವನಾತ್ಮಕವಾದದ್ದು. ಹೀಗಾಗಿ ಪ್ರತಿಭಟನೆ ಅನಿವಾರ‍್ಯ. ಜೀವನದಿಯನ್ನೇ ಕಸಿದುಕೊಳ್ಳುತ್ತೇನೆ ಅನ್ನುವುದು ಉದ್ಧಟತನದ್ದು. ರೈತರಿಗಷ್ಟೇ ಅಲ್ಲ, ಅದರಿಂದ ಎಲ್ಲರ ಮೇಲೂ ಪರಿಣಾಮ ಉಂಟಾಗುತ್ತದೆ. ನೀರಿನ ವಿಚಾರವಾಗಿ ಪದೇ ಪದೇ ಕ್ಯಾತೆ ತಗೆಯಬಾರದು. ಶಾಶ್ವತ ಪರಿಹಾರ ಕಲ್ಪಿಸಬೇಕು' ಎಂದು ಆಗ್ರಹಿಸಿದರು.

ಹಂಸಲೇಖ, ಜಗ್ಗೇಶ್‌, ನಟಿ ಪ್ರೇಮಾ, ಸಾ.ರಾ.ಗೋವಿಂದು, ಲಹರಿ ವೇಲು ಸೇರಿದಂತೆ ಅನೇಕ ಕಲಾವಿದರು ಮತ್ತು ತಂತ್ರಜ್ಞರು, ಚಿತ್ರೋದ್ಯಮಿಗಳು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಧೋರಣೆಯನ್ನು ಖಂಡಿಸಿ ಮಾತನಾಡಿದರು.

ಹಿರಿಯ ನಟ ಅಂಬರೀಷ್‌, ಯಶ್‌, ರಾಧಿಕಾ ಪಂಡಿತ್‌, ಸುದೀಪ್‌ ಸೇರಿದಂತೆ ಕೆಲವು ನಟ-ನಟಿಯರು ಬಂದ್‌ನಲ್ಲಿ ಪಾಲ್ಗೊಂಡಿರಲಿಲ್ಲ. ವಿದೇಶ ಪ್ರವಾಸದಲ್ಲಿರುವ ಅವರೆಲ್ಲರೂ ಅಲ್ಲಿಂದಲೇ ಬಂದ್‌ಗೆ ಬೆಂಬಲ ಸೂಚಿಸಿದರು.

---

* ಕಾವೇರಿ ನೀರಿನ ಸಮಸ್ಯೆಯ ಕುರಿತಾಗಿ ನಾನು ಎಚ್‌ಟುಓ ಸಿನಿಮಾದಲ್ಲೇ ಹೇಳಿದ್ದೇನೆ. ಆದರೂ, ಪರಿಹಾರ ಸೂಚಿಸಲು ಆಗಿಲ್ಲ. ನಾವು ಪ್ರತಿಭಟನೆ ಮಾಡಬೇಕಾಗಿದ್ದು ರಾಜಕಾರಣಿಗಳ ಮನೆಮುಂದೆ. ಆಗ ಸರಿಹೋಗಬಹುದು.

- ಉಪೇಂದ್ರ, ನಟ

---

*ಯಾವಾಗಲೂ ನಾವು ರೈತರ ಪರ ಇದ್ದೇವೆ. ಕಾವೇರಿ ನೀರು ಯಾವತ್ತಿಗೂ ನಮ್ಮ ರೈತರಿಗೆ ಸಲ್ಲಬೇಕು. ಈ ವಿಷಯದಲ್ಲಿ ಮನುಷ್ಯತ್ವದ ಪ್ರದರ್ಶನ ಆಗಬೇಕು.

-ಪುನೀತ್‌ ರಾಜ್‌ಕುಮಾರ್‌, ನಟ

ಜನರಿಂದಲೇ ನಾವು ನಟಿಯರಾಗಿದ್ದು. ಅವರಿಗೆ ಯಾವುದೇ ಅನ್ಯಾಯವಾದರೂ, ಅವರೊಟ್ಟಿಗೆ ಇರುತ್ತೇವೆ. ನೀರಿನ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

- ಶ್ರುತಿ, ನಟಿ

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು

ಹಂಸಲೇಖ, ಜಗ್ಗೇಶ್‌, ಶಿವರಾಜ್‌ಕುಮಾರ್‌, ದರ್ಶನ್‌, ಉಪೇಂದ್ರ, ಪುನೀತ್‌ ರಾಜ್‌ಕುಮಾರ್‌, ದೇವರಾಜ್‌, ಯೋಗರಾಜ್‌ ಭಟ್‌, ಪ್ರಜ್ವಲ್‌ ದೇವರಾಜ್‌, ಲೀಲಾವತಿ, ಭಾರತಿ ವಿಷ್ಣುವರ್ಧನ್‌, ತಾರಾ, ರಾಗಿಣಿ, ಸುಧಾರಾಣಿ, ಶ್ರುತಿ, ಪದ್ಮಾ ವಾಸಂತಿ, ಅಜಯ್‌ ರಾವ್‌, ಎಂ.ಎಸ್‌.ರಮೇಶ್‌, ಅಮೂಲ್ಯ, ಶರಣ್‌, ಶ್ರೀಮುರಳಿ, ಸಂಜನಾ, ವಿಜಯ ರಾಘವೇಂದ್ರ, ದುನಿಯಾ ರಶ್ಮಿ, ರಂಗಾಯಣ ರಘು, ಅನಿರುದ್ಧ, ಲತಾ ಹಂಸಲೇಖಾ, ಬಿ.ಸಿ.ಪಾಟೀಲ್‌, ವಿನೋದ್‌ ರಾಜಕುಮಾರ್‌, ಪ್ರೇಮಾ ಮುಂತಾದವರು.

ಹಾಡಿದ ಲತಾ ಹಂಸಲೇಖ

ಹೋರಾಟಗಾರರನ್ನು ಹುರಿದುಂಬಿಸಲು ಗಾಯಕಿ ಲತಾ ಹಂಸಲೇಖ ಕಾವೇರಿ ಕುರಿತಾದ ಹಾಡನ್ನು ಹೇಳುವ ಮೂಲಕ ತಮ್ಮ ಪ್ರತಿಭಟನೆಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಹಂಸಲೇಖ ಕೂಡ ಹಾಡಿಗೆ ಸಾಥ್‌ ನೀಡಿದರು.

ರಾಜ್ಯಪಾಲರಿಗೆ ಮನವಿ

ಮಧ್ಯಾಹ್ನದವರೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಲಾವಿದರು ಮತ್ತು ತಂತ್ರಜ್ಞರು ಕಾವೇರಿ ಬಗೆಗಿನ ತಮ್ಮ ಭಾವನೆಯನ್ನು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ವ್ಯಕ್ತಪಡಿಸಿದರು.

ದಟ್ಟ ಜನಸಂದಣಿ

ಹೋರಾಟದಲ್ಲಿ ಪಾಲ್ಗೊಳ್ಳುವುದರ ಜತೆಗೆ ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು ವಾಣಿಜ್ಯ ಮಂಡಳಿಯ ಮುಂದೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸ್‌ರು ಹರಸಾಹಸ ಪಡುತ್ತಿರುವ ದೃಶ್ಯ ಕಂಡು ಬಂತು. ಸ್ವತಃ ಶಿವರಾಜ್‌ಕುಮಾರ್‌ ಕೂಡ ಕೂಗುತ್ತಿದ್ದ ಅಭಿಮಾನಿಗಳನ್ನು ಸುಮ್ಮನಿರಿಸುವಾಗ ಕೋಪಗೊಂಡರು. ಸೆಲ್ಫಿ ತಗೆದುಕೊಳ್ಳುತ್ತಿದ್ದ ಅಭಿಮಾನಿಗಳ ವಿರುದ್ಧ ಹರಿಹಾಯ್ದರು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>