ರಕ್ಷಣೆ ಕೋರಿ ದಲಿತರ ಮುಷ್ಕರ * ದಿನಕ್ಕೆ 200 ದನಗಳ ಸಾವು ಅಹಮದಾಬಾದ್: ದನಗಳ ಚರ್ಮ ಸುಲಿದು ಹದಗೊಳಿಸುವ ಕೆಲಸ ಮಾಡುತ್ತಿದ್ದ ದಲಿತರು ಶವಗಳ ದಫನಕ್ಕೆ ನಿರಾಕರಿಸಿ ಮುಷ್ಕರ ನಡೆಸುತ್ತಿರುವುದರಿಂದ ದನಗಳ ಅಂತ್ಯಕ್ರಿಯೆಯೇ ಗುಜರಾತ್ನಲ್ಲಿ ದೊಡ್ಡದೊಂದು ಸಮಸ್ಯೆಯಾಗಿ ಕಾಡಿದೆ. ಉನಾದಲ್ಲಿ ಸತ್ತ ದನದ ಚರ್ಮ ಸುಲಿದ ಯುವಕರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ ಘಟನೆಯ ಬಳಿಕ ಇದೀಗ ದಲಿತ ಸಮುದಾಯದವರು ತಮ್ಮ ಕೆಲಸಕ್ಕೆ ರಕ್ಷಣೆ ನೀಡಬೇಕು ಮತ್ತು ಗೋರಕ್ಷಕರ ಕಿರುಕುಳ ತಡೆಯಲು ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ. ಗುಜರಾತ್ನ ಸುಂದರ್ ನಗರ ಜಿಲ್ಲೆಯಲ್ಲಿ ಸುಮಾರು 14-15 ಗೋಶಾಲೆಗಳಿದ್ದು, ಅವುಗಳಲ್ಲಿ ದಿನUಕ್ಕೆ 120ರಷ್ಟು ಹಸುಗಳು ಸಾಯುತ್ತಿವೆ. ಅವುಗಳನ್ನು ದಫನ್ ಮಾಡುವ ಕೆಲಸವನ್ನು ದಲಿತರು ಮಾಡುತ್ತಿದ್ದರು. ಅವರ ಮುಷ್ಕರದಿಂದಾಗಿ ಸ್ಥಳೀಯಾಡಳಿತ ಭಾರಿ ತೊಂದರೆ ಅನುಭವಿಸಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಸ್ಥಳೀಯಾಡಳಿತ ತನ್ನದೇ ಕೆಲಸಗಾರರನ್ನು ಬಳಸಿಕೊಂಡು 80 ಸತ್ತ ದನಗಳ ವಿಲೇವಾರಿ ಮಾಡಿದೆ. ಇದಲ್ಲದೆ ಗ್ರಾಮೀಣ ಭಾಗದಲ್ಲೂ 100ಕ್ಕೂ ಅಧಿಕ ದನಗಳು ವಯೋಸಹಜ ಮತ್ತಿತರ ಕಾರಣಗಳಿಂದ ಪ್ರಾಣ ಕಳೆದುಕೊಂಡಿದ್ದು, ಅವುಗಳ ವಿಲೇವಾರಿಗೂ ಕಷ್ಟ ಎದುರಾಗಿದೆ. ವಿವಾದ ತಿಳಿಯಾದ ಬಳಿಕ ದಲಿತ ನಾಯಕರನ್ನು ಕರೆದು ಆವರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಜಿಲ್ಲಾಧಿಕಾರಿ ಉದಿತ್ ಅಗರ್ವಾಲ್ ತಿಳಿಸಿದ್ದಾರೆ.
↧
ಗುಜರಾತ್ನಲ್ಲೀಗ ದನಗಳ ಶವ ಸಂಸ್ಕಾರವೇ ಸಮಸ್ಯೆ
↧