ಹೊಸದಿಲ್ಲಿ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಆರ್ಟಿಸನ್ ಬೇಕರಿ ಮೇಲೆ ಇತ್ತೀಚೆಗೆ ದಾಳಿಗೆ ನಡೆಸಿದ ಉಗ್ರರಿಗೆ ಪ್ರೇರಣೆ ನೀಡಿದ ಮುಂಬಯಿ ಇಸ್ಲಾಂ ಧರ್ಮಗುರು ಜಾಕೀರ್ ನಾಯ್ಕ್ ಮಾಡಿದ ಭಾಷಣಗಳ ಮೇಲೆ ಕೇಂದ್ರ ಸರಕಾರ ಈಗ ಹದ್ದಿನ ಕಣ್ಣಿಟ್ಟಿದೆ. ಖಾಸಗಿ 'ಪೀಸ್ ಟಿವಿ'ಯಲ್ಲಿ ಹಾಗೂ ಜಾಕೀರ್ ನಾಯ್ಕ್ ಮಾಡಿದ ಭಾಷಗಳ ಧ್ವನಿಮುದ್ರಿಕೆಯನ್ನು ಭದ್ರತಾ ಏಜೆನ್ಸಿಗಳು ಪರಿಶೀಲಿಸುತ್ತಿವೆ. ಭಯೋತ್ಪಾದನೆಯೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಸಿ.ಡಿ.ಗಳಲ್ಲಿ ಪ್ರಚೋದನಾಕಾರಿ ಅಂಶಗಳು ಇರುವುದು ದೃಢಪಟ್ಟರೆ ಜಾಕೀರ್ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಹಾರಾಷ್ಟ್ರ ಸರಕಾರವು ಜಾಕೀರ್ ಭಾಷಣಗಳ ಪರಿಶೀಲನೆ ನಡೆಸುವಂತೆ ತನಿಖೆ ಆದೇಶಿಸಿದ ಬೆನ್ನಿಗೇ ಕೇಂದ್ರ ಗೃಹ ಸಚಿವರಿಂದ ಈ ಹೇಳಿಕೆ ಹೊರಬಿದ್ದಿರುವುದು ಗಮನಾರ್ಹ. ''ಉಗ್ರವಾದದ ಜತೆ ಲಘುವಾಗಿ ವ್ಯವಹರಿಸುವುದು ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಬಲು ಅಪಾಯಕಾರಿ. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಉಗ್ರರ ಸ್ವರ್ಗವಾಗುತ್ತಿದ್ದು, ಅಲ್ಲಿನ ಭಯೋತ್ಪಾದಕರಿಗೆ ಜಾಕೀರ್ ಬೋಧನೆಗಳೇ ಉತ್ತೇಜನ ನೀಡಿದ್ದವು ಎಂಬುದು ತನಿಖೆಯಿಂದ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಭಾಷಣಗಳ ಸಿ.ಡಿ.ಯನ್ನು ಆಮೂಲಾಗ್ರವಾಗಿ ಪರಿಶೀಲಿಸುವಂತೆ ಭದ್ರತಾ ಏಜೆನ್ಸಿಗಳಿಗೆ ಸೂಚಿಸಲಾಗಿದೆ,'' ಎಂದು ಹೇಳಿದ್ದಾರೆ. ಜಾಕೀರ್ ದ್ವೇಷ ಭಾಷಣಗಳ ಅಪಾಯ ಅರಿತೇ ಅವರ ಪ್ರವೇಶಕ್ಕೆ ಬ್ರಿಟನ್, ಕೆನಡಾ ಸೇರಿದಂತೆ ಕೆಲ ದೇಶಗಳು ಈಗಾಗಲೇ ನಿರ್ಬಂಧ ಹೇರಿವೆ. ಉಗ್ರ ನಿಗ್ರಹಕ್ಕೆ ಸಹಕಾರ ಅಗತ್ಯ: ಭಯೋತ್ಪಾದನೆ ಜತೆಗೆ ನಂಟು ಬೆಸೆದುಕೊಂಡಿರುವ ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಹೋರಾಟ ನಡೆಸಲು ಎಲ್ಲ ರಾಷ್ಟ್ರಗಳ ಸಹಕಾರ ಅಗತ್ಯ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಅವರು, '' ಭಯೋತ್ಪಾದನೆಯು ವಿಶ್ವದ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ. ಮಾದಕ ವಸ್ತುಗಳ ಕಳ್ಳಸಾಗಣೆಯು ಭಯೋತ್ಪಾದನೆಯಂತಹ ಸಂಘಟಿತ ಅಪರಾಧಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದೆ. ಈ ದಂಧೆಯಲ್ಲಿ ತೊಡಗಿರುವವ ನಡು ಮುರಿಯಲು ಸಂಘಟಿತ ಹೋರಾಟ ಅಗತ್ಯವಾಗಿದೆ,'' ಎಂದು ಕರೆ ನೀಡಿದರು.
↧
ಜಾಕೀರ್ ನಾಯ್ಕ್ ಭಾಷಣಗಳ ಸಿಡಿ ಪರಿಶೀಲನೆ
↧