* ಶರಣು ಹುಲ್ಲೂರು
ತಾಯಿ ಮತ್ತು ಮಗಳ ಕರಳುಬಳ್ಳಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರಗಳು ತೆರೆಕಂಡಿದ್ದು ತೀರಾ ಅಪರೂಪ. ಈವರೆಗೂ ಬಂದಿರುವ ಇಂಥ ಬೆರಳೆಣಿಕೆಯ ಚಿತ್ರಗಳು ಕೌಟುಂಬಿಕ ಚೌಕಟ್ಟಿನಲ್ಲೇ ಗಿರಕಿ ಹೊಡೆದಿವೆ. ಇವೆಲ್ಲ ಚಿತ್ರಗಳಿಗಿಂತ ವಿಭಿನ್ನವಾಗಿ ಮೂಡಿ ಬಂದಿದೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟ' ಚಿತ್ರ.
ಈ ಸಿನಿಮಾ ಕೂಡ ಮೇಲ್ನೋಟಕ್ಕೆ ತಂದೆ-ಮಗನ ಕತೆ ಅನಿಸಿದರೂ, ಮನುಷ್ಯ ಸಂಬಂಧಗಳನ್ನು ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಅದನ್ನು ಕಮರ್ಷಿಯಲ್ ನೆಲೆಯಲ್ಲೇ ಹುಡುಕ ಹೊರಟಿದ್ದರಿಂದ, ಇಡೀ ಸಿನಿಮಾ ಹೊಸ ರೀತಿ ತೆರೆದುಕೊಂಡಿದೆ.
ಕತೆಗಿಂತ ಪಾತ್ರಗಳ ಹಿನ್ನೆಲೆ ಗಟ್ಟಿಯಾಗಿದೆ. ಹೀಗಾಗಿ ಚಿತ್ರಕಥೆಯ ಸ್ವರೂಪವೇ ಬದಲಾಗಿದೆ. ಆತ ವೆಂಕೋಬ್ ರಾವ್ (ಅನಂತನಾಗ್). ಈತ ಅಲ್ಜೈಮರ್ (ಮರುಗುಳಿ ಕಾಯಿಲೆ) ಎಂಬ ಕಾಯಿಲೆಗೆ ತುತ್ತಾಗಿರುತ್ತಾರೆ. ಈತನ ಮಗನೇ ಶಿವ (ರಕ್ಷಿತ್ ಶೆಟ್ಟಿ) ಸಾಫ್ಟ್ವೇರ್ ಉದ್ಯೋಗಿ. ಕೆಲಸದ ನಿಮಿತ್ಯ ಶಿವ ಬೇರೊಂದು ಊರಿಗೆ ಹೋಗಬೇಕಾದ ಸಂದರ್ಭ ಬರುತ್ತದೆ. ಹಾಗಾಗಿ ತಂದೆಯನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾನೆ. ಆದರೆ ಅಲ್ಲಿಂದ ವೆಂಕೋಬ್ ರಾವ್ ತಪ್ಪಿಸಿಕೊಳ್ಳುತ್ತಾರೆ. ಶಿವ ಮತ್ತು ವೆಂಕೋಬ್ರನ್ನು ನೋಡಿಕೊಳ್ಳುತ್ತಿದ್ದ ಡಾ.ಸಹನಾ (ಶ್ರುತಿ ಹರಿಹರನ್) ಒಟ್ಟಾಗಿ ವೆಂಕೋಬ್ರನ್ನು ಹುಡುಕುತ್ತಾರೆ. ಈ ಸಂದರ್ಭದಲ್ಲಿ ಮತ್ತೊಂದು ಕತೆ ಬಿಚ್ಚಿಕೊಳ್ಳುತ್ತದೆ. ಆ ಕತೆಯೇ ಸಿನಿಮಾದ ಜೀವಾಳ.
ತಂದೆ ಹುಡುಕಾಟದಲ್ಲಿದ್ದ ಮಗ, ಕೊನೆಗೆ ತನ್ನನ್ನೇ ತಾನು ಹುಡುಕಿಕೊಂಡ ಬಗೆಯಂತೂ ಮನಸ್ಸನ್ನೇ ತೇವಗೊಳಿಸುತ್ತದೆ. ಮಾನವ ಸಂಬಂಧಗಳಿಗೆ ಹೊಸ ಅರ್ಥ ಕಲ್ಪಿಸುತ್ತದೆ. ಕೇವಲ ಶಿವನ ಪಾತ್ರವಷ್ಟೇ ಅಲ್ಲ, ನೋಡುವ ಪ್ರೇಕ್ಷಕ ಕೂಡ ತಾನು ಕಳೆದುಕೊಂಡ ತನ್ನ ತಂದೆಯನ್ನು ಹುಡುಕಲು ಶುರು ಮಾಡುತ್ತಾನೆ. ಹೀಗೆ ಮನಮುಟ್ಟವಂತೆ ದೃಶ್ಯಗಳನ್ನು ಹೆಣೆದಿದ್ದಾರೆ ನಿರ್ದೇಶಕರು.
ನಾಪತ್ತೆಯಾಗಿದ್ದ ವೆಂಕೋಬ್, ಅರಿವಿಲ್ಲದೇ ಕೊಲೆಗಾರರ ಗುಂಪು ಸೇರಿದಾಗಂತೂ ನೋಡುಗರ ಹೃದಯ ಬಡಿತ ಹೆಚ್ಚುತ್ತದೆ. ಸಿಂಪಥಿ ಕ್ರಿಯೇಟ್ ಆಗುತ್ತದೆ. ಕೂತಲ್ಲಿಯೇ ಕಣ್ಣಿರಿಡುವಷ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ ಅನಂತನಾಗ್.
ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರುತಿ ಮತ್ತು ಅನಂತನಾಗ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ನಲ್ಲಿರುವ ಅಷ್ಟೂ ದೃಶ್ಯಗಳೂ ಸೂಪರ್. ಜಿದ್ದಿಗೆ ಬಿದ್ದವರಂತೆ ಇವರೆಲ್ಲ ನಟಿಸಿದ್ದಾರೆ. ವಸಿಷ್ಠ ಸಿಂಹ ಮತ್ತು ಅಚ್ಯುತ ಕುಮಾರ್ ಪಾತ್ರಗಳು ಚಿತ್ರಕ್ಕೆ ಮತ್ತಷ್ಟು ರಂಗು ತುಂಬಿವೆ. ಹಾಡುಗಳನ್ನು ಕಡಿಮೆ ಮಾಡಿದ್ದರೆ, ಕತೆಗೆ ಇನ್ನಷ್ಟು ವೇಗ ಇರುತ್ತಿತ್ತು. ಆದರೂ, ಮೊದಲ ಚಿತ್ರದಲ್ಲೇ ಭರ್ಜರಿ ಗೆಲುವು ಸಾಧಿಸಿದ್ದಾರೆ ನಿರ್ದೇಶಕರು.
ಇತ್ತೀಚಿನ ದಿನಗಳಲ್ಲಿ ಮಾಡಿದ್ದೆಲ್ಲವೂ ಪ್ರಯೋಗ ಅನ್ನುವ ಕೆಟ್ಟ ಸಂಪ್ರದಾಯ ಸಿನಿಮಾ ರಂಗದಲ್ಲಿ ಇದೆ. ಪ್ರಯೋಗ ಅಂದರೆ ಏನು ಅನ್ನುವುದನ್ನು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ತೋರಿಸಿಕೊಟ್ಟಿದೆ.
ಕನ್ನಡ ಚಿತ್ರ