ಈ ಹೆಲಿಕಾಪ್ಟರ್ ಖರೀದಿ ಹಗರಣದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲು ಹೊಸದಿಲ್ಲಿಯ ಸಂಸದೆ ಮೀನಾಕ್ಷಿ ಲೇಖಿ ನೋಟಿಸ್ ನೀಡಿದ್ದರೆ, ಅವರ ಸಹೋದ್ಯೋಗಿ ಭೂಪೇಂದ್ರ ಯಾದವ್ ರಾಜ್ಯಸಭೆಗೆ ನೋಟಿಸ್ ನೀಡಿದ್ದಾರೆ.
ಹಗರಣ ಸಂಬಂಧ ಇಟಲಿ ಕೋರ್ಟ್ ಆದೇಶದಲ್ಲಿ ಪ್ರಸ್ತಾಪವಾಗಿರುವ 'ಸಿಗ್ನೋರ' ಗಾಂಧಿ ವಿಷಯವನ್ನು ಬಿಜೆಪಿ ಸಭೆಯಲ್ಲಿ ಚರ್ಚಿಸಲಿದೆ.
ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣಕ್ಕೆ ಯುಪಿಎ ಸರಕಾರವೇ ಕಾರಣವೆಂದು ಇಟಲಿಯ ಕೋರ್ಟ್ ಹೇಳಿದ್ದು ಈ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್, ಸೋನಿಯಾ ಅವರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್, ಆಸ್ಕರ್ ಫರ್ನಾಂಡಿಸ್ ಅವರ ಹೆಸರುಗಳನ್ನು ಉಲ್ಲೇಖೀಸಲಾಗಿದೆ.
ರಾಜ್ಯ ಸಭೆಯಲ್ಲಿ ಕೋಲಾಹಲ
ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಸೋನಿಯಾ ಹೆಸರು ಇದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದು, ರಾಜ್ಯ ಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಸ್ವಾಮಿ ವಿರುದ್ಧ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದು, ಕಲಾಪವನ್ನು ಮುಂದೂಡಲಾಯಿತು.
ಹೊಸದಿಲ್ಲಿ: ಸಂಸತ್ ಅಧಿವೇಶನದಲ್ಲಿ ಬುಧವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣವನ್ನು ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ದಾಳಿ ಆರಂಭಿಸಿದ್ದರೆ 'ನಾನೇನು ಇದಕ್ಕೆ ಹೆದರೋದಿಲ್ಲ. ನಾವು ಏನನ್ನೂ ಮುಚ್ಚಿಟ್ಟಿಲ್ಲ, ಹೀಗಿರುವಾಗ ನನ್ನ ಹೆಸರು ತೆಗೆದುಕೊಂಡಿರು ವುದಕ್ಕೆ ಭಯ ಪಡುತ್ತಿಲ್ಲ,' ಎಂದು ಸೋನಿಯಾ ಪ್ರತಿಕ್ರಿಯಿಸಿದ್ದಾರೆ.