- ಶರಣು ಹುಲ್ಲೂರು
ಆಮಿರ್ ಖಾನ್ ನಟನೆಯ ತ್ರೀ ಇಡಿಯಟ್ಸ್ ಸಿನಿಮಾ ನೋಡಿದವರು, ಇಂಥದ್ದೊಂದು ಚಿತ್ರ ಕನ್ನಡದಲ್ಲಿ ಏಕೆ ಬರಲಿಲ್ಲ ಅಂದುಕೊಂಡಿದ್ದುಂಟು. ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುತ್ತಲೇ, ಅವರ ನೈಜ ಬದುಕನ್ನು ಅನಾವರಣಗೊಳಿಸುವ ಚಿತ್ರವೊಂದು ಸದ್ಯಕ್ಕೆ ಬೇಕಿತ್ತು. ಅದನ್ನು ಫುಲ್ಫಿಲ್ ಮಾಡಲು ಬರುತ್ತಿದೆ ಫಸ್ಟ್ ರ್ಯಾಂಕ್ ರಾಜು ಚಿತ್ರ. ಹಾಗಂತ ಇದು ತ್ರೀ ಇಡಿಯಟ್ಸ್ ಸಿನಿಮಾದ ರೀಮೇಕ್ ಅಲ್ಲ. ಆ ಕತೆಯೂ ಇಲ್ಲಿಲ್ಲ. ನಮ್ಮ ಸುತ್ತಲೂ ನಡೆದ, ನಮ್ಮ ಅರಿವಿಗೆ ಬಾರದ ಹೊಸ ಸಂಗತಿಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕ ನರೇಶ್ ಕುಮಾರ್ ಎಚ್.ಎನ್.
ಸ್ಕೂಲ್ನಲ್ಲಿ ಫಸ್ಟ್ ರ್ಯಾಂಕ್ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ನಿಜ ಜೀವನದಲ್ಲಿ ಸೋಲುತ್ತಾರೆ. ಸಣ್ಣ ಸಣ್ಣ ವಿಷಯಕ್ಕೂ ಹತಾಶೆಯಾಗುತ್ತಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದವರೇ ಆಗಿದ್ದಾರೆ. ಹಾಗಾದರೆ, ನಮ್ಮ ಎಜ್ಯುಕೇಶನ್ ಇವರಿಗೆ ಕಲಿಸಿದ್ದೇನು? ಸ್ಕೂಲ್ನಲ್ಲಿ ಅಷ್ಟೊಂದು ಅಂಕ ಪಡೆದವರು ಬದುಕಿನಲ್ಲಿ ಯಾಕೆ ಸೋಲುತ್ತಾರೆ ಹೀಗೆ ಅನೇಕ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕರು.
'ನಾನು ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿ ಆಗಿದ್ದ ಸಮಯವದು. ಅಲ್ಲಿ ಸಾಕಷ್ಟು ಫಸ್ಟ್ ರ್ಯಾಂಕ್ ರಾಜುಗಳನ್ನು ನೋಡುತ್ತಿದ್ದೆ. ಈ ಜಗತ್ತಿನ ಜೊತೆ ಅವರ ಹೊಂದಾಣಿಕೆಯೇ ಇರಲಿಲ್ಲ. ಅವರ ವರ್ತನೆಯೇ ನನಗೆ ಹಲವು ಬಾರಿ ಕುತೂಹಲ ಮೂಡಿಸಿತ್ತು. ಅಲ್ಲದೇ ಅವರ ಜತೆ ಹೋದಾಗಲೇ, ವಿಚಿತ್ರ ಅನುಭವುಗಳೂ ಆಗಿದ್ದವು. ಇದನ್ನೇ ಸಿನಿಮಾ ಮಾಡಬೇಕು ಅನಿಸಿತು. ಹೀಗಾಗಿಯೇ ಇಂಥದ್ದೊಂದು ಕತೆಯನ್ನು ಆಯ್ಕೆ ಮಾಡಿಕೊಂಡೆ' ಅನ್ನುವುದು ನಿರ್ದೇಶಕರ ಮಾತು.
ರಾಜು ಪಾತ್ರ ಮಾಡಿದ್ದು ಗುರು ನಂದನ್. ಸೈಬರ್ ಯುಗದೋಳ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿರುವ ಇವರು, ರಾಜು ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. 'ಚಿತ್ರೀಕರಣದ ಮೊದಲ ದಿನ ಗುರುನಂದನ್, ರಾಜು ಗೆಪಟ್ನಲ್ಲಿ ಬಂದರು. ನನ್ನ ಕಲ್ಪನೆಯನ್ನು ಅವತ್ತೇ ಅವರು ಫುಲ್ಫಿಲ್ ಮಾಡಿದರು. ಆ ಪಾತ್ರಕ್ಕೆ ಹೇಳಿ ಮಾಡಿಸಿದ ಕಲಾವಿದ ಗುರುನಂದನ್. ಈ ಪಾತ್ರವನ್ನು ಬೇರೆ ಯಾರೇ ಮಾಡಿದ್ದರೂ, ಇಷ್ಟೊಂದು ನೀಟಾಗಿ ಬರುತ್ತಿರಲಿಲ್ಲ' ಅಂತಾರೆ ನಿರ್ದೇಶಕರು.
ಇದೇ ನ.27ಕ್ಕೆ ಚಿತ್ರ ಬಿಡುಗಡೆ ಆಗುತ್ತಿದ್ದು, ತಾನಿಷ್ಕ ಕಪೂರ್ ಮತ್ತು ಅಪೂರ್ವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ್ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ. ಟ್ರೇಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರದಲ್ಲಿ ಹೆಸರಾಂತ ತಾರಾಗಣವೇ ಇದೆ.
ನಮ್ಮ ನಡುವೆ ಅನೇಕ ಫಸ್ಟ್ ರ್ಯಾಂಕ್ ರಾಜುಗಳು ಇದ್ದಾರೆ. ಸ್ಕೂಲ್ನಲ್ಲಿ ಹೆಚ್ಚೆಚ್ಚು ಅಂಕ ಗಳಿಸುವ ಇವರು, ಬದುಕಿನಲ್ಲಿ ಫೇಲಾಗುತ್ತಲೇ ಇರುತ್ತಾರೆ. ಅವರ ಬದುಕನ್ನು ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.