- ಶರಣು ಹುಲ್ಲೂರು
ಮಾಸ್ಟರ್ ಪೀಸ್ ಸಿನಿಮಾದ 'ಅಣ್ಣಂಗೆ ಲವ್ ಆಗಿದೆ...' ಹಾಡಿನ ಚಿತ್ರೀಕರಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ದಾಖಲೆ ನಿರ್ಮಿಸಿದ್ದರು. ಈಗ ಈ ದಾಖಲೆಯನ್ನು ಮುರಿಯುವ ಪ್ರಯತ್ನವನ್ನು ಮತ್ತೆ ಕನ್ನಡಗರೇ ಮಾಡುತ್ತಿದ್ದಾರೆ. ನಿರ್ದೇಶಕ ಮಹೇಶ್ ಸುಖಧರೆ ತಮ್ಮ 'ಹ್ಯಾಪಿ ಬರ್ತ್ಡೇ' ಸಿನಿಮಾದ ಹಾಡೊಂದಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಸಾವಿರಾರು ಜನಪದ ಕಲಾವಿದರೇ ಇರಲಿದ್ದಾರೆ ಅನ್ನುವುದು ವಿಶೇಷ.
ಈ ಹಾಡಿನ ದೃಶ್ಯವನ್ನು ಚಿತ್ರೀಕರಿಸಲು ನಿರ್ದೇಶಕರು ಮಂಡ್ಯ ಜಿಲ್ಲೆಯ ನಾಗಮಂಗಲವನ್ನು ಆಯ್ಕೆಮಾಡಿಕೊಂಡಿದ್ದಾರೆ. ಇದೇ ಸೋಮವಾರ (ಫೆ. 7ಕ್ಕೆ) ಈ ಹಾಡಿನ ಚಿತ್ರೀಕರಣ ಅಲ್ಲಿ ನಡೆಯುತ್ತಿದೆ. ಜಾನಪದ ಹಿನ್ನೆಲೆಯಲ್ಲಿ ಹಾಡು ಮೂಡಿಬರಲಿದೆ. ಅದಕ್ಕಾಗಿ ವೀರಭದ್ರ ಕುಣಿತ, ಡೊಳ್ಳು ಕುಣಿತ, ಪಟ್ಟದ ಕುಣಿತ, ಕೀಲು ಕುದುರೆ ಕುಣಿತ, ವೀರಗಾಸೆ ಕುಣಿತ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜಾನಪದ ಕಲೆಗಳ ಕಲಾವಿದರು ಈ ಹಾಡಿನಲ್ಲಿ ಭಾಗವಹಿಸುತ್ತಿರುವುದು ವಿಶೇಷ.
ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮೂಲ ಜಾನಪದವನ್ನು ಬಳಸಿಕೊಂಡು ಟ್ಯೂನ್ ರೆಡಿ ಮಾಡಿದ್ದಾರೆ. ಹಾಡಿನಲ್ಲಿ ನಾಯಕ ಸಚಿನ್, ನಾಯಕಿ, ಅಚ್ಯುತ್ ಕುಮಾರ್, ಅಶ್ವಿನಿ ಸೇರಿದಂತೆ ಅನೇಕ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.
'ಇಂಥದ್ದೊಂದು ಹಾಡು ನನ್ನ ಸಿನಿಮಾಗೆ ಸಿಕ್ಕಿದೆ ಅನ್ನುವುದೇ ಖುಷಿ ತರುವಂಥದ್ದು. ಹತ್ತು ಸಾವಿರ ಸಹ ಕಲಾವಿದರ ಜತೆ, ಆ ಊರಿನ ಜನರೂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಆ ಊರಿನಲ್ಲೇ ಅಂದೇ ಲಕ್ಷ ದೀಪೋತ್ಸವ ಕಾರ್ಯಕ್ರಮವೂ ಇದೆ. ಅದಕ್ಕೂ ಜನರು ಸೇರಿರುತ್ತಾರೆ. ಹೀಗಾಗಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನರ ಮಧ್ಯೆ ಹಾಡಿನ ಶೂಟಿಂಗ್ ಆಗುತ್ತಿದೆ. ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕಲಾವಿದರನ್ನು ಬಳಸಿಕೊಂಡು ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ' ಅಂತಾರೆ ನಿರ್ದೇಶಕ ಮಹೇಶ್.
ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಇದೆ. ಚಿತ್ರದ ಹಲವು ದೃಶ್ಯಗಳಿಗೆ ಕ್ಲಾಸಿಕ್ ಚಿತ್ರಗಳ ಟಚ್ ನೀಡಲಾಗುತ್ತಿದೆ. ಹೀಗಾಗಿ ನಾಗಮಂಡಲ, ಭೂತಯ್ಯನ ಮಗ ಅಯ್ಯು. ನಾಗರಹಾವು ಸಿನಿಮಾಗಳು ಮತ್ತೆ ಕನ್ನಡದ ಪ್ರೇಕ್ಷಕರಿಗೆ ಈ ಸಿನಿಮಾದ ಮೂಲಕ ನೆನಪಾಗಲಿವೆ.
ಸಾವಿರಾರು ಕಲಾವಿದರ ಮಧ್ಯೆ ಮಾಸ್ಟರ್ ಪೀಸ್ ಸಿನಿಮಾ ಹಾಡೊಂದು ಶೂಟ್ ಆಗಿ ಅಚ್ಚರಿಗೆ ಕಾರಣವಾಗಿತ್ತು. ಅದನ್ನೂ ಮೀರಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ ಹ್ಯಾಪಿ ಬರ್ತ್ಡೇ ಚಿತ್ರದ ನಿರ್ದೇಶಕ ಮಹೇಶ್ ಸುಖಧರೆ.