Quantcast
Channel: VijayKarnataka
Viewing all articles
Browse latest Browse all 6795

ಸ್ತ್ರೀಪಡೆ ದೇಗುಲ ಪ್ರವೇಶಕ್ಕೆ ತಡೆ

$
0
0

ಶಿಂಗ್ಣಾಪುರ ಪ್ರವೇಶ ಹಕ್ಕಿಗೆ ಹೋರಾಟ ನಿಲ್ಲದು ಎಂದ ರಣ್‌ರಾಗಿಣಿ ಬ್ರಿಗೇಡ್
ಅಹ್ಮದ್‌ನಗರ/ಮಹಾರಾಷ್ಟ್ರ: ನಾಲ್ಕುನೂರು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುರಿಯುತ್ತೇವೆ, ಮಹಿಳೆಯರಿಗೆ ಗರ್ಭಗುಡಿ ಪ್ರವೇಶ ಮಾಡಿಸಿಯೇ ತೀರುತ್ತೇವೆ ಎಂದು ಹೊರಟ ಪ್ರಮೀಳಾ ಸಾಮ್ರಾಜ್ಯವನ್ನು ಶನಿ ಶಿಂಗ್ಣಾಪುರ ಹಾದಿಯಲ್ಲೇ ತಡೆದು ಪೊಲೀಸರು ಹಿಂದಕ್ಕಟ್ಟಿದ್ದಾರೆ.

ಮಹಿಳಾ ಸಂಘಟನೆಗಳ ಪ್ರಯತ್ನಕ್ಕೆ ಬ್ರೇಕ್ ಹಾಕಿದ ಪೊಲೀಸರ ಕ್ರಮಕ್ಕೆ ಆಕ್ರೋಶಗೊಂಡ ಮಹಿಳೆಯರು ರಸ್ತೆಯಲ್ಲೇ ಮಲಗಿ ರಂಪ ರಾದ್ಧಾಂತ ಮಾಡಿದರು.

ಮುಂಬಯಿಯಿಂದ 250 ಕಿ.ಮೀ. ದೂರದಲ್ಲಿರುವ ಪ್ರಸಿದ್ಧ ಶನಿ ದೇಗುಲಕ್ಕೆ ತೆರಳದಂತೆ ತಡೆಯಾಜ್ಞೆ ಹಾಗೂ ಸ್ಥಳೀಯರ ವಿರೋಧವಿದ್ದರೂ ಮಂಗಳವಾರ 6 ಬಸ್‌ಗಳಲ್ಲಿ ಸುಮಾರು 700 ಮಹಿಳಾ ಕಾರ್ಯಕರ್ತೆಯರು ಪುಣೆಯಿಂದ ದೇಗುಲದ ಹಾದಿ ಹಿಡಿದಿದ್ದರು. ಆದರೆ 40 ಕಿ.ಮೀ. ಮೊದಲೇ ಸುಪಾ ಹಳ್ಳಿಯಲ್ಲಿ ಪೊಲೀಸರು ತಡೆದರು.

ಆಕ್ರೋಶಗೊಂಡ 'ಪ್ರಮೀಳಾ ಸಾಮ್ರಾಜ್ಯ' ಬ್ಯಾರಿಕೇಡ್‌ಗಳನ್ನು ಕೆಳಕ್ಕುರುಳಿಸಿ, ಭದ್ರತಾ ಸಿಬ್ಬಂದಿಯೊಂದಿಗೆ ಜಗಳಕ್ಕಿಳಿದರು. ಬಳಿಕ ರಸ್ತೆಯ ಮೇಲೇ ಮಲಗಿ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಮಹಿಳಾ ದಂಡನ್ನು ನಿಯಂತ್ರಿಸುವಲ್ಲಿ ಪೊಲೀಸ್ ಪಡೆ ಹೈರಾಣಾಗಿ ಹೋಯಿತು.

''ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ. ಹನಿ ನೀರನ್ನೂ ಕುಡಿಯುವುದಿಲ್ಲ''ಎಂದು ಇಷ್ಟೆಲ್ಲ ಪ್ರತಿಭಟನೆಯ ಯೋಜನೆ ರೂಪಿಸಿದ 'ಭೂಮಾತಾ ರಣ್‌ರಾಗಿಣಿ ಬ್ರಿಗೇಡ್' ಮುಖ್ಯಸ್ಥೆ ತೃಪ್ತಿ ದೇಸಾಯಿ ಶಪಥ ಮಾಡಿದರು.

ರಸ್ತೆ ಮಾರ್ಗದಲ್ಲಿ ನಮ್ಮನ್ನು ತಡೆದರೆ ಹೆಲಿಕಾಪ್ಟರ್‌ನಲ್ಲಿ ದೇವಾಲಯ ಪ್ರವೇಶಿಸಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತೇವೆ. ಈಗಾಗಲೇ ಹೆಲಿಕಾಪ್ಟರ್ ಬುಕ್ ಕೂಡ ಮಾಡಿರುವುದಾಗಿ ಅವರು ತಿಳಿಸಿದರು.

ಪರಿಸ್ಥಿತಿ ಹತೋಟಿಗೆ ತರಲು ತೃಪ್ತಿಯವರನ್ನು ಬಂಧಿಸುವುದು ಪೊಲೀಸರಿಗೆ ಅನಿವಾರ್ಯವಾಯಿತು.

ಏನಿದು ಪ್ರಕರಣ?:

ಶಿಂಗ್ಣಾಪುರದ ಶನಿ ದೇಗುಲದಲ್ಲಿ ಮೂರ್ತಿಯು ಹೊರ ಆವರಣದಲ್ಲೇ ಇದ್ದರೂ, ಕಟ್ಟೆಯ ಮೇಲ್ಭಾಗಕ್ಕೆ ಮುಂಚಿನಿಂದಲೂ ಮಹಿಳೆಯರಿಗೆ ಪ್ರವೇಶವಿಲ್ಲ. ಕಳೆದ ನವೆಂಬರ್‌ನಲ್ಲಿ ಬಲವಂತವಾಗಿ ಮಹಿಳೆಯೊಬ್ಬರು ಕಟ್ಟೆಯ ಮೇಲೆ ಹತ್ತಿ ಪ್ರಾರ್ಥಿಸಿದ್ದರಿಂದ ದೇಗುಲ ಅಪವಿತ್ರವಾಯಿತೆಂದು 'ಶುದ್ಧಿ' ಮಾಡಲಾಗಿತ್ತು. ಇದರಿಂದ ಕೆರಳಿದ ಪುಣೆ ಮೂಲದ ಮಹಿಳಾ ಸಂಘಟನೆಗಳು ಶತಮಾನದ ಈ ಅಸಮಾನತೆಯ ಸಂಪ್ರದಾಯವನ್ನು ಮುರಿಯಲು ಪಣ ತೊಟ್ಟು ಜ.26ರಂದು ದೇಗುಲ ಪ್ರವೇಶ ಮಾಡಿಯೇ ಸಿದ್ಧ ಎಂದು ಘೋಷಿಸಿದ್ದರು.

ಮಹಿಳೆಗೆ ಮಹಿಳೆಯೇ ಶತ್ರು:

ಇದಕ್ಕೆ ದೇಗುಲದ ಆಡಳಿತ ಮಂಡಳಿಯೇ ಅಲ್ಲದೆ, ಸ್ಥಳೀಯ ಮಹಿಳೆಯರಿಂದಲೇ ವಿರೋಧ ವ್ಯಕ್ತವಾಗಿತ್ತು. ''ಬೇರೆ ಕ್ಷೇತ್ರಗಳಲ್ಲಿ ಸಮಾನತೆಗಾಗಿ ಹೋರಾಡಲಿ. ಆದರೆ, ದೇಗುಲದ ಸಂಪ್ರದಾಯ ಮುರಿಯುವುದು ಸರಿಯಲ್ಲ'' ಎಂದು ಸ್ಥಳೀಯ ಮಹಿಳೆಯೊಬ್ಬರು ತಮ್ಮ ಅಸಮಾಧಾನ ಹೊರಹಾಕಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಕೂಡಾ ಮಹಿಳೆಯೇ ಆಗಿದ್ದು, ಆನಾದಿ ಕಾಲದ ನಿಷೇಧ ನಿಲ್ಲದು ಎಂದಿದ್ದರು. ಜೊತೆಗೆ, ವಿರೋಧಿಸುವ ಮಹಿಳೆಯರು ಶನಿದೇವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದೂ ಎಚ್ಚರಿಸಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ದೇಗುಲದ ಸುತ್ತಲೂ ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ನೇಮಿಸಲಾಗಿತ್ತು.

-----

ಪುರುಷರು ಶನಿ ಮೂರ್ತಿಯ ಬಳಿ ಹೋದರೆ ತೊಂದರೆಯಿಲ್ಲ. ಆದರೆ ಮಹಿಳೆಯರು ಹೋದರೆ, ಅಪವಿತ್ರವಾಗುತ್ತದೆ. ಇದು ಸಂವಿಧಾನ ನೀಡಿದ ಹಕ್ಕುಗಳ ಉಲ್ಲಂಘನೆ. ಈ ವಿಷಯದಲ್ಲಿ ಮಹಾರಾಷ್ಟ್ರದ ಯುವ ಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು.

- ತೃಪ್ತಿ ದೇಸಾಯಿ, ಭೂಮಾತಾ ರಣ್‌ರಾಗಿಣಿ ಬ್ರಿಗೇಡ್ ಮುಖ್ಯಸ್ಥೆ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>