ವೀರಪ್ಪನ್ನನ್ನು ಜೀವಂತವಾಗಿ ಹಿಡಿಯಲು ಸಾಧ್ಯವಿಲ್ಲ ಎನ್ನುವ ಹೊತ್ತಿಗಾಗಲೇ ವೀರಪ್ಪನ್ನಿಂದ ನೂರಾರು ಮಂದಿ ಹತರಾಗಿರುತ್ತಾರೆ. ನರಹಂತಕನ ಕಥೆಯನ್ನು ತೆರೆಗೆ ಅಳವಡಿಸುವಲ್ಲಿ ವರ್ಮಾಗೆ ಬಹುಶಃ ಈ ಅಂಶ ಹೆಚ್ಚು ಕಾಡಿರುತ್ತದೆ. ಚಿತ್ರಕಥೆಯಲ್ಲಿ ಮೂರು ಸಿನಿಮ್ಯಾಟಿಕ್ ಚೇಸಿಂಗ್ಗಳನ್ನು ಹೆಣೆದಿರುವ ಅವರು ಭರ್ಜರಿ ಕ್ಲೈಮ್ಯಾಕ್ಸ್ನೊಂದಿಗೆ ಸಿನಿಮಾ ಮುಕ್ತಾಯಗೊಳಿಸುತ್ತಾರೆ. ಕನ್ನಡಕ್ಕೆ ಇದು ಮತ್ತೊಂದು ಹೊಸತನದ ಸಿನಿಮಾ. ಇಂಟರ್ವೆಲ್ ಆಚೀಚೆ ಚಿತ್ರಕಥೆಯ ಹೆಣಿಗೆಯಲ್ಲಿ ಕೊಂಚ ಬಿಗಿ ಕಡಿಮೆಯಾಯ್ತು ಎನಿಸುವುದೇನೋ ಹೌದು. ಆದರೆ ವರ್ಮಾ ಕ್ಯಾಂಪ್ನ ನಿಪುಣ ತಂತ್ರಜ್ಞರ ಕಸುಬುದಾರಿಕೆ ಮತ್ತು ಕಲಾವಿದರ ಉತ್ತಮ ಪಾತ್ರಪೋಷಣೆ ಈ ಕೊರತೆಯನ್ನು ಸರಿದೂಗಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ 'ಕಿಲ್ಲಿಂಗ್ ವೀರಪ್ಪನ್' ಪ್ರೇಕ್ಷಕರಿಗೆ ಭಿನ್ನ ಅನುಭವ ಕಟ್ಟಿಕೊಡುವಲ್ಲಿ ಯಶಸ್ವಿಯಾಗುತ್ತದೆ.
ಪೊಲೀಸ್ ಅಧಿಕಾರಿಯಾಗಿ ಶಿವರಾಜಕುಮಾರ್ ಚಿತ್ರದ ಕೊನೆಯಲ್ಲಿ 'ರಾಕ್ಷಕನನ್ನು ಮಟ್ಟ ಹಾಕಬೇಕಾದರೆ ರಾಕ್ಷಸನಾಗಬೇಕಾಗುತ್ತದೆ' ಎನ್ನುವ ಸಂಭಾಷಣೆ ಹೇಳುತ್ತಾರೆ. ಈ ಡೈಲಾಗ್ನಂತೆ ಚಿತ್ರದುದ್ದಕ್ಕೂ ಅವರ ಪಾತ್ರವೂ ಭಿನ್ನ ಶೇಡ್ಗಳಲ್ಲಿ ಸಾಗುತ್ತದೆ. ಇನ್ನು ಅವರ ಇಂಟ್ರಡಕ್ಷನ್ ಸೀನ್ಗಳು ಕೂಡ ಸೀದಾಸಾದಾ. ಹೊಡಿ-ಬಡಿ ಚಿತ್ರಗಳಲ್ಲಿ ತಮ್ಮ ನೆಚ್ಚಿನ ನಟನ 'ಹೀರೋಯಿಸಂ' ನೋಡಿದ ಅಭಿಮಾನಿಗಳಿಗೆ ಇದರಿಂದ ಗಾಬರಿಯಾದರೆ ಅದಕ್ಕೆ ವರ್ಮಾ ಹೊಣೆಗಾರರಲ್ಲ. ಏಕೆಂದರೆ ಅದೇ ವರ್ಮಾ ಸ್ಟೈಲ್! ಇಲ್ಲಿ ಶಿವರಾಜ್ರ ಎಂದಿನ ಇಮೇಜ್ಗೆ ಹೊರತಾದ ಪಾತ್ರ ಸೃಷ್ಟಿಸಿ, ಪೊರೆದಿರುವುದು ನಿರ್ದೇಶಕನ ಹೆಚ್ಚುಗಾರಿಕೆ. ಹತ್ಯೆಗೆ ರೂಪಿಸಿದ ಸಂಚುಗಳು ವಿಫಲವಾದಾಗ ಅಸಹಾಯಕ ಅಧಿಕಾರಿಯಾಗಿ ಶಿವರಾಜ್ರದ್ದು ಹದವರಿತ ಅಭಿನಯ. ಭಿನ್ನ ಪಾತ್ರವೊಂದನ್ನು ಪ್ರಭಾವಶಾಲಿಯಾಗಿ ತಾನು ಪ್ರೇಕ್ಷಕರಿಗೆ ದಾಟಿಸಬಲ್ಲೆ ಎನ್ನುವುದನ್ನು ಅವರು ಮತ್ತೊಮ್ಮೆ ಇಲ್ಲಿ ಸಾಬೀತು ಮಾಡಿದ್ದಾರೆ.
ರಂಗಭೂಮಿ ಹಿನ್ನೆಲೆಯ ಉತ್ತರ ಭಾರತದ ನಟ ಸಂದೀಪ್ ಭಾರದ್ವಾಜ್, ಕ್ರೂರಿ ವೀರಪ್ಪನ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಅಚ್ಚರಿಯೆಂದರೆ ಪೊಲೀಸ್ ಅಧಿಕಾರಿ ಮತ್ತು ವೀರಪ್ಪನ್ ಚಿತ್ರದಲ್ಲಿ ಮುಖಾಮುಖಿಯಾಗೋದು ಎರಡ್ಮೂರು ಬಾರಿಯಷ್ಟೆ ! ಆದರೆ ಇಬ್ಬರ ನಡುವಿನ ಸೇಡಿನ ಕಿಚ್ಚು ಚಿತ್ರವನ್ನು ಜೀವಂತವಾಗಿಡುತ್ತದೆ. ಸಾಮಾನ್ಯವಾಗಿ ವರ್ಮಾ ಸಿನಿಮಾಗಳಲ್ಲಿ 'ಹೆಚ್ಚು ಮಾತನಾಡದ, ಪ್ರೇಕ್ಷಕರನ್ನು ಕಾಡುವ' ಕೆಲವು ಪಾತ್ರಗಳಿರುತ್ತವೆ. 'ಕಿಲ್ಲಿಂಗ್ ವೀರಪ್ಪನ್'ನಲ್ಲೂ ಅಂತಹ ಪಾತ್ರಗಳಿದ್ದು, 'ಬೇಬಿ'ಯಾಗಿ ಸಂಜಾರಿ ವಿಜಯ್, ವಿಲಕ್ಷಣ ವ್ಯಕ್ತಿತ್ವದ ಪೊಲೀಸ್ ಅಧಿಕಾರಿ 'ಕುಮಾರ್' ಇಷ್ಟವಾಗುತ್ತಾರೆ. ಪತ್ರಕರ್ತೆಯಾಗಿ ಪರುಲ್ ಯಾದವ್, ಮುತ್ತುಲಕ್ಷ್ಮಿಯಾಗಿ ಯಜ್ಞಾಶೆಟ್ಟಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೆ ಶಿಷ್ಟ-ನಾಜೂಕು ವ್ಯಕ್ತಿತ್ವದ ಮುತ್ತುಲಕ್ಷ್ಮಿ ಪಾತ್ರದ ಚಿತ್ರಣ ಅದೇಕೋ ಚಿತ್ರಕಥೆಯಿಂದ ಹೊರಗೆ ನಿಲ್ಲುತ್ತದೆ. ನಿರ್ದೇಶನಕ್ಕೆ ಬೆಂಬಲವಾಗಿ ನಿಂತಿರುವ ಚಿತ್ರದ ತಂತ್ರಜ್ಞರೆಲ್ಲರಿಗೂ ವರ್ಮಾಗೆ ಸಿಗುವಷ್ಟೇ ಅಂಕಗಳು ಸಿಗಬೇಕು.
- ಶಶಿಧರ ಚಿತ್ರದುರ್ಗ