ಉಭಯ ನಟರು ತಮ್ಮ ಪಾದರಕ್ಷೆಗಳ ಸಹಿತ ದೇಗುಲ ಪ್ರವೇಶಿದ್ದು ಒಂದು ತಿಂಗಳ ಹಿಂದೆ ಟಿವಿ ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು. ಇದರ ವಿರುದ್ಧ ಅಖಿಲ ಭಾರತೀಯ ಹಿಂದೂ ಮಹಾಸಭಾ ಸದಸ್ಯರು ಕೋರ್ಟ್ ಮೊರೆ ಹೋಗಿದ್ದು, ಅರ್ಜಿ ಸ್ವೀಕೃತವಾಗಿದೆ. ಖಾನ್ಗಳ ವಿರುದ್ಧ ಮೀರತ್ ಜಿಲ್ಲಾ ನ್ಯಾಯಾಲಯದ ವಿಶೇಷ ಮ್ಯಾಜಿಸ್ಟ್ರೇಟ್ ಅರ್ಜಿ ಸ್ವೀಕರಿಸಿದ್ದು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ:
ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಕ್ಕೆ ಅಪರಾಧ ಪ್ರಕ್ರಿಯಾ ಸಂಹಿತೆಯ 1973ರ 156 (3)ವಿಭಾಗದ ಅಡಿಯಲ್ಲಿ ವಿಶೇಷ ಮ್ಯಾಜಿಸ್ಟ್ರೇಟ್ ದೂರಿನ ಅರ್ಜಿಯನ್ನು ನೋಂದಾಯಿಸಲಾಗಿದೆ. ನಮ್ಮ ಮನವಿಯನ್ನು ಜನವರಿ 13ರಂದು ಮ್ಯಾಜಿಸ್ಟ್ರೇಟ್ ಅಂಗೀಕರಿಸಿದ್ಧಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಅಖಿಲ ಭಾರತೀಯ ಹಿಂದೂ ಮಹಾಸಭಾ ಸದಸ್ಯರು ಬಹಿರಂಗಪಡಿಸಿದ್ದಾರೆ.
"ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಪಾದರಕ್ಷೆ ಸಹಿತ ಕಾಳಿ ದೇವಾಲಯದ ಒಳಗೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇರುವ ದೃಶ್ಯದ ಪ್ರೊಮೊಗಳು ಪ್ರಸಾರವಾಗಿದ್ದನ್ನು ಕಂಡು ನಾನು ಆಘಾತಕ್ಕೆ ಒಳಗಾಗಿದ್ದೆ. ಇದರ ವಿರುದ್ಧ ಯಾರೂ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದೆ. ಆ ಪ್ರೋಮೊ ಪ್ರಸಾರ ಮಾಡಿದ ಚಾನೆಲ್ಗೆ ಇ ಮೇಲ್ ಕಳಿಸಿದೆ. ಆದರೆ ಏನೂ ಪ್ರತಿಕ್ರಿಯೆ ಬಾರದಿದ್ದಾಗ ಬಾಲಿವುಡ್ ನಟರ ವಿರುದ್ಧ ಕೋರ್ಟ್ ಮೆಟ್ಟಿಲೇರುವ ವಿನಃ ಬೇರೆ ಆಯ್ಕೆಗಳಿರಲಿಲ್ಲ'' ಎಂದು ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷ ಭರತ್ ರಜಪೂತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಏನಾಗಿತ್ತು?
ಬಾಲಿವುಡ್ನ ದೈತ್ಯ ನಟರಿಬ್ಬರೂ ಬಿಗ್ ಬಾಸ್ನಲ್ಲಿ ಡಿಸೆಂಬರ್ 19 ಮತ್ತು ಡಿಸೆಂಬರ್ 20 ರಂದು ಕಾಣಿಸಿಕೊಳ್ಳುವ ಸಲುವಾಗಿ ವಾರವಿಡೀ ಪ್ರಸಾರವಾದ ಪ್ರೊಮೊದಲ್ಲಿ ಆ ದೃಶ್ಯಗಳು ಕಾಣಿಸಿಕೊಂಡಿದ್ದವು. ಎರಡೂ ನಟರು ಕಾಳಿ ದೇವಾಲಯದಲ್ಲಿ ಜತೆಗಿರುವ ದೃಶ್ಯವು 'ಕರಣ್ ಅರ್ಜುನ್' ಚಿತ್ರದ ನಕಲಾಗಿತ್ತು. ಆದರೆ ಆ ದೃಶ್ಯ ಚಿತ್ರೀಕರಿಸುವಾಗ ಬೂಟುಗಳನ್ನು ತೆಗೆದಿರಲಿಲ್ಲ. ಈ ಪ್ರಮಾದವೀಗ ನಟರಿಬ್ಬರಿಗೂ ಸಂಕಷ್ಟ ತಂದಿದೆ.
ಮುಂಬಯಿ: ಕಾಳಿ ದೇವಸ್ಥಾನಕ್ಕೆ ತಮ್ಮ ಬೂಟಿನ ಸಹಿತ ಪ್ರವೇಶಿಸಿದ್ದ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ಗೆ ಇದೀಗ ಸಂಕಟ ಶುರುವಾಗಿದೆ.