Quantcast
Channel: VijayKarnataka
Viewing all articles
Browse latest Browse all 6795

ಹೂಡಿಕೆಗೆ ಕರ್ನಾಟಕವೇ ಯೋಗ್ಯ: ಸಿಎಂ

$
0
0

* ಯಾವ ಕಾರ್ಖಾನೆಯವರೂ ರಾಜ್ಯ ಬಿಟ್ಟು ಹೋಗಿಲ್ಲ
* ವಾಣಿಜ್ಯ, ಕೈಗಾರಿಕಾ ಸಂಸ್ಥೆಗಳ ಸಮಾವೇಶದಲ್ಲಿ ಸಿಎಂ

ಮೈಸೂರು: ಇಡೀ ದೇಶದಲ್ಲಿ ಬಂಡವಾಳ ಹೂಡಲು ಯೋಗ್ಯವಾಗಿರುವುದು ಕರ್ನಾಟಕವೊಂದೇ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಿಂದ ಯಾವುದೇ ಕೈಗಾರಿಕೆ ಪಲಾಯನವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಗೋಲ್ಡನ್ ಲ್ಯಾಂಡ್ ಮಾರ್ಕ್ ಹೊಟೇಲ್‌ನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಎಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

''ರಾಜ್ಯದ ಆರ್ಥಿಕ ಬೆಳವಣಿಗೆಗೆ ಉದ್ಯಮಿಗಳು ಮತ್ತು ಸರಕಾರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಆಗಲೇ ರಾಜ್ಯದ ಅಭಿವೃದ್ಧಿ ಸಾಧ್ಯ. ಅತಿ ಹೆಚ್ಚು ಕಾರ್ಖಾನೆಗಳನ್ನು ಉದ್ಯಮಿಗಳು ರಾಜ್ಯದಲ್ಲಿ ಸ್ಥಾಪಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ನೆರವಾಗಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವ ಕಾರ್ಖಾನೆ ಬಿಟ್ಟು ಹೋಗಿಲ್ಲ:

''ಹೊಸ ಕೈಗಾರಿಕಾ ನೀತಿಯೊಂದಿಗೆ ಹಲವು ನೀತಿಯನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರಕಾರ, ಪ್ರಗತಿಪರ ಹೆಜ್ಜೆ ಇಡುತ್ತಿದೆ. ಯಾವ ಕೈಗಾರಿಕೆಯೂ ರಾಜ್ಯ ಬಿಟ್ಟು ಹೋಗಿಲ್ಲ. ಹೋಂಡಾ ಕಂಪೆನಿಯವರು ಧಾರವಾಡದಿಂದ ಆಂಧ್ರಕ್ಕೆ ಹೋದರು. ಆದರೆ ಅವರಿಗೆ ಅಲ್ಲಿಯೂ ಸೂಕ್ತ ವಾತಾವರಣ ಸಿಕ್ಕಿಲ್ಲ, ಮತ್ತೆ ಬರುವ ವಿಶ್ವಾಸವಿದೆ. ನಂಜನಗೂಡಿನಲ್ಲಿ ಏಷಿಯನ್ ಪೇಂಟ್ಸ್ ಕಾರ್ಖಾನೆ ಸ್ಥಾಪನೆ ರದ್ದಾಗಲಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಆದರೆ ಇತ್ತೀಚೆಗೆ ನಾನು ಏಷಿಯನ್ಸ್ ಪೇಂಟ್ಸ್ ಕಾರ್ಖಾನೆ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ್ದೇನೆ''ಎಂದು ಹೇಳಿದರು.

ಅಪಪ್ರಚಾರ:

''ಗ್ರಾಮೀಣ ಪ್ರದೇಶದಿಂದ ಬಂದಿರುವ ಮುಖ್ಯಮಂತ್ರಿಗಳು ಕೈಗಾರಿಕಾಭಿವೃದ್ಧಿಗೆ ಒತ್ತು ನೀಡುತ್ತಿಲ್ಲ. ಇದರಿಂದ ಸಾಕಷ್ಟು ಉದ್ಯಮಿಗಳು ಪಲಾಯನ ಮಾಡುತ್ತಿದ್ದಾರೆ ಎಂದು ಕೆಲವರು ಆಧಾರ ರಹಿತವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಎಂಟು ವರ್ಷಗಳ ಕಾಲ ಹಣಕಾಸು ಸಚಿವನಾಗಿ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡಿದ್ದೇನೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ವ್ಯಾಟ್ ಜಾರಿಗೆ ತಂದಿದ್ದಲ್ಲದೇ, ತೆರಿಗೆ ವ್ಯವಸ್ಥೆಯನ್ನು ಸರಳೀಕರಣಗೊಳಿಸಿದ್ದು ನಾನೇ''ಎಂದರು.

ಉದ್ಯೋಗ ಸೃಷ್ಟಿ:

ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 450 ಕಾರ್ಖಾನೆಗಳ ಸ್ಥಾಪನೆಗೆ ಮಂಜೂರಾತಿ ನೀಡಿದ್ದು, 1.21 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. 2.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಹೊಸ ಕೈಗಾರಿಕಾ ನೀತಿಯಿಂದಾಗಿ 5 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷೆಯಿದೆ. ಫೆಬ್ರವರಿಯಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಭರದ ಸಿದ್ಧತೆ ಮಾಡಲಾಗುತ್ತಿದೆ''ಎಂದು ಹೇಳಿದರು.

ಕೈಗಾರಿಕಾ ವಸಾಹತು:

''ರಾಜ್ಯದಲ್ಲಿ ಕೈಗಾರಿಕೆಗಳು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಯಾದವಗಿರಿ, ಗುಲ್ಬರ್ಗಾ, ಕೋಲಾರ, ತುಮಕೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮಧ್ಯೆ ತುಮಕೂರಿನಲ್ಲಿ 12500 ಎಕರೆ ಪ್ರದೇಶದಲ್ಲಿ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ ಸ್ಥಾಪಿಸಲಾಗುತ್ತಿದೆ''ಎಂದರು.

ಸನ್ಯಾಸ ಬೇಡ:

''ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮಕ್ಕಿಂತ ಒಂದು ಸ್ಥಾನ ಹೆಚ್ಚು ಪಡೆದರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಸವಾಲು ಹಾಕಿದ್ದರು. ಆದರೆ ಈಗ ಅವರೇ ಯಾರು ಸವಾಲೇ ಸ್ವೀಕರಿಸಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಅವರು ಸನ್ಯಾಸ ಸ್ವೀಕರಿಸಿ ಎಂದು ನಾವು ಹೇಳುವುದಿಲ್ಲ. ಅಂತಹವರು ನಮ್ಮೊಂದಿಗೆ ಇರಬೇಕು'' ಎಂದು ಹೇಳಿದರು.

ಸರಕಾರ ನಿಮ್ಮೊಂದಿಗೆ:

''ಎರಡು ದಿನಗಳ ಕಾಲ ನಡೆಯಲಿರುವ ಸಮಾವೇಶದಲ್ಲಿ ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿರ್ಣಯಗಳನ್ನು ಕೈಗೊಂಡು ಸರಕಾರಕ್ಕೆ ವರದಿ ಸಲ್ಲಿಸಿ, ಸರಕಾರ ನಿಮ್ಮೊಂದಿಗೆ ಸದಾ ಇರಲಿದೆ. ಕೈಗಾರಿಕಾ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲಿದೆ'' ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಿಎಂ, ''ಕೈಗಾರಿಕಾ ಸಮಸ್ಯೆಗಳ ಬಗ್ಗೆ ಚರ್ಚಿಸಲು ದುಂಡು ಮೇಜಿನ ಸಮ್ಮೇಳನ ನಡೆಸಲಾಗುವುದು, ಟ್ರೇಡ್ ಲೈಸೆನ್ಸ್ ನೀಡುವಲ್ಲಿ ಇರುವ ವ್ಯವಸ್ಥೆಯನ್ನು ಮಾರ್ಪಾಡುಗೊಳಿಸಲು ಕ್ರಮ ವಹಿಸಲಾಗುವುದು'' ಎಂದು ಹೇಳಿದರು.

ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ತನ್ವೀರ್ ಸೇಠ್, ಎಚ್.ಪಿ.ಮಂಜುನಾಥ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ತಲ್ಲಮ್ ದ್ವಾರಕನಾಥ್, ಮಾಜಿ ಅಧ್ಯಕ್ಷ ಎಸ್. ಸಂಪತ್ ರಾಮನ್, ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಎಂ.ಸಿ.ದಿನೇಶ್, ಉಪಾಧ್ಯಕ್ಷ ಕೆ.ರವಿ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಎ.ಎಸ್.ಸತೀಶ್, ಶತಮಾನೋತ್ಸವ ಸಂಭ್ರಮಾಚರಣೆ ಸಮಿತಿ ಅಧ್ಯಕ್ಷ ಕೆ.ಶಿವಷಣ್ಮುಗಂ ಇದ್ದರು.

ಮೇಕ್ ಇನ್ ಕರ್ನಾಟಕ

''ಕೇಂದ್ರ ಸರಕಾರದ ಯೋಜನೆಗಳಿಗೆ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಕೇಂದ್ರ ಸರಕಾರ ಮೇಕ್ ಇನ್ ಇಂಡಿಯಾ ಮಾಡಲು ಹೊರಟಿದ್ದರೆ ನಾವು ಒಂದು ಹೆಜ್ಜೆ ಮುಂದೆ ಹೋಗಿ ಮೇಕ್ ಇನ್ ಕರ್ನಾಟಕ ಮಾಡಲು ಹೊರಟಿದ್ದೇವೆ. ನಮ್ಮ ರಾಜ್ಯದಲ್ಲಿ ಸಿಗುವಷ್ಟು ಮಾನವ ಸಂಪನ್ಮೂಲ ಬೇರೆ ಯಾವ ರಾಜ್ಯದಲ್ಲಿಯೂ ಸಿಗುವುದಿಲ್ಲ'' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿದ್ಯುತ್ ಸ್ವಾವಲಂಬನೆ:

''ರಾಜ್ಯದಲ್ಲಿ 2016 ಜೂನ್ ವೇಳೆಗೆ 2300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ 2017-18ರ ವೇಳೆಗೆ ರಾಜ್ಯ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಸ್ವಾವಲಂಬನೆ ಸಾಧಿಸಲಿದೆ'' ಎಂದು ತಿಳಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>