* ಶರಣು ಹುಲ್ಲೂರು
ನೀವು ಯಾವುದೇ ಥಿಯೇಟರ್ಗೆ ಹೋಗಿ, ಸಿನಿಮಾ ಶುರುವಾಗುವುದಕ್ಕಿಂತ ಮುಂಚೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತು ಇದ್ದೇ ಇರುತ್ತದೆ. ಅದರಲ್ಲೂ ಪ್ರತಿ ಪ್ರೇಕ್ಷಕನಿಗೂ ಸಿಗರೇಟ್ನಿಂದಾಗಿ ಮುಖೇಶ್ ಏನಾದ ಅನ್ನುವ ಸಂಗತಿ ತಿಳಿದಿರುತ್ತದೆ. ಅಂಥದ್ದೇ ವಿಷಯವನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಲಕ್ಕಿ ಶಂಕರ್. ಐದತ್ತು ನಿಮಿಷದಲ್ಲಿ ಹೇಳಬೇಕಾಗಿದ್ದನ್ನು ಎರಡೂವರೆ ಗಂಟೆ ಎಳೆದಿದ್ದಾರೆ. ಹೀಗಾಗಿ ಸಿಗರೇಟು ಸಿನಿಮಾ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತಲೇ, ಮನಸ್ಸಿಗೆ ಘಾಟು ಮೂಡಿಸುತ್ತದೆ. 'ಧೂಮಪಾನ ಆರೋಗ್ಯಕ್ಕೆ ಹಾನಿಕರ'ಎಂದು ತಿಳಿಸುವ ಅತಿ ಉದ್ದದ್ದ ಡಾಕ್ಯುಮೆಂಟರಿ ಚಿತ್ರ ಅನಿಸುತ್ತದೆ.
ಲಕ್ಕಿ ಶಂಕರ್ ಪ್ರತಿಭಾವಂತ ನಿರ್ದೇಶಕ ಅನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಈ ಹಿಂದಿನ ನೈಂಟಿ ಮತ್ತು ದೇವ್ರಾಣೆ ಚಿತ್ರಗಳು ಕುಡಿತ ಮತ್ತು ಮೌಢ್ಯತೆಯ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದವು. ಸಿಗರೇಟ್ ಚಿತ್ರವು ಅದೇ ಹಾದಿಯಲ್ಲೇ ಸಾಗಿಬಂದಿದ್ದರೂ, ಪೇಲವ ಚಿತ್ರಕತೆಯಿಂದಾಗಿ ರುಚಿಸದು.
ಸಿಗರೇಟ್ ಸೇವನೆ ಹಾನಿಕರ ಅನ್ನುವುದನ್ನು ವಿವಿಧ ಉದಾಹರಣೆ ಕೊಟ್ಟು ಹೇಳುವ ನಾಯಕ (ನಾಗಶೇಖರ್)ನ ಮಾತಿನಲ್ಲಿ ಯಾವುದೇ ಹೊಸತಿಲ್ಲ. ಈಗಾಗಲೇ ಅವೆಲ್ಲವೂ ಪರಿಚಿತ ಸಂಗತಿಗಳೆ. ಇದರ ಜತೆಗೊಂದು ಲವ್ಸ್ಟೋರಿ ಇದೆ. ಸಾಧು ಕೋಕಿಲಾ ಮತ್ತು ನಾಗ್ ಶೇಖರ್ರ ಹಾಸ್ಯ ಸನ್ನಿವೇಶಗಳಿವೆ. ಹೀಗಾಗಿ ಅಲ್ಲಲ್ಲಿ ಕೊಂಚ ನಿರಾಳತೆ ಸಿಗುತ್ತದೆ. ಈ ಸಿನಿಮಾದ ಮೂಲಕ ಪರಿಚಿತವಾದ ರಕ್ಷಿತಾ ಪೊನ್ನಮ್ಮ ನಟನೆಯಲ್ಲಿ ಪಳಗಬೇಕಿದೆ. ರೂಪಶ್ರೀ ಕೂಡ ಪಾತ್ರ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಪಂಚಿಂಗ್ ಡೈಲಾಗ್, ವಿಶೇಷ ಅನಿಸುವ ದೃಶ್ಯಗಳು, ಉತ್ತಮವಾದ ಹಿನ್ನೆಲೆ ಸಂಗೀತ ಇರದ ಕಾರಣ ಸಿಗರೇಟ್ ಹಾನಿಕಾರ ಅನಿಸುತ್ತದೆ.
ಕನ್ನಡ ಚಿತ್ರ