ಪದ್ಮಾ ಶಿವಮೊಗ್ಗ
* ಮಾಸ್ಟರ್ ಪೀಸ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಹೇಗನ್ನಿಸ್ತಿದೆ?
- ಟೆನ್ಷನ್ ಅಂತೂ ಇಲ್ಲ. ಆದರೆ, ಜನರು ಹೇಗೆ ಸ್ವೀಕರಿಸ್ತಾರೆ ಅನ್ನೋ ಕುತೂಹಲವಿದೆ. ಮನರಂಜನೆ ಇದೆ. ಜನರಿಗೆ ಇಷ್ಟ ಆಗುತ್ತೆ ಅನ್ನೋ ವಿಶ್ವಾಸ ಇದೆ. ಜನರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ.
*ಚಿತ್ರದಲ್ಲಿ ಯಾವ ವಿಚಾರಕ್ಕೆ ಹೆಚ್ಚಿನ ಇಂಪಾರ್ಟೆನ್ಸ್ ಕೊಟ್ಟಿದ್ದೀರಿ?
- ಯಾವುದೋ ಒಂದು ವಿಚಾರಕ್ಕೆ ಮಾತ್ರ ಅಂತ ಇಲ್ಲ. ಕಾಮಿಡಿ, ಮನರಂಜನೆ, ಡ್ಯಾನ್ಸ್, ಮ್ಯೂಸಿಕ್, ಲವ್ ಎಲ್ಲಕ್ಕೂ ಪ್ರಾಮುಖ್ಯತೆ ನೀಡಿದ್ದೇನೆ. ಸ್ಟಾರ್ನ ಹೈಲೈಟ್ ಮಾಡಬೇಕಿರುತ್ತೆ. ಯಶ್ ಒಳ್ಳೆಯ ಡಾನ್ಸರ್ ಆಗಿರೋದ್ರಿಂದ ಅದೂ ಕೂಡ ವಿಶೇಷವಾಗಿ ಮೂಡಿಬಂದಿದೆ.
*ಯಶ್ರನ್ನು ನೆಗೆಟಿವ್ ಆಗಿ ತೋರಿಸೋದು ರಿಸ್ಕ್ ಅನ್ನಿಸಲಿಲ್ವಾ?
- ಇದು ಒಂದು ಪ್ರಯೋಗ ಅಂತಾನೇ ಹೇಳಬಹುದು. ಈಗ ಅವರಿಗಿರುವ ಇಮೇಜಿಗೆ ಸಡನ್ ಆಗಿ ನೆಗೆಟಿವ್ ಕ್ಯಾರೆಕ್ಟರ್ನಲ್ಲಿ ತೋರಿಸೋದು ಚಾಲೆಂಜಿಂಗ್ ಅನ್ನಿಸಿದೆ. ಆದರೆ ಕತೆಗೆ ಅದು ಬೇಕಿತ್ತು. ನೆಗೆಟಿವ್ ಕ್ಯಾರೆಕ್ಟರ್ ಆಗಿದ್ರೂ ಜನರಿಗೆ ಆ ಪಾತ್ರ ಇಷ್ಟ ಆಗುತ್ತೆ.
* ನೆಗೆಟಿವ್ ಕ್ಯಾರೆಕ್ಟರ್ನಿಂದ ಒಳ್ಳೆಯ ಮೆಸೇಜ್ ಯಾವ ರೀತಿ ಹೇಳೋಕೆ ಪ್ರಯತ್ನಿಸಿದ್ದೀರಿ?
- ಲವ್ ಸ್ಟೋರಿ ಮಾಮೂಲಿ. ಬೇರೆ ತರಹದ ಸಿನಿಮಾ ಮಾಡಬೇಕು ಅಂತ ಯೋಚಿಸಿದಾಗ ಇದು ಹೊಳೆಯಿತು. ಯುವಜನತೆಯಲ್ಲಿ ಹೋರಾಟದ ಮನೋಭಾವ ಕಡಿಮೆಯಾಗಿದೆ. ಅನ್ಯಾಯದ ವಿರುದ್ಧ ಹೋರಾಡ್ತಿಲ್ಲ. ನಾವೆಲ್ಲಾ ವಾಯ್ಸ್ ರೇಸ್ ಮಾಡ್ತಿಲ್ಲ. ಇದನ್ನೆಲ್ಲಾ ಚಿತ್ರದಲ್ಲಿ ಹೇಳಿದ್ದೇನೆ. ಬೇರೆ ತರಹ ನಿರೂಪಣೆ ಮಾಡಿದ್ದೇನೆ. ಇದೇ ಯಶ್ಗೆ ಇಷ್ಟ ಆಗಿದ್ದು. ಹೀರೊಯಿಸಂ ಇದೆ. ಆ್ಯಕ್ಷನ್ ಇದೆ. ಒಳ್ಳೆಯ ಮೆಸೇಜ್ ಕೂಡಾ ಇದೆ.
*ಈ ಚಿತ್ರದಲ್ಲಿ ಸಂಭಾಷಣೆಗೆ ಹೆಚ್ಚು ಒತ್ತು ಕೊಟ್ಟಿದ್ದೀರಾ?
ಡೈಲಾಗ್ ಮೇಲೆ ಚಿತ್ರ ನಿಲ್ಲಿಸಬೇಕು ಅಂತ ಬರೆದಿಲ್ಲ. ಬೇರೆ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಕಡಿಮೆ ಸಂಭಾಷಣೆ ಬರೆದಿದ್ದೀನಿ ಅನ್ನಿಸ್ತಿದೆ. ವಿಷ್ಯುಯಲ್ಸ್ ಮೇಲೇ ಹೆಚ್ಚು ಕಾನ್ಸಂಟ್ರೇಟ್ ಮಾಡಿದ್ದೇನೆ. ನಿರ್ದೇಶಕನಾಗಿ ಕತೆಗೆ ಬೇಕಾಗಿರೋ ಅಷ್ಟೇ ಸಂಭಾಷಣೆ ಇದೆ. ದೃಶ್ಯಗಳಲ್ಲಿ ಹೆಚ್ಚು ಆಟ ಆಡಿದ್ದೇನೆ. ಭರಪೂರ ಮನರಂಜನೆ ಇದೆ. ಯಶ್ ಸಿನಿಮಾದ ಬಗ್ಗೆ ಜನರಿಗಿರುವ ನಿರೀಕ್ಷೆ ಹುಸಿಯಾಗೋಲ್ಲ.
*ಇತ್ತೀಚೆಗೆ ಸ್ಟಾರ್ ನಟರ ಚಿತ್ರಗಳಲ್ಲಿ ಸ್ಟಾರ್ಗಳ ಸ್ಟಾರ್ ಅನ್ನೋ ಹಾಗೆ ಡೈಲಾಗ್ ಇರುತ್ತೆ. ನೀವು ಕೂಡಾ ಹಾಗೆ ಬರೆಯೋದು ಯಾಕೆ?
ಇಲ್ಲಾ.. ಖಂಡಿತ ಯಾವ ಸ್ಟಾರ್ ನಟರನ್ನೂ ಮನದಲ್ಲಿಟ್ಟುಕೊಂಡು ಡೈಲಾಗ್ ಬರೆಯೋಲ್ಲ. ಒಬ್ಬ ಸ್ಟಾರ್ ನಟನಿಂದ ಅಭಿಮಾನಿಗಳು ಯಾವ ರೀತಿಯ ಬಿಲ್ಡಪ್ ನೋಡಲು ಬಯಸುತ್ತಾರೆ ಅನ್ನೋದನ್ನು ಗಮನದಲ್ಲಿಟ್ಟುಕೊಂಡು ಕೆಲವೊಮ್ಮೆ ಡೈಲಾಗ್ ಹೇಳಿಸಬೇಕಾಗುತ್ತೆ. ಯಾಕೆಂದ್ರೆ ಅವರನ್ನು ಮೆಚ್ಚಿಸಬೇಕು. ಹೀರೊಯಿಸಂ ಇರಬೇಕಾಗುತ್ತೆ. ಅದೂ ಕೂಡಾ ಪಾತ್ರ ಮತ್ತು ಕತೆಗೆ ತಕ್ಕಂತೆ ಅಷ್ಟೆ.
*ಯಶ್ ತಮ್ಮ ಚಿತ್ರಗಳಲ್ಲಿ ಹೆಚ್ಚು ಇಂಟರ್ಫಿಯರೆನ್ಸ್ ಆಗುತ್ತಾರೆ ಅನ್ನೋ ಮಾತಿದೆ. ಇದು ನಿಮಗೆ ಸ್ಪೇಸ್ ಕಡಿಮೆ ಮಾಡಿದೆಯಾ?
ಇನ್ವಾಲ್ಮೆಂಟ್ ಇದೆ. ಆದರೆ ಇಂಟರ್ಫಿಯರೆನ್ಸ್ ಇಲ್ಲ. ನಾನು ಸ್ಕ್ರೀನ್ ಪ್ಲೇ ಮತ್ತು ಡೈಲಾಗ್ ರೆಡಿ ಮಾಡಿಕೊಂಡು ಯಶ್, ನಿರ್ಮಾಪಕರು, ಛಾಯಾಗ್ರಾಹಕರಿಗೆ ಚಿತ್ರೀಕರಣಕ್ಕೆ ಮೊದಲು ಕೊಟ್ಟಿದ್ದೆ. ಆಗ ನಾವು ತಯಾರಿ ಮಾಡಿಕೊಂಡಿದ್ದನ್ನು ವಿಷ್ಯುಯಲೈಸ್ ಮಾಡೋದು ಬಾಕಿ ಇರುತ್ತೆ ಅಷ್ಟೆ. ಆಕ್ಟ್ ಮಾಡುವಾಗ ಕಲಾವಿದರು 'ಹೀಗೆ ಮಾಡಬಹುದಾ?' ಅಂತ ಕೇಳ್ತಾರೆ. ಅದು ಚೆನ್ನಾಗಿದೆ ಅನ್ನಿಸಿದಾಗ ಒಪ್ಪಿದ್ದೇನೆ. ಪ್ರತಿ ಹಂತದಲ್ಲೂ ಇಂಪ್ರೂವ್ಮೆಂಟ್ ಮಾಡಿಕೊಳ್ಳೊಕೆ ಸಾಧ್ಯವಾಗುತ್ತೆ. ಆದರೆ, ಯಶ್ ಎಲ್ಲಾ ವಿಚಾರದಲ್ಲಿ ತಮ್ಮದೇ ನಡೆಯಬೇಕು ಅಂತ ಖಂಡಿತ ಮೂಗು ತೂರಿಸೋಲ್ಲ. ನಿರ್ದೇಶಕನಿಗೆ ಸ್ಪೇಸ್ ಕೊಡುತ್ತಾರೆ.
*ನಿಮ್ಮಿಬ್ಬರ ನಡುವಿನ ಕೆಮಿಸ್ಟ್ರಿ ಹೇಗೆ ಇದೆ?
- ಬಹಳ ಚೆನ್ನಾಗಿದೆ. ರಾಜಾ ಹುಲಿ ಚಿತ್ರಕ್ಕೆ ನಾನು ಕೆಲಸ ಮಾಡಿದ್ದೆ. ಆಗಲೇ ಯಶ್ ಮತ್ತು ನನ್ನ ನಡುವೆ ಒಂದು ರ್ಯಾಪೋ ಬಿಲ್ಡ್ ಆಗಿತ್ತು. ಹಾಗಾಗಿಯೇ ಅವರ ಜತೆ ಸಿನಿಮಾ ಮಾಡೋದು ನನಗೆ ಸಾಧ್ಯ ಅನ್ನಿಸಿದ್ದು. ಯಶ್ಗೂ ನಾನು ನಿರ್ದೇಶನ ಮಾಡಲಿ ಅನ್ನಿಸಿದ್ದು.
*ಸಂಭಾಷಣೆಕಾರ ಮತ್ತು ನಿರ್ದೇಶಕ ಇಬ್ಬರಲ್ಲಿ ಯಾರು ನಿಮ್ಮಲ್ಲಿ ಸ್ಟ್ರಾಂಗ್ ಅನ್ನಿಸಿದೆ?
- ನಿರ್ದೇಶಕನೇ ಸ್ಟ್ರಾಂಗ್ ಅನ್ನಿಸಿದೆ. ಅಲ್ಲದೆ, ನಾನು ಸಂಭಾಷಣೆ ಬರೆಯೋಕೆ ಬಂದವನಲ್ಲ. ನಿರ್ದೇಶಕನಾಗೋಕೆ ಬಂದೆ. ಆದರೆ, ಅನಿವಾರ್ಯವಾಗಿ ಸಂಭಾಷಣೆ ಬರೆಯಲು ಶುರಮಾಡಿದೆ. ಇದಕ್ಕೇ ಫಿಕ್ಸ್ ಆಗಿಬಿಡುತ್ತೇನೆ ಅನ್ನಿಸಿದಾಗ ಸ್ವಲ್ಪ ಕಾಲದಿಂದ ಬರೆಯೋದನ್ನು ನಿಲ್ಲಿಸಿಬಿಟ್ಟು ಈಗ ನಿರ್ದೇಶನ ಮಾಡಿದೆ.
*ಹಾಗಾದ್ರೆ ಇನ್ನು ಮುಂದೆ ಸಂಭಾಷಣೆ ಬರೆಯೋಲ್ವ?
- ಇಲ್ಲ. ಇನ್ನು ಮುಂದೆ ಬೇರೆ ಚಿತ್ರಕ್ಕೆ ಸಂಭಾಷಣೆ ಬರೆಯೋಲ್ಲ. ನಿರ್ದೇಶನವನ್ನೇ ಮುಂದುವರಿಸುತ್ತೇನೆ. ಕಷ್ಟಪಟ್ಟು ಅದರಿಂದ ಹೊರಗೆ ಬಂದಿದ್ದೇನೆ. ಇನ್ನು ಏನಿದ್ದರೂ ನನ್ನ ನಿರ್ದೇಶನದ ಚಿತ್ರಗಳಿಗೆ ಮಾತ್ರ ಸಂಭಾಷಣೆ ಬರೆಯುತ್ತೇನೆ.
ಸಂಭಾಷಣೆಯಿಂದಲೇ ಹೆಸರು ಮಾಡಿದ್ದ ಮಂಜು ಮಾಂಡವ್ಯ, 'ಮಾಸ್ಟರ್ ಪೀಸ್' ಮೂಲಕ ನಿರ್ದೇಶಕರಾಗಿದ್ದಾರೆ. ಇದೇ ವಾರ ಈ ಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾ ಕುರಿತು ಅವರು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದು ಇಲ್ಲಿದೆ.