Quantcast
Channel: VijayKarnataka
Viewing all articles
Browse latest Browse all 6795

ಈತ ಉಗ್ರ, ತಾತ ಸ್ವಾತಂತ್ರ್ಯ ಹೋರಾಟಗಾರ

$
0
0

ಹೊಸದಿಲ್ಲಿ : ಸ್ವಾತಂತ್ರ್ಯ ಹೋರಾಟಗಾರರ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಉಗ್ರನಾದ ಕಥೆ ಇದು. ದೇಶದ ವಿರುದ್ಧ ಸಂಚು ರೂಪಿಸುತ್ತಿರುವ ಭಾರತದ ಅಲ್ ಖಾಯಿದಾ (ಎಕ್ಯೂಐಎಸ್) ಸಂಘಟನೆಯ ಮುಖ್ಯಸ್ಥ ಸನಾಉಲ್ ಹಖ್‌ನ ಪೂರ್ವಿಕರು ಸ್ವಾತಂತ್ರ್ಯ ಯೋಧರಾಗಿದ್ದರು ಎಂಬ ಸಂಗತಿಯನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಹೆಚ್ಚಿವೆ.

ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ ಜತೆಗೂಡಿ ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿರುವ ಎಕ್ಯೂಐಎಸ್ ಸಂಘಟನೆಯ ಸೂತ್ರಧಾರಿ ಸನಾಹುಲ್ ಹಕ್‌ನ ಬೇಟೆಗೆ ಭದ್ರತಾ ಪಡೆಗಳು ಬಲೆ ಬೀಸಿವೆ. ಕೆಲ ದಿನಗಳ ಹಿಂದೆ ಸೆರೆ ಸಿಕ್ಕ ಉಗ್ರ ಮೊಹಮ್ಮದ್ ಆಸಿಫ್‌ನನ್ನು ತೀವ್ರ ವಿಚಾರಗೊಳಪಡಿಸಿದ ವೇಳೆ ಹಖ್‌ನ ಪೂರ್ವಪರ ಬಯಲಿಗೆ ಬಂದಿದೆ.

ಅಲ್ ಖಾಯಿದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್, ಆತನ ಉತ್ತರಾಧಿಕಾರಿ ಅಯಾಮನ್ ಅಲ್ ಜವಾಹಿರಿಯ ವಿಶ್ವಾಸ ಗಳಿಸಿ ಎಕ್ಯೂಐಎಸ್ ಮುಖ್ಯಸ್ಥನಾದ ಹಖ್‌ನ ನೈಜ ಹೆಸರು ಮೌಲಾನಾ ಅಸಿಮ್ ಉಮರ್. ಈತನ ಪೋಷಕರು ಉತ್ತರ ಪ್ರದೇಶದ ಸಾಂಭಾಲ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಹಖ್‌ನ ಪೋಷಕರಿಗೆ ತಮ್ಮ ಮಗ ಬದುಕಿದ್ದು, ಆತ ಎಕ್ಯೂಐಎಸ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವುದು ಯಾವ ಅಚ್ಚರಿಯನ್ನೂ ತಂದಿಲ್ಲ. ಈ ಸ್ಫೋಟಕ ಮಾಹಿತಿಯನ್ನು ಹಖ್‌ನ ಕುಟುಂಬಸ್ಥರ ಮುಂದೆ ಇಟ್ಟಾಗ, ಆತನ 70 ವರ್ಷದ ತಾಯಿ, 'ಆರು ವರ್ಷಗಳ ಹಿಂದೆಯೇ ನಮ್ಮ ಕುರುಳ ಕುಡಿ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆಂದು ಗೊತ್ತಾದ ದಿನವೇ ಅವನು ನಮ್ಮ ಪಾಲಿಗೆ ಸತ್ತುಹೋಗಿದ್ದಾನೆ,' ಎಂದು ಕಣ್ಣೀರಾದರು. 2009ರಲ್ಲಿಯೇ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಸಾಂಭಾಲ್ ಜಿಲ್ಲೆಯ ದೀಪಾ ಸರಾಯ್ ಗ್ರಾಮದಲ್ಲಿರುವ ಹಖ್‌ನ ಪೊಷಕರ ಮನೆಗೆ ಭೇಟಿ ಕೊಟ್ಟು, 'ನಿಮ್ಮ ಮಗ ಹಖ್ 14 ವರ್ಷಗಳ ಹಿಂದೆಯೇ ಕಾಣೆಯಾಗಿದ್ದು, ಆತ ಸತ್ತುಹೋಗಿದ್ದಾನೆ ಎಂದು ನೀವು ಭಾವಿಸಿದ್ದೀರಿ. ಆದರೆ ಆತ ಬದುಕಿದ್ದು, ತೆಹ್ರೀಕ್ ಎ ತಾಲಿಬಾನ್ ಮತ್ತು ಅಲ್‌ಖಾಯಿದಾ ಸಂಘಟನೆ ಜತೆ ಸೇರಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾನೆ,' ಎಂದು ಹೇಳಿದ್ದರು. ಇದರಿಂದ ನೊಂದುಕೊಂಡ ಹಖ್‌ನ ತಂದೆ ಇಫ್ರಾನ್ ಉಲ್ ಹಖ್ (75)ಅವರು, 'ನಮ್ಮ ಮಗ ಸತ್ತುಹೋಗಿದ್ದಾನೆ' ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ ಹಿನ್ನೆಲೆಯುಳ್ಳ ನಮ್ಮ ಕುಟುಂಬದ ಕುಡಿ ದೇಶಭ್ರಷ್ಟ ನಾಗಿರುವುದನ್ನು ಊಹಿಸಿಕೊಳ್ಳಲು ತಮ್ಮಿಂದಾಗದು ಎಂದು ಅವರು ಬೇಸರ ಹೊರಹಾಕಿದ್ದರು.

ಮಗನಿಗೆ ಪುಸ್ತಕದ ಗೀಳಿತ್ತು...

'ನನ್ನ ಮಗ ಸನಾಉಲ್ ಹಖ್‌ಗೆ ಪುಸ್ತಕಗಳ ಗೀಳಿತ್ತು. ಒಂದಿನ ಮದರಸಾದಲ್ಲಿ ಖುರಾನ್ ಮತ್ತು ಅರೇಬಿಕ್ ಭಾಷೆಯನ್ನು ಅಭ್ಯಸಿಸಬೇಕೆಂಬ ಬಯಕೆ ತೋರ್ಪಡಿಸಿದ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೆಕ್ಕಾಗಿ ಹೋಗುವುದಾಗಿಯೂ 1995ರಲ್ಲಿ ಹೇಳಿಕೊಂಡಿದ್ದ. ಇದಕ್ಕಾಗಿ 1 ಲಕ್ಷ ರೂ. ನೀಡುವಂತೆ ಪೀಡಿಸುತ್ತಿದ್ದ. ಆದರೆ ನಾವು ಅಂಥ ಆಸೆಗಳನ್ನು ಬಿಟ್ಟು ಸ್ಥಳೀಯ ಕಾಲೇಜಿನಲ್ಲಿಯೇ ಓದಿ, ಕೆಲಸವೊಂದನ್ನು ಗಿಟ್ಟಿಸಿಕೊಂಡು ಕುಟುಂಬ ಬೆಂಬಲಕ್ಕೆ ನಿಲ್ಲುವಂತೆ ಬುದ್ಧಿವಾದ ಹೇಳಿದ್ದೇವು. ಇದೇ ವಿಚಾರಕ್ಕೆ ಮನೆಯಲ್ಲಿ ಸಾಕಷ್ಟು ಜಗಳವಾದರೂ ಆತನ ತನ್ನ ಹಠ ಬಿಡಲಿಲ್ಲ. ತನ್ನ ದಾರಿ ಹುಡುಕಿಕೊಂಡು ಒಂದಿನ ಮನೆ ಬಿಟ್ಟು ಹೋದ. ಈಗ ಆತನೊಳಗಿದ್ದ 'ಉಗ್ರ' ಹೊರಬಂದಿದ್ದಾನೆ,' ಎನ್ನುತ್ತಾರೆ ಪೋಷಕರು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>