-ಹರೀಶ್ ಬಸವರಾಜ್ ಸಿನಿಮಾ ಒಂದು ಮನರಂಜನಾ ಮಾಧ್ಯಮ. ಪ್ರೇಕ್ಷಕನಿಗೆ ಏನೇ ಹೇಳಬೇಕಿದ್ದರೂ ಇದರ ಮೂಲಕವೇ ಹೇಳಬೇಕು. ಇಲ್ಲವಾದರೆ ಪ್ರೇಕ್ಷಕನಿಗೆ ಮುಟ್ಟುವುದಿಲ್ಲ. ಈ ಸೂತ್ರವನ್ನು ನಿರ್ದೇಶಕ ಗುರು ಪ್ರಸಾದ್ 'ಎರಡನೇ ಸಲ' ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ಈ ಸಿನಿಮಾ ಮೂಲಕ ಫಿಲಾಸಫಿಯನ್ನು ಹೀಗೂ ಹೇಳಬಹುದು ಎಂದು ಅವರು ಬ್ರಾಂಡ್ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ ಜನ ನೋಡಿ ಮೆಚ್ಚಿದ್ದರು. ಅದರಲ್ಲಿದ್ದ ಡಬ್ಬಲ್ ಮೀನಿಂಗ್ ಡೈಲಾಗ್ಗಳನ್ನು ಚಪ್ಪರಿಸಿಕೊಂಡು ಕೇಳಿದ್ದರು. ಒಂದಷ್ಟು ಜನ ಇಡೀ ಸಿನಿಮಾದಲ್ಲಿ ಇದೇ ರೀತಿಯ ಡೈಲಾಗ್ಗಳು ಇದ್ದರೆ ಏನು ಗತಿ ಎಂದು ಮಾತನಾಡಿಕೊಂಡಿದ್ದರು. ಅವರೆಲ್ಲರ ನೀರಿಕ್ಷೆಯನ್ನು ಹುಸಿಗೊಳಿಸಿರುವ ಗುರು ಪ್ರಸಾದ್, ಒಂದೊಳ್ಳೆ ಕತೆಯನ್ನು ಪೋಲಿತನದ ಮೂಲಕ ಚೆನ್ನಾಗಿಯೇ ಉಣಬಡಿಸಿದ್ದಾರೆ. ಮಧ್ಯಮವರ್ಗದ ತಾಯಿ ಪ್ರೀತಿ ಹೇಗಿರುತ್ತದೆ? ತನ್ನ ಮಗನನ್ನು ಒಬ್ಬ ತಾಯಿ ಎಷ್ಟರಮಟ್ಟಿಗೆ ಪ್ರೀತಿಸುತ್ತಾಳೆ? ಅವಳ ಪ್ರೀತಿಯ ತೀವ್ರತೆ ಎಂತಹದ್ದು? ಎಂದು ಗುರು ವಿಭಿನ್ನವಾಗಿ ಹೇಳಿದ್ದಾರೆ. ತಾಯಿ-ಮಗ- ಪ್ರೇಯಸಿ ನಡುವೆ ನಡೆಯುವುದೇ ಈ ಚಿತ್ರದ ಸಿನಿಮಾದ ಕತೆ. ವಯಸ್ಸಿಗೆ ಬಂದ ಮಗನಿರುವ ಮನೆಗೆ ವಯಸ್ಸಿಗೆ ಬಂದ ಹುಡುಗಿಯನ್ನು ತರುವ ಮುನ್ನ, ಮುಂದೆ ಏನೂ ಆಗುವುದಿಲ್ಲ ಎಂಬ ಭರವಸೆಯಿಂದಲೇ ಕರೆಸುತ್ತಾಳೆ. ತಾಯಿಗೆ ಮಗನ ಮೇಲೆ ನಂಬಿಕೆ, ಮಗನನ್ನು ಪ್ರೇಯಸಿ ಕೆಣಕಿ ಕೆಣಕಿ ಖೆಡ್ಡಾದೊಳಗೆ ಬೀಳಿಸಿಕೊಳ್ಳುತ್ತಾಳೆ, ಆಮೇಲೆ ಏನಾಗುತ್ತದೆ ಎಂಬುದೇ ಸಿನಿಮಾದ ಪ್ರಮುಖಾಂಶ. ಪ್ರೇಮಿಗಳಿಗೆ ಗುರು ಪ್ರಸಾದ್ ಈ ಸಿನಿಮಾ ಮೂಲಕ ವಿಭಿನ್ನವಾದ ಪ್ರೇಮ ಪಾಠವನ್ನು ಹೇಳಿಕೊಟ್ಟಿದ್ದಾರೆ. ಸಿನಿಮಾದ ಮೊದಲರ್ಧದಲ್ಲಿ ಒಂದಷ್ಟು ಪೋಲಿ ಜೋಕುಗಳು ತುಂಬಿದ್ದರೂ, ದ್ವಿತೀಯಾರ್ಧದಲ್ಲಿ ಅವೆಲ್ಲವನ್ನು ಮರೆಸುವಂತಹ ಸನ್ನಿವೇಶಗಳನ್ನು ಗುರು ಸೃಷ್ಟಿ ಮಾಡಿದ್ದಾರೆ. ಇನ್ನು ಈ ಕತೆ ಹೇಳಲು ಗುರು ಪ್ರಸಾದ್ ಮಾಡಿಕೊಂಡಿರುವ ಕಲಾವಿದರ ಆಯ್ಕೆಯೇ ಅದ್ಭುತ. ತಾಯಿ ಪಾತ್ರದಲ್ಲಿ ಲಕ್ಷ್ಮೇ ಅವರದ್ದು ಸಹಜಾಭಿನಯ. ಆ ಪಾತ್ರಕ್ಕೆ ಅವರನ್ನು ಬಿಟ್ಟರೆ ಬೇರೆ ಯಾರ ಬಗ್ಗೆಯೂ ಯೋಚಿಸಲಾರದ ಮಟ್ಟಿಗೆ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ 'ಅಲ್ಲಮ' ಸಿನಿಮಾದಲ್ಲಿ ತತ್ವಜ್ಞಾನಿಯಾಗಿ ಮನೋಜ್ಞವಾಗಿ ನಟಿಸಿದ್ದ ಅವರು ಈ ಸಿನಿಮಾದಲ್ಲಿ ಎಲ್ಲ ಯುವ ಪ್ರೇಮಿಗಳ ಪ್ರತಿನಿಧಿಯಾಗಿ ಸಿಕ್ಸರ್ ಬಾರಿಸಿದ್ದಾರೆ. ಪ್ರತಿ ಡೈಲಾಗ್ ಡೆಲವರಿ, ಮುಖ ಭಾವನೆಗಳನ್ನು ಚೆನ್ನಾಗಿ ತೋರಿಸಿದ್ದಾರೆ. ತಮ್ಮ ಆರಂಭದ ದಿನಗಳಿಂದಲೂ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಧನಂಜಯ ಅವರು ಈ ಪಾತ್ರದಲ್ಲಿಯೂ ಉತ್ತಮವಾಗಿ ನಟಿಸುವ ಮೂಲಕ ತಾವೊಬ್ಬ ಉತ್ತಮ ಕಲಾವಿದ ಎಂಬುದನ್ನು ತೋರಿಸಿದ್ದಾರೆ. ನಾಯಕಿ ಸಂಗೀತಾಭಟ್ ಅಂತು ಪಾತ್ರದಲ್ಲಿ ಮಿಂದು ಎದ್ದಿದ್ದಾರೆ. ಡಿ ಗ್ಲಾಮ್ ರೋಲ್ನಲ್ಲಿಯೂ ಅತ್ಯುತ್ತಮವಾಗಿ ನಟಿಸಬಹುದು ಎಂಬುದನ್ನು ಸಂಗೀತಾ ಭಟ್ ಸಮರ್ಥವಾಗಿ ತೆರೆಯ ಮೇಲೆ ತೋರಿಸಿದ್ದಾರೆ. ಇಡೀ ಸಿನಿಮಾ ತುಂಬಾ ಚೂಡಿ ದಾರ ಹಾಕಿಕೊಂಡು ನಮ್ಮ ಪಕ್ಕದ ಮನೆ ಹುಡುಗಿಯ ರೀತಿ ಅವರು ಧನಂಜಯ ಅವರಿಗೆ ಕಾಂಪೆಟೇಷನ್ ಕೊಡುವ ರೀತಿಯಲ್ಲಿ ನಟಿಸಿದ್ದಾರೆ. ಇನ್ನು ಪದ್ಮಜಾ ರಾವ್, ಅವಿನಾಶ್, ಕಿರಿಕ್ ಕೀರ್ತಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನೂಪ್ ಸೀಳಿನ್ ಮನಸ್ಸಲ್ಲಿ ಉಳಿಯುವಂತಹ ಟ್ಯೂನ್ ನೀಡಿದ್ದಾರೆ. ಸಿನಿಮಾದಲ್ಲಿ ಹಾಡುಗಳ ಬಳಕೆ ಕತೆಗೆ ಹೊರೆ ಎನಿಸುವುದಿಲ್ಲ. ಹೂವ ಸುರಿದೇವೋ ಎಂಬ ಹಾಡನ್ನು ಪ್ರತಿ ಪ್ರೇಕ್ಷಕನು ಚಿತ್ರಮಂದಿರ ಬಿಟ್ಟು ಹೊರಬಂದರೂ ಗುನುಗುತ್ತಿರುತ್ತಾನೆ. ಸಂಕಲನಕಾರ ಕೆಂಪರಾಜು ಮತ್ತು ಸಿನಿಮಾಟೋಗ್ರಾಫರ್ ಸಾಮ್ರಾಟ್ ಅಶೋಕ್ ತಮ್ಮ ಕೆಲಸದಲ್ಲಿ ಗಮನ ಸೆಳೆಯುತ್ತಾರೆ.
↧
ಎರಡನೇ ಸಲ: ಫಿಲಾಸಫಿ ಹೇಳಿ ಕಚಗುಳಿ ಇಡುವ ಎರಡನೇ ಸಲ
↧