ಸುದೀಪ್ ನಟನೆಯ ಹೆಬ್ಬುಲಿ ಚಿತ್ರ ಗುರುವಾರದಿಂದಲೇ ಥಿಯೇಟರ್ಗಳಲ್ಲಿ ಗರ್ಜಿಸುತ್ತಿದೆ. ಮಧ್ಯರಾತ್ರಿ ವೇಳೆಯಲ್ಲಿಯೇ ಸಿನಿಮಾ ನೋಡಲು ಜನ ಮುಗಿಬಿದ್ದಿದ್ದರು. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಅದ್ಭುತ ಎಂದಿದೆ ಚಿತ್ರತಂಡ. ಪ್ರೇಕ್ಷಕರೊಂದಿಗೆ ಸಿನಿಮಾ ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ ಸುದೀಪ್. ಕ್ಯಾಪ್ಟನ್ ರಾಮ್ ಹೆಸರಿನ ಪ್ಯಾರಾ ಕಮಾಂಡರ್ ಆಗಿ ಅವರಲ್ಲಿ ನಟಿಸಿದ್ದಾರೆ.
'ನಾನು ನಟಿಸುವ ಪ್ರತಿ ಸಿನಿಮಾ ಸ್ಪೆಷಲ್ ಆಗಿರುತ್ತೆ. ಹೆಬ್ಬುಲಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಂತೂ ಬಹಳ ಸ್ಪೆಷಲ್. ರಿಲೀಸ್ಗೆ ಮೊದಲು ನನ್ನ ಬೇರಾವ ಚಿತ್ರಕ್ಕೂ ಇಂಥ ಹೈಪ್ ಕ್ರಿಯೇಟ್ ಅಗಿರಲಿಲ್ಲ. ಫೀಲಿಂಗ್ ಬ್ಲೆಸ್ಡ್' ಎಂದಿದ್ದಾರೆ ಸುದೀಪ್.
'ಹುಲಿ ಸೈಲೆಂಟ್ ಆಗಿದೆ ಎಂದ ಮಾತ್ರಕ್ಕೆ ಸುಸ್ತಾಗಿದೆ ಅಂತ ಅರ್ಥ ಅಲ್ಲ. ಬೇಟೆಗೆ ಸಿದ್ಧವಾಗುತ್ತಿದೆ ಎಂದು ಅರ್ಥ' ಎಂದು ಚಿತ್ರದಲ್ಲಿ ಡೈಲಾಗ್ ಹೊಡೆಯುವ ಈ ನಟ ಅಭಿಮಾನಿಗಳಲ್ಲಿ ಕಿಚ್ಚನ್ನು ಹೊತ್ತಿಸಿದ್ದಾರೆ.
'ಇಲ್ಲಿ ಸೋಲ್ಜರ್ ಕತೆಯೊಂದಿಗೆ ಇನ್ನೂ ಬೇರೆ ಸಂಗತಿಗಳಿವೆ. ಮೆಸೇಜ್, ಮನರಂಜನೆ, ಮೇಕಿಂಗ್... ಎಲ್ಲವೂ ಗಮನ ಸೆಳೆಯುತ್ತವೆ. ಹೀಗಾಗಿ ಚಿತ್ರ ಅದ್ಭುತವಾದದ್ದನ್ನು ಕೊಟ್ಟಿದೆ. ನಿರ್ದೇಶಕ ಕೃಷ್ಣ ಚೆನ್ನಾಗಿ ಎಲ್ಲವನ್ನೂ ತೆರೆಯ ಮೇಲೆ ತೋರಿಸಿದ್ದಾರೆ. ಎಲ್ಲ ತಂತ್ರಜ್ಞರು ಸೂಪರ್ ಕೆಲಸ ಮಾಡಿದ್ದಾರೆ' ಎಂದಿದ್ದಾರೆ ಸುದೀಪ್. ನಾಯಕಿಯಾಗಿ ಮಿಂಚಿದ್ದು ಅಮಲಾ ಪೌಲ್.
ಎಸ್ಆರ್ವಿ ಪ್ರೊಡಕ್ಷನ್ ಹೌಸ್ನಿಂದ ರಘುನಾಥ್ ಮತ್ತು ಉಮಾಪತಿ ಚಿತ್ರ ನಿರ್ಮಾಣ ಮಾಡಿದ್ದಾರೆ. 'ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲ ಚಿತ್ರಮಂದಿರಗಳಲ್ಲೂ ಅಡ್ವಾನ್ಸ್ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಬಹಳ ಸಂತೋಷವಾಗ್ತಿದೆ. ಎಲ್ಲಾ ವರ್ಗದವರಿಗೂ ಚಿತ್ರ ಇಷ್ಟವಾಗುತ್ತಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ ನಿರ್ಮಾಪಕ ರಘುನಾಥ್. 'ಈಗಾಗಲೇ ನಾವು ಹಾಕಿರುವ ಬಂಡವಾಳಕ್ಕಿಂತ ಶೇ.15-20 ಹೆಚ್ಚು ಗಳಿಕೆ ಬಂದಿದೆ ಎಂದಿದ್ದಾರೆ ಮತ್ತೊಬ್ಬ ನಿರ್ಮಾಪಕ ಉಮಾಪತಿ.
- ಪದ್ಮಾ ಶಿವಮೊಗ್ಗ