ಸುರೇಶ್ ಹೆಬ್ಳೀಕರ್ ಈ ಹಿಂದೆ ಆಗಂತುಕ, ಕಾಡಿನ ಬೆಂಕಿ ಚಿತ್ರಗಳನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಅದೇ ರೀತಿ ಖಿನ್ನತೆಯನ್ನು ಕುರಿತು ಮನೋವಿಶ್ಲೇಷಣಾತ್ಮಕ ಸಿನಿಮಾಗಳನ್ನೂ ಮಾಡಿದ್ದಾರೆ. ರಿಯಲಿಸ್ಟಿಕ್ ಆಗಿ ಸಿನಿಮಾ ನಿರೂಪಿಸುವುದು ಅವರ ಶೈಲಿ. ಈ ಬಾರಿಯೂ ಕೌಟುಂಬಿಕ ಸಮಸ್ಯೆಯಿಂದ ಹದಿಹರೆಯದವರು ಹೇಗೆ ಖಿನ್ನತೆಗೆ ಒಳಗಾಗುತ್ತಾರೆ ಎಂಬ ಕತೆಯ ಮನ ಮಂಥನ ಚಿತ್ರವನ್ನು ತೆರೆಗೆ ತಂದಿದ್ದಾರೆ. ಇದು ಕಮರ್ಷಿಯಲ್ ಚಿತ್ರವಲ್ಲ. ನೈಜ ಘಟನೆಯನ್ನಾಧರಿಸಿ ಈ ಚಿತ್ರ ಮಾಡಲಾಗಿದೆ.
ಮಲೆನಾಡಿನಲ್ಲಿ ಉದ್ಯಮ ನಡೆಸುವ ಶ್ರೀಮಂತನ (ರಮೇಶ್ ಭಟ್) ಮಗ ಅಜಯ್ (ಕಿರಣ್ ರಜಪೂತ್). ಅಮ್ಮನಿಲ್ಲದೆ, ಅಪ್ಪನೊಂದಿಗೆ ಅನ್ಯೋನ್ಯ ಸಂಬಂಧವಿಲ್ಲದೆ ಮಗ ಖಿನ್ನತೆಯಲ್ಲಿರುತ್ತಾನೆ. ಅಪ್ಪನಿಗೆ ತನ್ನ ಉದ್ಯಮವನ್ನು ಮಗ ಮುಂದುವರಿಸಿಕೊಂಡು ಹೋಗಬೇಕು ಎಂಬ ಆಸೆ. ಆದರೆ ಮಗನಿಗೆ ಅಮ್ಮನ ಕನಸು ನನಸು ಮಾಡುವಾಸೆ. ಲೆಕ್ಕದಲ್ಲಿ, ಸಂಗೀತದಲ್ಲಿ ಹೆಚ್ಚಿನ ಆಸಕ್ತಿ. ವಿದೇಶದಲ್ಲಿ ಓದುವ ಹಂಬಲ. ಅಪ್ಪ ಅಕೌಂಟ್ಸ್ ಕಲಿತು ಬಿಝಿನೆಸ್ ನೋಡ್ಕೋ ಎನ್ನುತ್ತಾನೆ. ಅಜಯ್ ತನಗಿಷ್ಟವಿಲ್ಲದಿದ್ದರೂ ಬೆಂಗಳೂರಿನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಕಾರಣಾಂತರದಿಂದ ಊರಿಗೆ ಬಂದಿದ್ದ ಅಜಯ್ಗೆ ಅಪ್ಪನ ಬಿಝಿನೆಸ್ನಲ್ಲಿ ಮೋಸ, ವಂಚನೆ ಕಂಡು ಕಿರಿಕಿರಿಯಾಗುತ್ತದೆ. ಬೆಂಗಳೂರಿಗೆ ಹಿಂತಿರುಗಬೇಕು ಎನ್ನುವಷ್ಟರಲ್ಲಿ ಮಾಧುರಿ (ಅರ್ಪಿತಾ) ಎಂಬ ಹುಡುಗಿಯ ಪರಿಚಯವಾಗುತ್ತದೆ. ದೂರದ ಸಂಬಂಧಿಯೂ ಆಗಿದ್ದ ಮಾಧುರಿ ಅವನ ಪ್ರಕ್ಷುಬ್ಧ ಮನಸ್ಸಿಗೆ ತಂಗಾಳಿಯಾಗಿ ಬರುತ್ತಾಳೆ. ಇಬ್ಬರ ನಡುವೆ ನವಿರಾದ ಪ್ರೀತಿ ಪ್ರಾರಂಭವಾಗುತ್ತದೆ. ಈ ನಡುವೆ ಅಪ್ಪ ಮಗನನ್ನು ಬಿಝಿನೆಸ್ಗೆ ಹಾಕಲು ಮುಂದಾಗುತ್ತಾನೆ. ಇದಕ್ಕೆ ಮಗ ಒಪ್ಪದೇ ಹೋದಾಗ ಮನೆಯಿಂದ ಹೊರಹೋಗುವಂತೆ ತಾಕೀತು ಮಾಡುತ್ತಾನೆ. ಇವೆಲ್ಲವೂ ಅಜಯ್ ಖಿನ್ನತೆ ಹೆಚ್ಚಿಸುತ್ತವೆ. ಇನ್ನೊಂದೆಡೆ ಮಾಧುರಿ, ತನ್ನ ಅಮ್ಮನಿಗೂ ಮತ್ತು ಅಜಯ್ ತಂದೆಗೂ ದೈಹಿಕ ಸಂಬಂಧ ಇರುವುದು ಗೊತ್ತಾಗಿ ಆಘಾತಕ್ಕೊಳಗಾಗುತ್ತಾಳೆ. ಅಜಯ್ಗೆ ವಿಷಯ ತಿಳಿಸಿ ಅವನಿಂದ ದೂರವಾಗುತ್ತಾಳೆ. ಇದರಿಂದ ಕಿರಣ್ ಮನಸ್ಸು ಇನ್ನಷ್ಟು ಘಾಸಿಗೊಳ್ಳುತ್ತದೆ. ಆತ್ಮಹತ್ಯೆ ಪ್ರಯತ್ನ ಮಾಡುತ್ತಾನೆ. ಮುಂದೆ ಇದು ಹೇಗೆ ಪರಿಹಾರ ಕಾಣುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ನೋಡಬಹುದು.
ಚಿತ್ರದ ದ್ವಿತೀಯಾರ್ಧದಲ್ಲಿ ಮಾನಸಿಕ ಖಿನ್ನತೆಯುಳ್ಳವರಿಗೆ ವೈದ್ಯರು ಹೇಗೆ ಚಿಕಿತ್ಸೆ ನೀಡುತ್ತಾರೆ ಎನ್ನುವುದರ ಡಾಕ್ಯುಮೆಂಟೇಷನ್ ಮಾಡಲಾಗಿದೆ. ಅಜಯ್ ಖಿನ್ನತೆಗೆ ಏನು ಕಾರಣ ಎನ್ನುವುದನ್ನು ನಿರ್ದೇಶಕ ಪ್ರೇಕ್ಷಕರಿಂದ ಗುಟ್ಟಾಗಿಡುವುದಿಲ್ಲ. ನಿರೂಪಣೆಯಲ್ಲಿ ಇನ್ನಷ್ಟು ಸಸ್ಪೆನ್ಸ್ ತಂದು ಇನ್ನೂ ಉತ್ತಮವಾಗಿ ನಿರೂಪಿಸಬಹುದಾಗಿತ್ತು ಎನ್ನಿಸಿದರೆ ಆಶ್ಚರ್ಯವಿಲ್ಲ. ನಟರ ಮಾತು, ನಡೆ ನುಡಿ ಹೀಗೆ ಇಡೀ ಚಿತ್ರ ಮಂದಗತಿಯಲ್ಲಿ ಸಾಗುತ್ತಾ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಪ್ರತಿಯೊಂದು ದೃಶ್ಯವನ್ನೂ ಛಾಯಾಗ್ರಾಹಕ ರಾಜನ್ ಸೊಗಸಾಗಿ ಸೆರೆ ಹಿಡಿದಿದ್ದಾರೆ. ಮೊದಲ ಚಿತ್ರವಾದರೂ ಕಿರಣ್ ತನ್ನ ಮಾನಸಿಕ ತುಮುಲಗಳನ್ನು ತುಂಬಾ ಚೆನ್ನಾಗಿ ಮುಖಭಾವದಲ್ಲಿ ವ್ಯಕ್ತಪಡಿಸಿದ್ದಾರೆ. ಅರ್ಪಿತಾ, ರಮೇಶ್ ಭಟ್, ಸುರೇಶ್ ಹೆಬ್ಳೀಕರ್ ಸೇರಿದಂತೆ ಎಲ್ಲರ ಅಭಿನಯ ಉತ್ತಮ. ತಾಂತ್ರಿಕ ಗುಣಮಟ್ಟವೂ ಉತ್ತಮವಾಗಿದೆ. ಐಟಂ ಸಾಂಗ್, ಫೈಟ್, ಕಾಮಿಡಿ ಇಲ್ಲದ ಮನೋವಿಶ್ಲೇಷಣೆಯ ಚಿತ್ರದಲ್ಲಿ ಇಂದಿನ ಯುವ ಪೀಳಿಗೆಯ ಕಷ್ಟವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
-ಪದ್ಮಾ ಶಿವಮೊಗ್ಗ