- ಶರಣು ಹುಲ್ಲೂರ ಒಂದಕ್ಕೆ ಒಂದು ಸೇರಿದರೆ ಎರಡಾಗುವುದು ಗಣಿತಶಾಸ್ತ್ರ, ಒಂದಕ್ಕೆ ಒಂದು ಸೇರಿದರೆ ಮೂರೂ ಆಗಬಹುದು, ಮತ್ತೊಂದು ಸೇರಬಹುದು ಇದು ಜಗ್ಗೇಶ್ ಸೂತ್ರ. ಹಾಗಾಗಿ ನವರಸ ನಾಯಕನ ಬಹುತೇಕ ಸಿನಿಮಾಗಳಲ್ಲಿ ಲಾಜಿಕ್ಗಿಂತ ಮ್ಯಾಜಿಕ್ ಹೆಚ್ಚು ಕೆಲಸ ಮಾಡುತ್ತದೆ. ಇದಕ್ಕೆ 'ಮೇಲುಕೋಟೆ ಮಂಜ' ಚಿತ್ರ ಕೂಡ ಹೊರತಾಗಿಲ್ಲ. ಜಗ್ಗೇಶ್ ಅವರೇ ಈ ಚಿತ್ರವನ್ನು ನಿರ್ದೇಶಿಸಿ, ಪ್ರಧಾನ ಪಾತ್ರ ನಿರ್ವಹಿಸಿದ್ದರಿಂದ ಮನರಂಜನೆಗೂ ಯಾವುದೇ ಕೊರತೆ ಇಲ್ಲ. ಕಾಮಿಡಿ ಚಿತ್ರಗಳು ಅಂದಾಗ ಡಬಲ್ ಮೀನಿಂಗ್ ಡೈಲಾಗ್ಗೆ ಮೊರೆ ಹೋಗುವುದು ಸಾಮಾನ್ಯ. ಈ ಮಂಜ ಅಂತಹ ಯಾವುದೇ ಮಾತುಗಳನ್ನು ಆಡುವುದಿಲ್ಲ. ಆದರೂ, ಸಖತ್ ನಗಿಸುತ್ತಾನೆ. ಆಗಾಗ್ಗೆ ಮನಮುಟ್ಟುವಂತಹ ಮಾತಿನ ಮುತ್ತು ಉದುರಿಸುತ್ತಾನೆ. ಕೊನೆಯಲ್ಲಿ ಕೊಂಚ ಕಣ್ಣೀರು ತರಿಸುತ್ತಾನೆ. ಈ ಎಲ್ಲ ಕಾರಣದಿಂದಾಗಿ ಜಗ್ಗೇಶ್ ಅವರು ನಟನೆ ಮತ್ತು ನಿರ್ದೇಶನ ಎರಡರಲ್ಲೂ ಗೆಲುವು ಸಾಧಿಸಿದ್ದಾರೆ. ಕಾಮಿಡಿ ಕತೆಗೆ ಗಂಭೀರ ವಸ್ತು ಬೇಕಿಲ್ಲ ಅನ್ನುವ ಮಾತಿದೆ. ಹಾಗಾಗಿಯೇ ತುಂಬಾ ಸಿಂಪಲ್ ಸ್ಟೋರಿಯನ್ನೇ ಮಂಜನಿಗಾಗಿ ಆಯ್ದುಕೊಂಡಿರಬೇಕು ನಿರ್ದೇಶಕರು. ಸುಳ್ಳು ಹೇಳಿ ಸಾಲ ಪಡೆಯುವ ವ್ಯಕ್ತಿಯ ಕತೆ ಇಲ್ಲಿದ್ದು, ಸಾಲ ಕೊಟ್ಟವರು ಆತನಿಂದ ವಸೂಲಿ ಮಾಡಲು ಹೇಗೆಲ್ಲ ಪರದಾಡುತ್ತಾರೆ ಎಂಬ ಸ್ವಾರಸ್ಯಕರ ಸಂಗತಿಗಳು ನಮಗಿಲ್ಲಿ ಸಿಗುತ್ತವೆ. ಸ್ವತಃ ಜಗ್ಗೇಶ್ ಅವರೇ ಮಂಜನಾಗಿ ಕಾಣಿಸಿಕೊಂಡಿದ್ದರಿಂದ ಆಯಾ ಸಂಗತಿಗಳೆಲ್ಲ ಸಂಗಾತಿಗಳಂತೆ ಕಚಗುಳಿ ಇಡುತ್ತವೆ. ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ, ನಾನಾ ಅವತಾರದಲ್ಲಿ ಜಗ್ಗೇಶ್ ಕಾಣಿಸುತ್ತಾರೆ. ಅವರು ನಿರ್ವಹಿಸಿದ್ದು ಮಂಜನ ಪಾತ್ರವಾದರೂ, ಜಗ್ಗೇಶ್ ಒಳಗಿನ ಮಿಮಿಕ್ರಿ ಕಲಾವಿದ ಕನ್ನಡದ ಸಾಕಷ್ಟು ನಟರನ್ನು ನೆನಪಿಸುತ್ತಾರೆ. ಜತೆಗೆ ಎಂದಿನಂತೆ ತಮ್ಮ ಟಿಪಿಕಲ್ ಮ್ಯಾನರಿಸಂ ಮೂಲಕ ಮಂಜನಿಗೆ ಮತ್ತಷ್ಟು ಮೆರುಗು ತುಂಬುತ್ತಾರೆ. ಹಾಗಾಗಿ ಜಗ್ಗೇಶ್ ಮಾಡಿದ್ದೆಲ್ಲವೂ ಸರಿ ಅನಿಸುತ್ತಾ ಹೋಗುತ್ತದೆ. ಅವರು ಏನೇ ಮಾಡಿದರೂ ಅದೆಲ್ಲ ನಗುವಾಗ ಬದಲಾಗುತ್ತದೆ. ಜಗ್ಗೇಶ್ ಎಂಬ ನವರಸ ನಟನ ಜತೆ ರಂಗಾಯಣ ರಘು, ಶ್ರೀನಿವಾಸ್ ಪ್ರಭು, ಶಶಿಕಲಾ, ಬ್ಯಾಂಕ್ ಜನಾರ್ಧನ್ರಂಥ ಹಿರಿಯ ಕಲಾವಿದರು ಇದ್ದಾರೆ. ಮಂಜನ ಪಾತ್ರಕ್ಕೆ ಇವರೆಲ್ಲರೂ ಭರಪೂರ ಸಪೋರ್ಟ್ ಮಾಡಿದ್ದಾರೆ. ಜಗ್ಗೇಶ್ ಆರ್ಭಟದಲ್ಲಿ ನಾಯಕಿ ಐಂದ್ರಿತಾ ರೇ ಕಳೆಗುಂದಿದ್ದರೆ, ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ಕೊಂಚ ಸ್ಕೋರ್ ಮಾಡುತ್ತಾರೆ. ನಗು ಅರಸಿ ಹೋದವರಿಗೆ ಖಂಡಿತ ಮೋಸ ಮಾಡಲಾರ ಈ ಮಂಜ.
ಮ್ಯಾಜಿಕ್ಗೆ ಮತ್ತೊಂದು ಹೆಸರೇ ಸಿನಿಮಾ ಇರಬೇಕು. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ನೋಡಿದೆಲ್ಲ ಕೃತಿಯಾಗಿ ರೂಪು ಪಡೆಯುತ್ತದೆ. ನೋಟಕ್ಕೆ ತಕ್ಕಂತೆ ದಕ್ಕುವ ಈ ವಿಸ್ಮಯದ ಒಡಲಲ್ಲಿ ಮುತ್ತೂ ಸಿಗಬಹುದು, ಕಲ್ಲಷ್ಟೇ ಕಾಣಬಹುದು. ಅವರವರ ಭಾವಕ್ಕೆ ತಕ್ಕಂತೆ ಭಕುತಿ.
ಮೇಲುಕೋಟೆ ಮಂಜನ ಸ್ಟಿಲ್ಸ್
↧
ಮಂಜನ ನಂಬಿದವರಿಗೆ ಮೋಸವಿಲ್ಲ
↧