Quantcast
Channel: VijayKarnataka
Viewing all articles
Browse latest Browse all 6795

ನಿಶ್ಚಿತ ಆದಾಯದ ಆರ್ಕಿಡ್‌

$
0
0

- ಕೆ.ಸಿ.ಶಶಿಧರ

ಹೊಳೆಹೊನ್ನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷ ಣ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್‌ ಪದವಿ ಪಡೆದ ಅವಿನಾಶ್‌ ನಡಹಳ್ಳಿ ಕೃಷಿ ಕ್ಷೇತ್ರಕ್ಕೆ ಬಂದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಫಸಲಿಗೆ ಬಂದ ಒಂದು ಎಕರೆಯಲ್ಲಿದ್ದ ಅಡಿಕೆ ಮರಗಳನ್ನು ಕಡಿದು ಪುಷ್ಪ ಕೃಷಿ ಆರಂಭಿಸಿದಾಗಂತೂ ಅನುಮಾನಿಸಿದವರೇ ಹೆಚ್ಚು. ಆದರೆ, ಪ್ರಯೋಗಶೀಲ ಮನಸ್ಸು, ಕೃಷಿಯಲ್ಲಿ ಹೊಸತನ್ನು ಮಾಡುವ ತುಡಿತ ಇರುವ ಯುವ ಕೃಷಿಕ ಅವಿನಾಶ ದಿಢೀರ್‌ ಕೃಷಿ ಆರಂಭಿಸದೇ ಮೊದಲು ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಿ ನಂತರ ದಿಟ್ಟ ಹೆಜ್ಜೆ ಇಡುವ ಮೂಲಕ ಪುಷ್ಪ ಕೃಷಿಯಲ್ಲಿ ಯಶಸ್ಸಿ ಕಂಡಿದ್ದಾರೆ.

2013ರಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಶನ್‌ನಿಂದ ಸಹಾಯ ಧನ ಪಡೆದು ಕಾರ್ನೆಶನ್‌ ಹೂವಿನ ಬೇಸಾಯ ಪ್ರಾರಂಭಿಸಿದರು. ಪಾಲಿಮನೆ (ಪಾಲಿಹೌಸ್‌) ನಿರ್ಮಿಸಿ ಪ್ರಾರಂಭಿಸಿದ ಕಾರ್ನೆಶನ್‌ನ ಒಂದು ಬೆಳೆ - ಗಿಡಗಳು ನಾಶವಾದವು. ಕಾರಣ ಜಂತುಹುಳು. ನಿರಾಸೆಗೊಳ್ಳದ ಅವರು, ಜಂತುಹುಳು ನಿರೋಧಕ ಕಾರ್ನೆಶನ್‌ ತಳಿ ತಂದು ಪುಷ್ಪ ಕೃಷಿ ಮುಂದುವರಿಸಿದರು.

ಹತ್ತೂವರೆ ಗುಂಟೆ ವಿಸ್ತೀರ್ಣದ 2 ಪಾಲಿಮನೆಯಲ್ಲಿ 3 ವರ್ಷಗಳಿಂದ ಕಾರ್ನೇಷನ್‌ ಹೂವು ಬೆಳೆಯುತ್ತಿದ್ದಾರೆ. ಕೆಂಪು, ಬಿಳಿ, ಹಳದಿ ಮತ್ತು ಗುಲಾಬಿ ಬಣ್ಣದ ಕಾರ್ನೆಷನ್‌ಗಳಿವೆ. ಜತೆಗೆ ಪ್ರಾಯೋಗಿಕವಾಗಿ 5 ಗುಂಟೆ ಜಾಗದಲ್ಲಿ ಗುಲಾಬಿ ಹೂವು ಬೆಳೆಯುತ್ತಿದ್ದಾರೆ.

ಕಾರ್ನೆಶನ್‌ ಕೃಷಿಯಲ್ಲಿ ಯಶಸ್ಸು ಕಂಡ ಬಳಿಕ ಮೇಲೆ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಿಂದ ನೆರವು ಪಡೆದು ಒಂದು ಎಕರೆ ಪಾಲಿಮನೆ ನಿರ್ಮಿಸಿ ಆರ್ಕಿಡ್‌ ಬೆಳೆಯುತ್ತಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ 100 ಆರ್ಕಿಡ್‌ ಸಸಿಗಳನ್ನು ಬೆಳೆಸಿ ಪರೀಕ್ಷಿಸಿದರು. ಬೆಳೆ - ಹೂವು ಉತ್ತಮವಾಗಿ ಬಂದದ್ದು ದೊಡ್ಡ ಮಟ್ಟದಲ್ಲಿ ಆರ್ಕಿಡ್‌ ಕೃಷಿಗೆ ಪ್ರೇರೇಪಣೆ ನೀಡಿತು. ಪಾಲಿಹೌಸ್‌ ನಿರ್ಮಿಸಿ ಆರ್ಕಿಡ್‌ ಕೃಷಿ ಕೈಗೊಳ್ಳಲು 56 ಲಕ್ಷ ರೂಪಾಯಿ ವೆಚ್ಚವಾಗಿದೆ. ರಾಷ್ಟ್ರೀಯ ತೋಟಗಾರಿಗೆ ಮಿಷನ್‌ನಿಂದ ಸಹಾಯ ಧನ ಪಡೆದಿದ್ದಾರೆ. ಇನ್ನು ಧನ ಸಹಾಯ ಪಡೆಯದೇ ದೊಡ್ಡ ಪ್ರಮಾಣದಲ್ಲಿ ಆರ್ಕಿಡ್‌ ಕೃಷಿ ಕೈಗೊಂಡು ಲಾಭ ಕಾಣಲು ಹೆಚ್ಚು ಅವಧಿ ಬೇಕು ಎಂಬುದು ಅವರ ಅಭಿಮತ. ಅವಿನಾಶ್‌ ಸಹೋದರ ಆಕಾಶ್‌ ಕೂಡ ಪುಷ್ಪ ಕೃಷಿಯಲ್ಲಿ ಭಾಗಿಯಾಗಿದ್ದಾರೆ.

ಆರ್ಕಿಡ್‌ ಕೃಷಿಗಾಗಿ 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಲ್ಲುಕಂಬ, 1.5 ಲಕ್ಷ ರೂ. ವೆಚ್ಚದಲ್ಲಿ ಬೆಡ್ಡಿಂಗ್‌ ಮತ್ತು 1.5 ಲಕ್ಷ ರೂ. ವೆಚ್ಚದಲ್ಲಿ ಹನಿ ನೀರಾವರಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. 65 ರೂಪಾಯಿ ದರದಂತೆ 40,500 ಆರ್ಕಿಡ್‌ ಸಸಿಗಳನ್ನು ಪೂನಾದಿಂದ ತರಿಸಿ ನಾಟಿ ಮಾಡಿದ್ದಾರೆ.

ಬೆಳೆ ನಿರ್ವಹಣೆ: ಸಸಿ ನಾಟಿ ಮಾಡಿದ ಐದು ತಿಂಗಳಿಗೆ ಹೂವು ಬಿಡಲು ಪ್ರಾರಂಭಿಸಿದರೂ ಹೂವು ಬಿಡುವ ಪ್ರಕ್ರಿಯೆ ನಿಯಂತ್ರಿಸಿ ಒಂದು ವರ್ಷಕ್ಕೆ ಹೂವು ಕೊಯ್ಲು ಪ್ರಾರಂಭಿಸಿದ್ದಾರೆ. ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 2 ಸಾವಿರ ಆರ್ಕಿಡ್‌ ಹೂವುಗಳನ್ನು ಮಾರಾಟ ಮಾಡಿದ್ದಾರೆ. 15 ಹೂವಿನ ಒಂದು ಗುಚ್ಛ ಮಾಡಿ ಮಾರುಕಟ್ಟೆಗೆ ಕಳಿಸುತ್ತಾರೆ. ಬೆಂಗಳೂರಿನ ಹೂವಿನ ವ್ಯಾಪಾರಿಗಳು ಮುಖ್ಯ ಖರೀದಿದಾರರು. ಶಿವಮೊಗ್ಗ ಮಾರುಕಟ್ಟೆಗೂ ಅಲ್ಪ ಹೂವನ್ನು ಕಳಿಸುತ್ತಾರೆ. ಒಂದು ಹೂವಿಗೆ 8ರಿಂದ 12 ರೂಪಾಯಿ ವರೆಗೆ ಬೆಲೆ ಸಿಗುತ್ತದೆ. ಸೀಸನ್‌ನಲ್ಲಿ ಗರಿಷ್ಠ 15 ರೂ. ಬೆಲೆ ಸಿಗುವುದೂ ಇದೆ. ಆರ್ಕಿಡ್‌ ಗಿಡಗಳಿಗೆ ಬ್ಯಾಕ್ಟೀರಿಯಾ ಮತ್ತು ಫಂಗಲ್‌ ರೋಗಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕೊಳೆ ರೋಗ, ಎಲೆ ತಿನ್ನುವ ಕೀಟ, ಬಸವನಹುಳು ಬಾಧೆಯೂ ಇದೆ. ಇವುಗಳನ್ನು ನಿಯಂತ್ರಿಸಲು ವಾರಕ್ಕೆ 2 ಬಾರಿ ಪೋಷಕಾಂಶಗಳ ಸ್ಪ್ರೇ, ಅಗತ್ಯ ಬಿದ್ದಾಗ ಔಷಧ ಸಿಂಪರಣೆ ಮಾಡುತ್ತಾರೆ.

''ಆರ್ಕಿಡ್‌ ಕೃಷಿಯಲ್ಲಿ ಕೆಲಸ ಕಡಿಮೆ. 1 ಎಕರೆಯನ್ನು ಇಬ್ಬರು ನಿರ್ವಹಣೆ ಮಾಡಬಹುದು. ಆದರೆ, ವೇಟಿಂಗ್‌ ಪಿರಿಯೆಡ್‌ ಜಾಸ್ತಿ. ಗಿಡ ನಾಟಿ ಮಾಡಿ ಹೂವು ಬರಲು ಹೆಚ್ಚು ಅವಧಿ ಬೇಕು'' ಎನ್ನುತ್ತಾರೆ ಅವಿನಾಶ. ತೆಂಗಿನ ಸಿಪ್ಪೆಗಳ ಮೇಲೆ ಆರ್ಕಿಡ್‌ ಗಿಡಗಳನ್ನು ಬೆಳೆಸಿದ್ದು, ಅರ್ಕಿಡ್‌ ಗಿಡಗಳು ಮೊದಲ ವರ್ಷ 2ರಿಂದ 3 ಹೂವುಗಳನ್ನು ಬಿಡುತ್ತವೆ. 2ನೇ ವರ್ಷದಲ್ಲಿ 3ರಿಂದ 5 ಹಾಗೂ 3ನೇ ವರ್ಷದಲ್ಲಿ 10 ಹೂವುಗಳನ್ನು ಬಿಡುತ್ತವೆ. ಹೀಗಾಗಿ ಮೊದಲ ವರ್ಷ ಸಿಗುವ ಆದಾಯದ ಪ್ರಮಾಣ ಕಡಿಮೆ. ಉದ್ದನೆಯ ಹಾಗೂ ದಪ್ಪವಾಗಿ ಇರುವ ಕಾಂಡ ಹಾಗೂ ಹೆಚ್ಚಿನ ಹೂವು ಇರುವ ಆರ್ಕಿಡ್‌ ಬಂಚ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಅವಿನಾಶ್‌ ಅವರ ಆರ್ಕಿಡ್‌ ತೋಟದಲ್ಲಿ ಬಿಳಿ ಹಾಗೂ ನೇರಳೆ ಬಣ್ಣದ ಹೂವುಗಳಿವೆ.

''ಮುಂದಿನ 2 ವರ್ಷಗಳಲ್ಲಿ ಆರ್ಕಿಡ್‌ನಿಂದ ಹೆಚ್ಚಿನ ಆದಾಯ ಬರುತ್ತದೆ. ಕಾರ್ನೆಷನ್‌ ಕೃಷಿಗೆ ವೆಚ್ಚ ಮಾಡಿದ ಹಣ ಈಗಾಗಲೇ ಹೂವುಗಳ ಮಾರಾಟದಿಂದ ಬಂದಿದೆ. ನಿರ್ವಹಣೆ ವೆಚ್ಚ ಬಿಟ್ಟರೆ ಮಿಕ್ಕಿದ್ದೆಲ್ಲ ಲಾಭ. ನಾನು ಪ್ರಯೋಗ ಮಾಡಿಯೇ ಪುಷ್ಪ ಬೇಸಾಯ ಅರಿತಿದ್ದೇನೆ'' ಎನ್ನುತ್ತಾರೆ ಅವಿನಾಶ್‌ ನಡಹಳ್ಳಿ.

ಪಾಲಿಮನೆ ಮೇಲೆ ಮಳೆ ನೀರು ಕೊಯ್ಲು

ಅವಿನಾಶ್‌ ನಡಹಳ್ಳಿ ಅವರು ಪಾಲಿಮನೆಗಳ ಮೇಲೆ ಬೀಳುವ ಮಳೆ ನೀರು ಸಂಗ್ರಹಿಸಿ ಪುಷ್ಪಕೃಷಿಗೆ ಬಳಸುವುದು ವಿಶೇಷ. ಕಾರ್ನೇಷನ್‌ ಮತ್ತು ಆರ್ಕಿಡ್‌ ಬೆಳೆಸಲು ಒಟ್ಟು 3 ಪಾಲಿ ಮನೆ ನಿರ್ಮಿಸಿದ್ದಾರೆ. 1 ಎಕರೆ ವಿಸ್ತೀರ್ಣದಲ್ಲಿ ಒಂದು ಹಾಗೂ ಹತ್ತೂವರೆ ಗುಂಟೆ ಪ್ರದೇಶದಲ್ಲಿ ತಲಾ 2 ಪಾಲಿಮನೆಗಳಿವೆ. ಇವುಗಳ ಮೇಲೆ ಬೀಳುವ ಮಳೆ ನೀರನ್ನು ಕೆರೆಗೆ ಹರಿಸುತ್ತಾರೆ. ಪಾಲಿಮನೆಯಿಂದ ಕೆರೆಗೆ ನೀರು ಹರಿದು ಹೋಗಲು ಕಾಲುವೆ ನಿರ್ಮಿಸಿದ್ದಾರೆ. ಕೆರೆ 30 ಮೀಟರ್‌ ಉದ್ದ ಹಾಗೂ 15 ಅಡಿ ಆಳವಿದೆ. ಕಾರ್ನೇಷನ್‌ ಹಾಗೂ ಆರ್ಕಿಡ್‌ ಗಿಡಗಳಿಗೆ ಬಹುತೇಕ ಕೆರೆಯಲ್ಲಿ ಸಂಗ್ರಹಿಸಿದ ನೀರು ಸಾಕಾಗುತ್ತದೆ.

ಬಸವನಹುಳು ನಿಯಂತ್ರಣಕ್ಕೆ ಕೋಳಿ

ಪಾಲಿಮನೆ ಆರ್ಕಿಡ್‌ ತೋಟದಲ್ಲಿ ಬಸವನಹುಳು(ಸ್ನೇಲ್‌) ಬಾಧೆ ನಿಯಂತ್ರಣಕ್ಕೆ ಕೋಳಿಗಳನ್ನು ಬಿಡುತ್ತಾರೆ. ತಂಪಾದ ವಾತಾವರಣ ಇರುವ ಪಾಲಿಮನೆಯಲ್ಲಿ ಬಸವನಹುಳುಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತವೆ. ರಾಸಾಯನಿಕ ಸಿಂಪರಣೆ ಮಾಡಿ ಅವುಗಳನ್ನು ನಿಯಂತ್ರಿಸಲು ಸಾಧ್ಯವಾದರೂ, ರಾಸಾಯನಿಕ ದರ ದುಬಾರಿ. ಹೀಗಾಗಿ ಕೆಲ ಹುಳುಗಳನ್ನು ಕಾರ್ಮಿಕರ ಸಹಾಯದಿಂದ ತೆಗೆಸುತ್ತಾರೆ. ಇನ್ನು ಕೋಳಿಗಳನ್ನು ಪಾಲಿಮನೆಯಲ್ಲಿ ಬಿಡುವುದರಿಂದ ಅವು ಬಸವನಹುಳುಗಳನ್ನು ತಿನ್ನುತ್ತವೆ.

ಹೆಚ್ಚಿನ ಮಾಹಿತಿಗೆ ಅನಿನಾಶ್‌ ಅವರ ಮೊ. ಧಿಧಿ 9449929535.



Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>