Quantcast
Channel: VijayKarnataka
Viewing all articles
Browse latest Browse all 6795

​ಯಡಿಯೂರಪ್ಪ ಜನನಾಯಕ

$
0
0

ಕುಮಾರಸ್ವಾಮಿ ನಂ.2
ಸಿದ್ದರಾಮಯ್ಯ ನಂ.3



-ಸ್ವಂತ ಜಿಲ್ಲೆಯಲ್ಲಿಯೇ ಸಿಎಂಗೆ ಹಿನ್ನಡೆ

-ರಾಜಧಾನಿಯಲ್ಲಿ ಎಚ್‌ಡಿಕೆ ಮೇಲುಗೈ, ಬಿಎಸ್‌ವೈಗೆ ಹಿನ್ನಡೆ

-ಕರಾವಳಿ, ಮಲೆನಾಡು, ಬೆಳಗಾವಿ, ಕಲುಬುರಗಿ, ಬಾಗಲಕೋಟ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಬಿಎಸ್‌ವೈ ಪ್ರಾಬಲ್ಯ


ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ‘ವಿಜಯ ಕರ್ನಾಟಕ’ ಓದುಗರಿಂದ 2016ರ ಜನ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಓದುಗರು 3ನೇ ಸ್ಥಾನಕ್ಕೆ ತಳ್ಳಿದ್ದಾರೆ. ಅಚ್ಚರಿಯ ಫಲಿತಾಂಶದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ 2ನೇ ಸ್ಥಾನ ಗಿಟ್ಟಿಸಿದ್ದಾರೆ.

ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆಯಲಿರುವ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಈಗಿನಿಂದಲೇ ತಾಲೀಮು ಆರಂಭಿಸಿದ್ದಾರೆ. ಈ ಮೂವರು ರಾಜ್ಯವ್ಯಾಪಿ ಸುತ್ತುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತ್ಯಂತ ಪ್ರಭಾವಿ, ಜನಪ್ರಿಯ ನಾಯಕರು ಯಾರು ಎಂಬುದರ ಬಗ್ಗೆ ಚರ್ಚೆಗಳು ನಡೆದಿದ್ದವು. ಇದಕ್ಕೆ ಉತ್ತರ ಹುಡುಕುವ ನಿಟ್ಟಿನಲ್ಲಿ ಪತ್ರಿಕೆಯು ಓದುಗರಿಗೆ ತಮ್ಮ ಜನ ನಾಯಕರನ್ನು ಆಯ್ಕೆ ಮಾಡುವಂತೆ ಕೇಳಿತ್ತು. ವಿಕ ಕರೆಗೆ ಸ್ಪಂದಿಸಿರುವ ಲಕ್ಷಾಂತರ ಓದುಗರು ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ತಮ್ಮದೇ ದೃಷ್ಟಿಕೋನದಲ್ಲಿ ಆಯ್ಕೆ ಮಾಡಿದ್ದಾರೆ. ಈ ಸಮೀಕ್ಷೆಯಲ್ಲಿ ಕೆಲವೊಂದು ಕುತೂಹಲಕಾರಿ ಅಂಶಗಳು ಹೊರಬಿದ್ದಿವೆ.

ಪ್ರಾದೇಶಿಕ ವೈವಿಧ್ಯ

ರಾಜಧಾನಿ ಬೆಂಗಳೂರು, ಗಂಗಾವತಿ, ಮೈಸೂರು, ಕಲಬುರಗಿ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಬಾಗಲಕೋಟ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಹಾಗೂ ದಾವಣಗೆರೆ ಪ್ರದೇಶಗಳ ಓದುಗರ ಸಮೀಕ್ಷೆಯಂತೆ ಈ ಮೂವರು ನಾಯಕರ ಪೈಕಿ ಯಡಿಯೂರಪ್ಪ ಶೇ. 50 ಮತ ಗಳಿಸುವ ಮೂಲಕ ಮುಂಚೂಣಿಯಲ್ಲಿದ್ದಾರೆ. ಅವರ ಹಿಂದೆಯೇ ಕುಮಾರಸ್ವಾಮಿ ಇದ್ದಾರೆ. ಎಚ್‌ಡಿಕೆಗೆ ಶೇ. 35 ಮತಗಳು ಲಭ್ಯವಾಗಿವೆ. ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎಂಗೆ ದೊರೆತದ್ದು ಶೇ. 15 ಮತಗಳು ಮಾತ್ರ

ಸಿದ್ದರಾಮಯ್ಯ ಅವರು ಬಾಗಲಕೋಟ ಪ್ರದೇಶದಲ್ಲಿ ಮಾತ್ರ 2ನೇ ಸ್ಥಾನ ಪಡೆದಿದ್ದರೆ, ಉಳಿದ 10 ಪ್ರದೇಶಗಳಲ್ಲಿಯೂ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಯಡಿಯೂರಪ್ಪ ಅವರು ಗಂಗಾವತಿ, ಬೆಂಗಳೂರು, ಬೆಂಗಳೂರು ಗ್ರಾ.ಪ್ರದೇಶದಲ್ಲಿ 2ನೇ ಸ್ಥಾನದಲ್ಲಿದ್ದರೆ, ಉಳಿದ ಕಡೆ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಧಾನಿಯಲ್ಲಿ ಎಚ್‌ಡಿಕೆ ಹವಾ

ಕುಮಾರಸ್ವಾಮಿ ಅವರು ರಾಜಧಾನಿ ಬೆಂಗಳೂರ ಓದುಗರ ಆಯ್ಕೆಯಲ್ಲಿ ಮೊದಲ ಸ್ಥಾನ (ಶೇ.72)ದಲ್ಲಿದ್ದರೆ, ಮಂಗಳೂರು ಪ್ರದೇಶದಲ್ಲಿ ಕೇವಲ ಶೇ.7ರಷ್ಟು ಮತಗಳಿಸಿ ಪ್ರದೇಶಗಳ ಪೈಕಿ ಅತ್ಯಂತ ಕಡೆಯ ಸ್ಥಾನದಲ್ಲಿದ್ದಾರೆ. ಉಳಿದಂತೆ ಮೈಸೂರು (ಶೇ.66), ಬೆಂಗಳೂರು ಗ್ರಾಮಾಂತರದಲ್ಲಿ (ಶೇ.71) ಮೊದಲ ಸ್ಥಾನ, ಮಂಗಳೂರಿನ ಜತೆಗೆ ಬಾಗಲಕೋಟ ಪ್ರದೇಶಗಳಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಉಳಿದ 6 ಕಡೆ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ರಾಜಧಾನಿಯಲ್ಲೂ ಸಿಎಂ ಕೈ ಹಿಡಿಯಲಿಲ್ಲ

ಬಿಜೆಪಿಯ ಭದ್ರಕೋಟೆಯೆಂದೇ ಬಿಂಬಿತವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ (ಶೇ.72) ಮುಂದಿದ್ದರೆ ಯಡಿಯೂರಪ್ಪ 2ನೇ ಸ್ಥಾನ (ಶೇ.22) ಪಡೆದಿದ್ದಾರೆ. ಆದರೆ ಬಿಬಿಎಂಪಿಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ಧರೂ ಸಿದ್ದರಾಮಯ್ಯಗೆ 3ನೇ ಸ್ಥಾನ (ಶೇ.6) ದಕ್ಕಿದೆ.

ಅಷ್ಟೇ ಅಲ್ಲ ಮೈಸೂರು ಪ್ರದೇಶದಲ್ಲಿ ಯಡಿಯೂರಪ್ಪ - ಸಿದ್ದರಾಮಯ್ಯ ಸಮಬಲ (ಶೇ.17) ಹೋರಾಟ ನಡೆಸಿದ್ದರೆ, ಕುಮಾರಸ್ವಾಮಿ ಅತ್ಯಧಿಕ ಶೇ.66 ಮತಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಸ್ವಂತ ಜಿಲ್ಲೆಯಲ್ಲಿಯೇ ಸಿದ್ದರಾಮಯ್ಯ ಹಿನ್ನಡೆ ಅನುಭವಿಸಿರುವುದು ಕುತೂಹಲ ಕೆರಳಿಸಿದೆ. ಬೆಂಗಳೂರು ಗ್ರಾಮಾಂತರದಲ್ಲೂ ಕುಮಾರಸ್ವಾಮಿ ಅತ್ಯಧಿಕ (ಶೇ.71) ಮತಗಳಿಸಿದ್ದರೆ, ಯಡಿಯೂರಪ್ಪ 2ನೇ ಸ್ಥಾನ (ಶೇ.18)ದಲ್ಲಿದ್ದಾರೆ. ಇಲ್ಲಿಯೂ ಸಿಎಂ 3ನೇ ಸ್ಥಾನದಲ್ಲಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕುಮಾರಸ್ವಾಮಿ ಮುನ್ನಡೆ ಸಾಧಿಸಿರುವುದು ಸ್ಪಷ್ಟ.

ಗಂಗಾವತಿ ಎಚ್‌ಡಿಕೆ ನಂ.1

ಗಂಗಾವತಿ ಪ್ರದೇಶದಲ್ಲಿ ಎಚ್‌ಡಿಕೆ ಮೊದಲ ಸ್ಥಾನದಲ್ಲಿದ್ದರೆ, ಬಿಎಸ್‌ವೈ 2ನೇ ಸ್ಥಾನ. ಸಿಎಂಗೆ 3ನೇ ಸ್ಥಾನ. ಕಲಬುರ್ಗಿ ಪ್ರದೇಶದಲ್ಲಿ ಬಿಎಸ್‌ವೈಗೆ ಮೊದಲ, ಎಚ್‌ಡಿಕೆಗೆ 2ನೇ ಸ್ಥಾನ ಹಾಗೂ ಸಿಎಂಗೆ 3ನೇ ಸ್ಥಾನ ದೊರೆತಿದೆ. ಬಿಜೆಪಿಯ ಪ್ರಾಬಲ್ಯವಿರುವ ಹುಬ್ಬಳ್ಳಿ ಪ್ರದೇಶದಲ್ಲಿ ನಿರೀಕ್ಷೆಯಂತೆ ಬಿಎಸ್‌ವೈಗೆ ಮೊದಲ ಸ್ಥಾನ ದೊರೆತಿದೆ. ಮಹಾದಾಯಿ ನದಿ ನೀರು ಹೋರಾಟದಲ್ಲಿ ನಾನಾ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟ ನಡೆದರೂ ಅದು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮಹದಾಯಿ ನದಿ ಹೋರಾಟದ ಲಾಭದ ನಿರೀಕ್ಷೆಯಲ್ಲಿದ್ದ ಕುಮಾರಸ್ವಾಮಿಗೆ 2ನೇ ಸ್ಥಾನ ಹಾಗೂ ಸಿಎಂ 3ನೇ ಪಡೆದಿದ್ದಾರೆ.

ಶಿವಮೊಗ್ಗದಲ್ಲಿ ಬಿಎಸ್‌ವೈ ಮುನ್ನಡೆ

ಶಿವಮೊಗ್ಗ ಪ್ರದೇಶದಲ್ಲಿ ಯಡಿಯೂರಪ್ಪ ಪ್ರಾಬಲ್ಯ (ಶೇ.56) ಮುಂದುವರಿದಿದ್ದರೆ, ಕುಮಾರಸ್ವಾಮಿಗೂ (ಶೇ.33) ಮನ್ನಣೆ ದೊರೆತಿದೆ.

ಇಲ್ಲಿ ಸಿದ್ದರಾಮಯ್ಯ ಹೀನಾಯ ಸ್ಥಿತಿ (ಶೇ.11)ಯಲ್ಲಿದ್ದಾರೆ. ಬಾಗಲಕೋಟ ಪ್ರದೇಶದಲ್ಲಿ ಯಡಿಯೂರಪ್ಪಗೆ ಶೇ.47, ಸಿದ್ದರಾಮಯ್ಯಗೆ ಶೇ.38 ಹಾಗೂ ಕುಮಾರಸ್ವಾಮಿಗೆ ಶೇ.15 ಮತಗಳು ಬಿದ್ದಿವೆ. ಇನ್ನು ಬೆಳಗಾವಿ ಪ್ರದೇಶದಲ್ಲಿಯೂ ಯಡಿಯೂರಪ್ಪ ಶೇ.56, ಕುಮಾರಸ್ವಾಮಿ ಶೇ.27 ಹಾಗೂ ಸಿಎಂ ಕೇವಲ ಶೇ.17 ರಷ್ಟು ಮತಗಳನ್ನು ಪಡೆದಿದ್ದಾರೆ. ಇನ್ನು ದಾವಣಗೆರೆ ಪ್ರದೇಶದಲ್ಲಿಯೂ ಅದೇ ಸ್ಥಿತಿ ಮುಂದುವರಿದಿದೆ.

ಜನ ನಾಯಕರ ಆಯ್ಕೆ ನಡೆದಿದ್ದು ಹೇಗೆ?

ಮುಂಬರುವ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷವಷ್ಟೇ ಬಾಕಿಯಿದೆ. ರಾಜಕೀಯ ಪಕ್ಷಗಳ ಅಂಗಳದಲ್ಲೂ ಚುನಾವಣೆ ಸಿದ್ಧತೆಯ ಚರ್ಚೆ ಪ್ರಾರಂಭವಾಗಿದೆ. ಪ್ರಮುಖ ಪಕ್ಷಗಳ ನೇತಾರರು ಚುನಾವಣೆಯ ಗುಂಗಿನೊಂದಿಗೆ ಈಗಾಗಲೇ ಅಖಾಡಕ್ಕೆ ಇಳಿದಿದ್ದಾರೆ. ಈ ನಡುವೆ, 2016ರಲ್ಲಿ ತಮ್ಮ ಕಾರ್ಯಚಟುವಟಿಕೆ ಮತ್ತು ವರ್ಚಸ್ಸಿನಿಂದಾಗಿ ಜನಮನ ಸೆಳೆದಿರುವ ಮೆಚ್ಚಿನ ನಾಯಕರನ್ನು ವಿಕ ಓದುಗರು ಗುರುತಿಸಿದ್ದಾರೆ.

ಚುನಾಯಿತ ಸರಕಾರವೊಂದು ನಾಲ್ಕು ವರ್ಷಗಳ ಗಡಿ ದಾಟಿತೆಂದರೆ ಆಡಳಿತಾರೂಢರ ಲಕ್ಷ್ಯ ಚುನಾವಣೆಯತ್ತ ಹರಿಯಿತು ಎಂದೇ ಅರ್ಥ. ಪ್ರತಿಪಕ್ಷಗಳೂ ಸಮರ ಸಿದ್ಧತೆಯಲ್ಲಿ ತೊಡಗುತ್ತವೆ. ಮುಂಚೂಣಿ ನಾಯಕರು ಜನಾಕರ್ಷಣೆ ವೃದ್ಧಿಸಿಕೊಳ್ಳಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಸ ಹೊರಡುತ್ತಾರೆ. ಒಟ್ಟಿನಲ್ಲಿ ಇವೆಲ್ಲವೂ ಯುದ್ಧಾರಂಭದ ಮುನ್ಸೂಚನೆಗಳು. ಈ ವಿದ್ಯಮಾನದ ನಡುವೆಯೇ ಜನಮಾನಸದಲ್ಲೂ ಭವಿಷ್ಯದ ರಾಜಕೀಯ ಚಿತ್ರಪಟದ ಅಸ್ಪಷ್ಟ ರೇಖೆಗಳು ಮೂಡುತ್ತಿರುತ್ತವೆ. ಗುಪ್ತಗಾಮಿನಿಯಂತೆ ಕೆಲಸ ಮಾಡುವ ಜನರ ಮನಸ್ಸು ಜನಪ್ರಿಯತೆ, ಜನಪರ ಕಾಳಜಿ ಹೊಂದಿರುವ ಜನನಾಯಕನನ್ನು ಅರಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಉತ್ತಮ ಜನನಾಯಕರು ಯಾರಿರಬಹುದು ಎನ್ನುವ ಪ್ರಶ್ನೆಯನ್ನು ‘ವಿಕ’ ಓದುಗ ಬಳಗದ ಮುಂದಿಡಲಾಯಿತು. ಯಾವುದೇ ಪೂರ್ವಗ್ರಹ ಇಲ್ಲದೆ ಕೈಗೊಂಡ ಈ ಸಮೀಕ್ಷೆಯ ಶ್ರೇಯಸ್ಸು ಓದುಗರಿಗೆ ಸಲ್ಲುತ್ತದೆ. ಇದಕ್ಕೊಂದು ವೇದಿಕೆ ಒದಗಿಸಿ ಓದುಗರೊಂದಿಗೆ ಸಂವೇದಿಯಾಗಿದ್ದಷ್ಟೇ ಪತ್ರಿಕೆ ವಹಿಸಿದ ಪಾತ್ರವಾಗಿದೆ.

‘ನಿಮ್ಮ ಮೆಚ್ಚಿನ ನಾಯಕರನ್ನು ನೀವೇ ಆಯ್ಕೆ ಮಾಡಿ’ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗಿಯಾಗಿ ಜನನಾಯಕರನ್ನು ಆಯ್ಕೆ ಮಾಡಿದವರು ಪತ್ರಿಕೆಯ ಹೆಮ್ಮೆಯ ಓದುಗರು. ಅತ್ಯಂತ ಪಾರದರ್ಶಕವಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಓದುಗ ದೊರೆಗಳೇ ಮುಂದೆ ನಿಂತು ನಿರ್ಭಿಡೆಯ ಅಭಿಪ್ರಾಯ ಮಂಡಿಸಿ ನಾಯಕರ ಶೋಧಕ್ಕಿಳಿದದ್ದು ವಿಶೇಷ.

ಪ್ರಜಾಪ್ರಭುತ್ವದ ಮಾದರಿ

ಜನರಿಂದಲೇ ಜನಪ್ರತಿನಿಧಿಗಳು ಆಯ್ಕೆಯಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಹಿರಿಮೆ. ಹಾಗಾಗಿ ಜನನಾಯಕರನ್ನು ಗುರುತು ಹಚ್ಚುವ ಕಾಯಕದಲ್ಲಿ ಪತ್ರಿಕೆಯ ಓದುಗರು ಇಲ್ಲಿ ಸಂವಾದಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಸದಾಶಯಕ್ಕೆ ಪೂರಕವಾಗಿ ಇಟ್ಟಿರುವ ಹೆಜ್ಜೆಯಾಗಿದೆ.


ಭಾರಿ ಸ್ಪಂದನೆ

ಜನನಾಯಕರ ಆಯ್ಕೆ ಸಂಬಂಧ ಪತ್ರಿಕೆ ಕರೆ ಕೊಡುತ್ತಿದ್ದಂತೆ ನಿರೀಕ್ಷಿಗೂ ಮೀರಿದ ಸ್ಪಂದನೆ ವ್ಯಕ್ತವಾಯಿತು. ಜನಮಾನಸದಲ್ಲಿ ಅಚ್ಚೊತ್ತಿರುವ ರಾಜ್ಯ ಮಟ್ಟದ ಹಾಗೂ ಪ್ರಾದೇಶಿಕ ಮಟ್ಟದ ತಲಾ ಮೂವರು ನಾಯಕರನ್ನು ಆಯ್ಕೆ ಮಾಡುವಂತೆ ಓದುಗರಲ್ಲಿ ವಿನಂತಿಸಿಕೊಳ್ಳಲಾಯಿತು. ಇದಕ್ಕೆ ಸ್ಪಂದಿಸಿದ ಲಕ್ಷಾಂತರ ಓದುಗರು ವ್ಯಾಟ್ಸ್‌ಆ್ಯಪ್‌ ಮೂಲಕ ಸಂದೇಶ ಕಳುಹಿಸಿ ಅಭಿಪ್ರಾಯ ಹಂಚಿಕೊಂಡರು. ನಾಲ್ಕು ದಿನಗಳ ಅವಧಿಯಲ್ಲಿ ಪ್ರವಾಹದೋಪಾದಿಯಲ್ಲಿ ಮೆಸೇಜ್‌ಗಳು ಹರಿದು ಬಂದವು.

ಚುನಾವಣೆಯ ದಿಕ್ಸೂಚಿ

ವಿಧಾನಸಭೆ ಚುನಾವಣೆ ಸನಿಹ ಇರುವುದರಿಂದ ‘ವಿಕ’ ಓದುಗ ಬಳಗದ ಈ ಸಮೀಕ್ಷೆ ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯೂ ಆಗಬಹುದು. ಓದುಗರ ಈ ಅಭಿಮತವು ಅತ್ಯಂತ ಅಮೂಲ್ಯವಾಗಿದ್ದು, ಜನನಾಯಕರಾಗಿ ಹೊರಹೊಮ್ಮಿದವರ ಮೇಲಿನ ಜವಾಬ್ದಾರಿಯನ್ನೂ ಹೆಚ್ಚಿಸಲಿದೆ.

2016ರ ಹಿನ್ನೋಟ: ಅತೀ ಹೆಚ್ಚು ಓದಿದ ವಿಷಯಗಳು


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>