- ಹರೀಶ್ ಬಸವರಾಜ್ ಇತ್ತೀಚಿನ ದಿನಗಳಲ್ಲಿ ನಾಯಕನಿಗೆ ಬಿಲ್ಡಪ್ ಕೊಡುವ ಸಿನಿಮಾಗಳಿಗೇ ಹೆಚ್ಚಾಗಿದ್ದವು. ಕೆಲವು ನಿರ್ದೇಶಕರಂತೂ ದೆವ್ವದ ಸಿನಿಮಾಗಳಿಗೆ ಅಂಟಿಕೊಂಡಿದ್ದರು. ಆದರೆ, ಇವೆಲ್ಲದರ ಹೊರತಾಗಿ ಶ್ರೀಕಂಠ ಚಿತ್ರ ಮಾಡಿದ್ದಾರೆ ನಿರ್ದೇಶಕ ಮಂಜು ಸ್ವರಾಜ್. ಗಾಂಧಿನಗರ ಸಿದ್ಧ ಸೂತ್ರಗಳನ್ನು ಆಚೆಗಿಟ್ಟು ಚಿತ್ರಕಟ್ಟಿದ್ದಾರೆ. ಇನ್ನೂ ಅಚ್ಚರಿ ಅಂದರೆ, ತಮ್ಮ ಸಿನಿಮಾದಲ್ಲಿ ಸ್ಟಾರ್ ನಟನಿದ್ದರೂ ತಮ್ಮ ಕತೆಗೆ ಅವರನ್ನು ಒಗ್ಗಿಸಿಕೊಂಡಿದ್ದಾರೆ. ಸಾಮಾನ್ಯ ಮನುಷ್ಯನೊಬ್ಬ ಏನು ಬೇಕಾದರೂ ಮಾಡುತ್ತಾನೆ ಎನ್ನುವುದು ಸಿನಿಮಾದ ಒನ್ಲೈನ್ ಸ್ಟೋರಿ. ನಾಯಕ ಶ್ರೀಕಂಠ (ಶಿವರಾಜ್ಕುಮಾರ್)ನಿಗೆ ಸ್ವಂತಕ್ಕೊಂದು ಸೂರಿಲ್ಲ. ಹಣ ಮತ್ತು ಊಟಕ್ಕಾಗಿ ಆತ ಸಿಕ್ಕ ಸಿಕ್ಕ ಕೆಲಸ ಮಾಡುತ್ತಾನೆ. ಜೀವನದಲ್ಲಿ ಇನ್ನೇನು ಒಳ್ಳೆಯ ದಿನಗಳು ಆರಂಭವಾಗುತ್ತಿವೆ ಎನ್ನುವ ಹೊತ್ತಿಗೆ ಮತ್ತೆ ಅವನು ಅನಾಥನಾಗುವ ಸನ್ನಿವೇಶ ಎದುರಾಗುತ್ತದೆ. ಇಂತಹ ಸೂಕ್ಷ್ಮ ಕತೆಯನ್ನು ಸೊಗಸಾಗಿ ಕಟ್ಟಿದ್ದಾರೆ ನಿರ್ದೇಶಕರು. ಶಿವರಾಜ್ಕುಮಾರ್ ಸ್ಟಾರ್ ನಟನಾಗಿದ್ದರೂ ಅದನ್ನೆಲ್ಲ ಪಕ್ಕಕ್ಕಿಟ್ಟು ಪಾತ್ರವಾಗಿದ್ದಾರೆ. ಬೀದಿ ಬದಿ ಮಲಗುವ, ರಸ್ತೆ ಬದಿಯ ಹೊಟೇಲ್ನಲ್ಲಿ ತಿನ್ನುವ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಿರ್ದೇಶಕರು ಕೂಡ ಜಾಣ್ಮೆಯ ರೀತಿಯಲ್ಲಿ ಪಾತ್ರ ಮಾಡಿಸಿದ್ದಾರೆ. ಆದರೆ, ಕತೆ ಹೇಳುವ ನೆಪದಲ್ಲಿ ಮಾಧ್ಯಮಗಳನ್ನು ಟಾರ್ಗೆಟ್ ಮಾಡಿದ್ದು ಮಾಡಿದ್ದು ಯಾಕೆ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಸಿನಿಮಾದ ಕತೆಯಲ್ಲಿ ಮತ್ತು ಚಿತ್ರಕತೆಯಲ್ಲಿ ವಿಷಾದವಿದ್ದರೂ, ಅದನ್ನು ಲವಲವಿಕೆಯ ನಿರೂಪಣೆಯಿಂದ ಚೆಂದಗಾಣಿಸಿದ್ದಾರೆ. ಕತೆಯನ್ನು ಹೇಳಲು ಅವರು ಪ್ರಯಾಣವನ್ನು ಆರಿಸಿಕೊಂಡಿರುವುದೂ ಸಹ ಅವರ ಬುದ್ದಿವಂತಿಕೆ ತೋರಿಸುತ್ತದೆ. ಈ ಪಯಣದಲ್ಲಿ ನಾಯಕನಿಗೆ ಜತೆಯಾಗುವ ಮತ್ತೊಬ್ಬನಿಗೆ ತನ್ನ ಕತೆ ಹೇಳುವ ಮೂಲಕ ಬದುಕಿನ ನಾನಾ ಮಜಲುಗಳನ್ನು ಪ್ರೇಕ್ಷಕರಿಗೆ ತೋರಿಸಿರುವುದು ನೋಡುಗನನ್ನು ಸೆಳೆಯುತ್ತದೆ. ಇಡೀ ಸಿನಿಮಾವನ್ನು ಆವರಿಸಿಕೊಂಡಿರುವುದು ಶಿವರಾಜ್ಕುಮಾರ್ರ ನಟನೆ. ನಾಯಕನ ಪಯಣದಲ್ಲಿ ಜತೆಯಾಗುವ ವಿಜಯ್ ರಾಘವೇಂದ್ರ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾಯಕಿ ಚಾಂದಿನಿ ಶ್ರೀಧರನ್ ಮತ್ತು ಬದುಕನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವ ಸ್ಪರ್ಶ ಸಿನಿಮಾ ಖ್ಯಾತಿಯ ರೇಖಾ ಕೂಡ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ಗಮನ ಸೆಳೆಯದೆ ಉಳಿಯುವುದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಒಬ್ಬರೆ. ಉಳಿದಂತೆ ಅಚ್ಯುತ್ ಕುಮಾರ್, ದತ್ತಣ್ಣ, ಸಂಪತ್, ಖಳ ನಟ ದೀಪಕ್ ಎಲ್ಲ ಕಲಾವಿದರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ದ್ವಂದ್ವಾರ್ಥ ಸಂಭಾಷಣೆ, ಐಟಂ ಸಾಂಗ್ ಯಾವುದೇ ಕಿರಿಕಿರಿ ಇಲ್ಲದೇ ಬದುಕಿನ ಮಹತ್ವ ಸಾರುವ ಸಾಮಾನ್ಯ ಮನುಷ್ಯನ ಜೀವನ ಕಥನವನ್ನು ನೀವೂ ಸಹ ನೋಡಬಹುದು.
ಶಿವರಾಜ್ಕುಮಾರ್ ಕಾಮನ್ಮೆನ್ ಪಾತ್ರ ಮಾಡಿರುವ ಬಹುತೇಕ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಅದೇ ಹಾದಿಯಲ್ಲೇ ಸಾಗಿ ಬಂದಿದೆ ಶ್ರೀಕಂಠ ಚಿತ್ರ. 'ಶ್ರೀಕಂಠ, ಎ ಕಾಮನ್ ಮ್ಯಾನ್' ಎಂಬ ಚಿತ್ರದ ಟ್ಯಾಗ್ಲೈನ್ಗೆ ತಕ್ಕಂತೆ ಸಿನಿಮಾ ಮೂಡಿ ಬಂದಿದೆ. ಶಿವರಾಜ್ಕುಮಾರ್ ಈ ಚಿತ್ರದಲ್ಲಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಕಾಣಿಸಿಕೊಂಡಿದ್ದಾರೆ ಎಂದಿದ್ದ ನಿರ್ದೇಶಕರು, ಅದನ್ನು ಸಿನಿಮಾದಲ್ಲಿಯೂ ಕಾರ್ಯರೂಪಕ್ಕೆ ತಂದಿದ್ದಾರೆ.
↧
ಶ್ರೀಸಾಮಾನ್ಯನಾಗಿ ಮಿಂಚಿದ 'ಶ್ರೀಕಂಠ'
↧