- ಶರಣು ಹುಲ್ಲೂರ ಸಿನಿಮಾದ ಕತೆಯೇ ವಿಶೇಷವಾಗಿದೆ. ಆತ ಬುದ್ಧಿಮಾಂಧ್ಯ ಅನಂತರಾಮಯ್ಯ (ರಮೇಶ್ ಅರವಿಂದ್). ಈತನ ಮಗಳೆ ಪುಟ್ಟಿ (ಯುವಿನಾ). ಬುದ್ಧಿಮಾಂಧ್ಯ ತಂದೆ ಮತ್ತು ತುಂಟ ಮಗಳ ನಡುವಿನ ನಿರ್ಮಲ ಪ್ರೀತಿಯೇ ಚಿತ್ರದ ಜೀವಾಳ. ಆತ ಬುದ್ಧಿಮಾಂಧ್ಯ ಆಗಿದ್ದರೂ ಮಗಳಿಗೆ ಅವನೇ ಹೀರೋ. ಮಗಳೇ ಅವನಿಗೆ ಪ್ರಪಂಚ. ತನ್ನ ಪ್ರಾಣವೇ ಆಗಿರುವ ಮಗಳಿಗೆ ಆಟಿಕೆ ವಿಮಾನ ಖರೀದಿಸಬೇಕೆಂಬ ಆಸೆ. ಅಪ್ಪನಲ್ಲಿ ಅದನ್ನು ಕೊಡಿಸಲು ಹಣವಿಲ್ಲ. ಅದಕ್ಕಾಗಿ ಆತ ಬೆವರು ಸುರಿಸಬೇಕಾಗುತ್ತದೆ. ದುಡ್ಡು ಸಂಗ್ರಹಿಸಬೇಕಾಗುತ್ತದೆ. ಈ ನಡುವೆ ಅವರ ಬದುಕಿನಲ್ಲಿ ದುರ್ಘಟನೆಯೊಂದು ನಡೆಯುತ್ತದೆ. ಅದು ತಂದೆ ಮತ್ತು ಮಗಳ ಪ್ರೀತಿಯನ್ನೇ ಕಸಿದುಕೊಳ್ಳುತ್ತದೆ. ಅಲ್ಲಿಂದ ಅವರಿಬ್ಬರ ಜೀವನ ಎತ್ತ ಸಾಗುತ್ತದೆ ಅನ್ನುವುದೇ ಸಿನಿಮಾ. ಇದನ್ನು ಮನಮುಟ್ಟುವಂತೆ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ರವೀಂದ್ರನಾಥ್. ಆಯಾ ಪಾತ್ರಕ್ಕೆ ಪ್ರತಿ ಕಲಾವಿದರೂ ಜೀವ ತುಂಬಿದ್ದರಿಂದ ಇಡೀ ಸಿನಿಮಾ ಕಾಡುತ್ತದೆ. ನಿರ್ದೇಶಕರೇ ಹೇಳಿದಂತೆ ಇದು ಹಾಲಿವುಡ್ ಸಿನಿಮಾವೊಂದರ ಸ್ಫೂರ್ತಿ ಪಡೆದ ಚಿತ್ರ. ಅದನ್ನು ಕನ್ನಡದ ನೆಲಕ್ಕೆ ಒಪ್ಪುವಂತೆ ಚಿತ್ರಕತೆ ಬರೆಯಲಾಗಿದ್ದರೂ, ಅಲ್ಲಲ್ಲಿ ನೈಜತೆಯ ಕೊರತೆ ಕಾಣುತ್ತದೆ. ಮೂಲ ಸಿನಿಮಾದ ಅನುಕರಣೆಯಲ್ಲಿ ಗೊಂದಲ ಮೂಡುತ್ತದೆ. ಆದರೆ, ಈ ಎಲ್ಲಾ ಕೊರತೆಯನ್ನು ರಮೇಶ್ ಮತ್ತು ಯುವಿನಾ ಅಭಿನಯ ಅಳಿಸಿ ಹಾಕುತ್ತದೆ. ರಮೇಶ್ ಅಭಿನಯವಂತೂ ಸೂಪರ್. ಪಾತ್ರವೇ ತಾವಾಗಿದ್ದಾರೆ. ಯುವಿನಾ ಕೂಡ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಈ ಜುಗಲ್ಬಂದಿ ನಗಿಸುತ್ತಲೇ, ಸಡನ್ನಾಗಿ ಹೃದಯ ತೇವ ಮಾಡುತ್ತದೆ. ರಚಿತಾ ರಾಮ್, ರವಿಕಾಳೆ ಕೂಡ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಬಹುತೇಕ ಸಿನಿಮಾ ಗಂಭೀರವಾಗಿದೆ. ಜೈಲು ಸನ್ನಿವೇಶದಲ್ಲಿ ಮಾತ್ರ ಡಬಲ್ ಮಿನಿಂಗ್ ಡೈಲಾಗ್ ಇಣುಕಿ ಗಂಭೀರತೆಯನ್ನು ಕೆಣುಕುತ್ತದೆ. ಒಂದೊಂದು ಸಲ ಈ ಸಂಭಾಷಣೆಗಳು ಆಕಾಶದಲ್ಲಿ ಸರಾಗವಾಗಿ ಹಾರಬೇಕಿದ್ದ ವಿಮಾನಕ್ಕೆ ಅಡೆತಡೆಗಳಂತೆ ಭಾಸವಾಗುತ್ತವೆ. ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ. ಇಡೀ ಚಿತ್ರವನ್ನು ಭುವನ್ ಗೌಡ ಪೇಟಿಂಗ್ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಡಿಗಿಂತ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಇಷ್ಟವಾಗುತ್ತದೆ. ಇದು ರಮೇಶ್ ಅರವಿಂದ್ ಅವರ ನೂರನೆಯ ಚಿತ್ರ. ತಮ್ಮ ಅಭಿಮಾನಿಗಳಿಗೆ ಈ ನೆಪದಲ್ಲಿ ಉತ್ತಮ ಸಿನಿಮಾವನ್ನೇ ಅವರು ಕೊಟ್ಟಿದ್ದಾರೆ.
ವಿಮಾನದ ಕಲ್ಪನೆಯೇ ಬೆರಗು ಮೂಡಿಸುವಂಥದ್ದು. ಆ ಬೆರಗಿನ ಬೆಳಕಿನಲ್ಲಿ ಸಾಗುವ ಈ ವಿಮಾನ, ತಾನು ಸಾಗುವ ಹಾದಿಯಲ್ಲಿ ಬದುಕಿನ ನಾನಾ ಮಜಲುಗಳನ್ನು ದಾಟುತ್ತದೆ. ದಟ್ಟ ಮೋಡವೋ, ಭಯ ಹುಟ್ಟಿಸುವ ಸಿಡಿಲೋ ತಾನು ಸಾಗಲೇಬೇಕು. ಗುರಿ ಸೇರಲೇಬೇಕು. ಗುರಿ ಮುಟ್ಟುವ ತವಕದಲ್ಲಿ ಮತ್ತೆ ನಾನಾ ಅಡೆತಡೆಗಳು. ಈ ಏರಿಳಿತವನ್ನೇ ಭಾವನಾತ್ಮಕ ದೃಶ್ಯಗಳನ್ನಾಗಿಸಿ 'ಪುಷ್ಪಕ ವಿಮಾನ' ಚಿತ್ರ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ಈ ವಿಮಾನದಲ್ಲಿ ಅಪ್ಪ ಮತ್ತು ಮಗಳ ಜೀವನ ಯಾನವಿದೆ. ಅವರ ನಡುವಿನ ಭಾವನಾತ್ಮಕ ತಾಣವಿದೆ. ನಾನಾ ಪ್ರಯಾಣಿಕರ ಜತೆಗಿನ ಪಯಣವಿದೆ. ಹಾಗಾಗಿ ಪ್ರಯಾಣ ಮಾಡಿದಷ್ಟು ನೋಡುಗರಿಗೆ ಹೊಸ ನೋಟ ದಕ್ಕುತ್ತದೆ.
↧
ರಮೇಶ್ ವೃತ್ತಿ ಜೀವನದ ಸಾರ್ಥಕ ಯಾನ
↧