ರಿಮೇಕ್ಗೆ ಸೂಪರ್ ಹಿಟ್ ಚಿತ್ರಗಳನ್ನೇ ಆಯ್ದುಕೊಳ್ಳುವುದು ಸಾಮಾನ್ಯ ಸಂಗತಿ. ಹಾಗಿದ್ದೂ ರಿಮೇಕ್ನಲ್ಲಿ ಕುಲಗೆಡಿಸಿ ಸೋತ ಚಿತ್ರಗಳೂ ಇವೆ. ಮಲಯಾಳ ಚಿತ್ರವೊಂದರ ಕನ್ನಡ ರಿಮೇಕ್ "ಜಾನ್ ಜಾನಿ ಜನಾರ್ಧನ್, ಚಿತ್ರ. ಗುರು ದೇಶಪಾಂಡೆ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ಅಜಯ್ ರಾವ್, ಕೃಷ್ಣ, ಯೋಗಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಗಟ್ಟಿಯಾದ ಕತೆ ಇಲ್ಲ. ಆದರೆ, ಎದೆ ನಡುಗಿಸುವ ದುರಂತವಿದೆ. ಇಷ್ಟಾಗಿಯೂ ಮೂವರು ನಾಯಕರ ಅತಿರೇಕದ ದೃಶ್ಯಗಳನ್ನು ಸಹಿಸಿಕೊಳ್ಳುದು ಸ್ವಲ್ಪ ಕಷ್ಟವೇ. ಹುಡುಗಿಯರನ್ನು ಪಟಾಯಿಸುತ್ತಾ, ಕುಡಿದು ತೂರಾಡುತ್ತಾ, ಬ್ಯಾಂಕಾಕ್ಗೆ ಹೋಗಿ ಹೇಗೆ ಹುಡುಗಿಯರ ಮಧ್ಯೆ ಮಜಾ ಮಾಡಬೇಕು ಎಂದು ಕನಸು ಕಟ್ಟುತ್ತಾ ಕಾಲ ಕಳೆಯುವ ದೃಶ್ಯಗಳೇ ಚಿತ್ರದ ತುಂಬಾ ಆವರಿಸಿದೆ. ಚಿತ್ರದಲ್ಲಿ ಮನರಂಜನೆಗೆ ಹೆಚ್ಚು ಗಮನ ನೀಡಿದ್ದಾರೆ ನಿರ್ದೇಶಕ. ಕಮರ್ಷಿಯಲ್ ಸಿನಿಮಾದಲ್ಲಿ ಇರುವ ಮಸಾಲೆಗಳೆಲ್ಲವೂ ಇದರಲ್ಲಿದೆ. ಇದರ ಜತೆ ಸಮಾಜದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಡೆಯುತ್ತಿರುವ ಕಾಮುಕರ ಅತ್ಯಾಚಾರದ ಗಂಭೀರ ಸಮಸ್ಯೆಯನ್ನೂ ತೋರಿಸಲಾಗಿದೆ. ಜನರ ಕರ್ತವ್ಯವನ್ನು ಹೇಳೋಕೆ ಮಾಲಾಶ್ರೀ ಇದ್ದಾರೆ.
ಕ್ರಿಶ್ಚಿಯನ್ ಹುಡುಗ ಜಾನ್ (ಕೃಷ್ಣ), ಮುಸ್ಲಿಂ ಧರ್ಮದವನಾದ ಜಾನಿ (ಯೋಗಿ), ಹಿಂದುವಾದ ಜನಾರ್ದನ್ (ಅಜಯ್ ರಾವ್) ಆತ್ಮೀಯ ಸ್ನೇಹಿತರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುತ್ತಾರೆ. ಹಣವನ್ನು ಕೂಡಿಟ್ಟು ಹೇಗಾದರೂ ಬ್ಯಾಂಕಾಕ್ಗೆ ಹೋಗಿ ಮಜಾ ಮಾಡಿ ಬರಬೇಕೆಂಬುದು ಇವರ ಕನಸು. ಕೈಯಲ್ಲಿ ಕಾಸಿಲ್ಲದಿದ್ದರೂ ಸಿಕ್ಕಾಪಟ್ಟೆ ಬಿಲ್ಡಪ್ ಕೊಡುತ್ತಿರುತ್ತಾರೆ. ಒಬ್ಬರನ್ನೊಬ್ಬರು ಕಿಚಾಯಿಸಿಕೊಂಡು, ಪೋಲಿ ಜೋಕ್ಗಳನ್ನು ಮಾಡಿಕೊಂಡು, ಹುಡುಗಿಯರ ಗಮನ ಸೆಳೆಯಲು ಪೈಪೋಟಿ ನಡೆಸಿರುತ್ತಾರೆ. ಇವರು ವಾಸವಿರುವ ವಠಾರದಲ್ಲಿ ಎಲ್ಲರೂ ಜಾತಿ ಧರ್ಮ ಮರೆತು ಆತ್ಮೀಯವಾಗಿರುತ್ತಾರೆ. ಹಿಂದು ಮನೆಯಲ್ಲಿ ಮುಸ್ಲಿಂ ಹುಡುಗಿಯನ್ನು ಸಾಕುವ ಪ್ರೀತಿ ವಿಶ್ವಾಸ ಇರುತ್ತದೆ. ಗಂಡ ಬಿಟ್ಟ ಮುಸ್ಲಿಂ ಹುಡುಗಿಗೆ ಶಾಲೂ ಎಂಬ ಪುಟ್ಟ ಮಗಳು ಇರುತ್ತಾಳೆ. ಇವಳೆಂದರೆ ಎಲ್ಲರಿಗೂ ಪ್ರೀತಿ. ಇದರ ಮಧ್ಯೆ ಆಗಾಗ್ಗೆ ಬಾಲಕಿಯರು ನಾಪತ್ತೆಯಾಗುವ ದೃಶ್ಯ ಹೀಗೆ ಬಂದು ಹಾಗೆ ಹೋಗುತ್ತದೆ. ಕೊನೆಗೆ ಶಾಲೂ ನಾಪತ್ತೆ ಆಗುತ್ತಾಳೆ. ಇದರ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ಹೇಳಲಾಗಿದೆ.
ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣ, ಹಿಂದು ಮುಸ್ಲಿಮರ ಬಾಂಧವ್ಯವನ್ನು ಹೊರತು ಪಡಿಸಿದರೆ ಕತೆಯಲ್ಲಿ ಜೀವಾಳವಿಲ್ಲ. ಶೇ. 90ರಷ್ಟು ಭಾಗ ಮೂವರು ನಾಯಕ ನಟರೇ ಆವರಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಒಂದರ್ಧ ಗಂಟೆ ಇವರ ಪರಿಚಯ, ಕಾಮಿಡಿಯಲ್ಲಿ ಚಿತ್ರ ಸಾಗುವುದನ್ನು ನೋಡಬಹುದು.
ಆದರೆ, ಚಿತ್ರದ ಕೊನೆಯ ಹಂತದವರೆಗೂ ಕತೆ ಬೆಳೆಯುವುದಿಲ್ಲ. ಹೆಂಡ ಹೆಣ್ಣುಗಳ ಮಾತಿನಲ್ಲೇ ಮೈ ಮರೆವ ಮೂವರು ನಾಯಕರ ತಲೆಹರಟೆಯನ್ನು ದೀರ್ಘ ಕಾಲ ನೋಡಬೇಕಾಗುತ್ತದೆ. ಕತೆಗೆ ಬೇಕೋ ಬೇಡವೋ ಒಟ್ಟಿನಲ್ಲಿ ಎಲ್ಲೆಂದರಲ್ಲಿ ಹಾಡು ಕುಣಿತ ಬಂದುಹೋಗುತ್ತದೆ. ಒಂದು ಹಾಡಿಗೆ ಐಂದ್ರಿತಾ, ಇನ್ನೊಂದು ಹಾಡಿಗೆ ಕಾಮ್ನಾ ರಣಾವತ್ ಕುಣಿದು ಹೋಗುತ್ತಾರೆ. ಪಡ್ಡೆ ಹುಡುಗರಿಗೆ ಖುಷಿ ಕೊಡುವ ಪಂಚಿಂಗ್ ಡೈಲಾಗ್ಗಳ ರಾಶಿ ಮಧ್ಯೆ ಗಮನ ಸೆಳೆಯುವ ಗಂಭೀರ ಮಾತುಗಳೂ ಇವೆ. ಹಿನ್ನೆಲೆ ಸಂಗೀತದಲ್ಲೂಸಿಕ್ಕಾಪಟ್ಟೆ ಬಿಲ್ಡಪ್ ಇದೆ. ನಿರ್ದೇಶಕರು ಮಾಡಿರುವ ಪಾತ್ರ ಪೋಷಣೆಯೇ ಹಾಗಿರುವುದರಿಂದ ಹೀರೋಗಳೂ ಕಾಮಿಡಿ ಪೀಸ್ಗಳಂತೆಯೇ ಕಾಣಿಸಿಕೊಂಡಿದ್ದಾರೆ.
ಯೋಗಿ, ರವಿಶಂಕರ್ ಗೌಡ ನಟನೆ ಉತ್ತಮವಾಗಿದೆ. ಚಿಕ್ಕ ಪಾತ್ರದಲ್ಲಿ ಮಾಲಾಶ್ರೀ ಖಡಕ್ ಆಗಿ ನಟಿಸಿದ್ದಾರೆ. ಕಣ್ಣಲ್ಲೇ ಹೆದರಿಸುವ ವಿಲನ್ ಪಾತ್ರ ಮರೆಯುವುದು ಕಷ್ಟ. ಛಾಯಾಗ್ರಾಹಕ ಸಂತೋಷ್ ರೈ ಕಲರ್ಫುಲ್ ಆಗಿ ದೃಶ್ಯ ಸೆರೆಹಿಡಿದಿದ್ದಾರೆ. ಹೀರೊಗಳ ಬಿಲ್ಡಪ್ಗೆ ಅಷ್ಟೊಂದು ಅವಧಿ ನೀಡುವ ಬದಲು ಗಂಭೀರ ಸಮಸ್ಯೆಗೆ ಜಾಸ್ತಿ ಒತ್ತು ಕೊಟ್ಟಿದ್ದರೆ ಚಿತ್ರ ಇನ್ನೂ ಚೆನ್ನಾಗಿರುತ್ತಿತ್ತು ಎನ್ನಿಸಿದರೆ ಆಶ್ಚರ್ಯವಿಲ್ಲ.
ನಿರ್ದೇಶನ: ಗುರು ದೇಶಪಾಂಡೆ, ನಿರ್ಮಾಣ: ಎಲ್. ಪದ್ಮನಾಭ್, ಸಿ.ಎನ್. ಶಶಿಕಿರಣ್, ಕೆ. ಗಿರೀಶ್, ತಾರಾಗಣ: ಯೋಗಿ, ಅಜಯ್ ರಾವ್, ಕೃಷ್ಣ, ಗಿರಿಜಾ ಲೋಕೇಶ್, ಶ್ರೀನಿವಾಸ ಮೂರ್ತಿ, ಪ್ರಶಾಂತ್ ಸಿದ್ದಿ, ಮಾಲಾಶ್ರೀ, ರವಿಶಂಕರ್ ಗೌಡ, ಸಂಗೀತ: ಅರ್ಜುನ್ ಜನ್ಯ, ಛಾಯಾಗ್ರಹಣ: ಸಂತೋಷ್ ರೈ ಪಾತಾಜೆ,
* ಪದ್ಮಾ ಶಿವಮೊಗ್ಗ