* ಪದ್ಮಾ ಶಿವಮೊಗ್ಗ
ಪ್ರಿಯಾಂಕಾ ಉಪೇಂದ್ರ ಅಭಿನಯದ ಮಮ್ಮಿ ಚಿತ್ರ ಟ್ರೇಲರ್ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. 21ರ ಹರೆಯದ ಲೋಹಿತ್ ತಮ್ಮ ಮೊದಲ ನಿರ್ದೇಶನದಲ್ಲೇ ಗೆದ್ದಿದ್ದಾರೆ. ಕನ್ನಡದಲ್ಲಿ ಇದುವರೆಗೆ ಬಂದ ಹಾರರ್ ಸಿನಿಮಾಗಳಿಗಿಂತ ಭಿನ್ನವಾಗಿರುವ ಮಮ್ಮಿ, ಮೇಕಿಂಗ್ನಿಂದ ಕನ್ನಡ ಚಿತ್ರರಂಗವನ್ನು ಇನ್ನೊಂದು ಲೆವೆಲ್ಗೆ ತೆಗೆದುಕೊಂಡು ಹೋಗಿದೆ ಎನ್ನಬಹುದು. ಸ್ಯಾಂಡಲ್ವುಡ್ಗೆ ಒಬ್ಬ ಪ್ರತಿಭಾವಂತ ಮತ್ತು ಸೂಕ್ಷ್ಮ ಮನಸ್ಸಿನ ನಿರ್ದೇಶಕ ಸಿಕ್ಕಿದ್ದಾರೆ.
ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಕಾಮಿಡಿ, ವಿಕಾರ, ಅಬ್ಬರ, ವೈಭವೀಕರಣ ಇರೋದನ್ನೇ ನೋಡುತ್ತೇವೆ. ಅರ್ಥಹೀನ, ಹಾಸ್ಯಾಸ್ಪದ ಅನ್ನಿಸುವ ಸಾಧ್ಯತೆಯೂ ಹೆಚ್ಚು. ಆದರೆ, ಮಮ್ಮಿ ಇದೆಲ್ಲದರಿಂದ ಬೇರೆಯಾಗಿ ನಿಲ್ಲುತ್ತದೆ. ಪ್ರಪಂಚದಾದ್ಯಂತ ಜನರು ಪ್ರೇತದ ಬಗ್ಗೆ ಹೇಳಿಕೊಂಡ ಅನುಭವಗಳನ್ನು ಆಧರಿಸಿ ಕತೆ ಬರೆದಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.
ಆರಂಭದಲ್ಲಿ ಅಗೋಚರ ಶಕ್ತಿಯನ್ನು ಪತ್ತೆ ಮಾಡುವ ವಿಜ್ಞಾನಿ ಮನೆಗೆ ಬರುತ್ತಾನೆ. ಕಾರಣ ಬಾಲಕಿ ಯುವಿನಾ ಆ ಮನೆಯಲ್ಲಿ ಇತರರ ಕಣ್ಣಿಗೆ ಕಾಣದವರ ಜತೆ ಮಾತನಾಡುತ್ತಿರುತ್ತಾಳೆ. ಅದು ಪ್ರೇತಾತ್ಮ ಎಂಬ ಅನುಮಾನ ಬಂದ ಕೆಲವೇ ಕ್ಷಣಗಳಲ್ಲಿ ವಿಜ್ಞಾನಿ ಭೀಕರವಾಗಿ ಸಾಯುತ್ತಾನೆ. ಕ್ರಿಯಾಳನ್ನು ಯಾವುದೋ ಶಕ್ತಿ ಎಳೆದೊಯ್ಯುತ್ತದೆ. ಆಸ್ಪತ್ರೆ ಸೇರಿದ ಪ್ರಿಯಾಂಕಾಗೆ ಚರ್ಚ್ನ ಪಾದ್ರಿ ಕೆಟ್ಟ ಶಕ್ತಿ ಅವರ ಮನೆ ಸೇರಿರುವ ಸಂಗತಿ ಹೇಳುತ್ತಾರೆ.
ಗಂಡನ ಆಸೆಯಂತೆ ಪ್ರಿಯಾಂಕಾ ಆ ಮನೆಗೆ ಬಂದು ನೆಲೆಸಿರುತ್ತಾಳೆ. ಗೋವಾದ ಯಾವುದೋ ದ್ವೀಪದಲ್ಲಿರುವ ಒಂಟಿ ವಿಲ್ಲಾಗೆ ಬಂದ ಪ್ರಿಯಾಂಕಾ ವಿಧವೆ. ಏಳು ತಿಂಗಳ ಗರ್ಭಿಣಿ ಕೂಡ. ಸುಮಾರು ಏಳು ವರ್ಷದ ಮಗಳು ಕ್ರಿಯಾ (ಯುವಿನಾ), ಅಮ್ಮ (ವತ್ಸಲಾ ಮೋಹನ್) ಮತ್ತು ತಂಗಿ (ಐಶ್ವರ್ಯಾ) ಜತೆ ಆ ಮನೆಯಲ್ಲಿ ನೆಲೆಸಿದ ಪ್ರಾರಂಭದಲ್ಲೇ ಅನಿರೀಕ್ಷಿತ ಘಟನೆಗಳು ಸಾಲು ಸಾಲಾಗಿ ನಡೆಯುತ್ತವೆ. ಎಲ್ಲರೂ ಭಯಭೀತರಾಗುತ್ತಾರೆ. ಆ ಪ್ರೇತಾತ್ಮದ ಜತೆ ಯುವಿನಾ ಸ್ನೇಹ ಬೆಳೆಸಿಕೊಂಡಿರುತ್ತಾಳೆ. ಆ ಪ್ರೇತಕ್ಕೂ ಅವಳ ಮೇಲೆ ಪ್ರೀತಿ. ಯುವಿನಾ ತಾಯಿ ಯನ್ನು ದ್ವೇಷಿಸುವ ಪ್ರೇತ ತೊಂದರೆ ಕೊಡಲು ಪ್ರಾರಂಭ ಮಾಡುತ್ತದೆ. ಇವರೆಲ್ಲಾ ಹೇಗೆ ಪಾರಾಗುತ್ತಾರೆ? ಯಾರ ಪ್ರೇತ ಅದು ಎನ್ನುವುದನ್ನು ಚಿತ್ರದಲ್ಲಿಯೇ ನೋಡಿ.
ವೈಭವೀಕರಣ ಇಲ್ಲ: ಪ್ರೇತವನ್ನು ವೈಭವೀಕರಿಸದೆ, ಜನರ ಕಲ್ಪನೆಗೆ ಹೊಂದುವಂತೆ ತೋರಿಸಲಾಗಿದೆ. ಒಂದು ಅನ್ರಿಯಲಿಸ್ಟಿಕ್ ಸ್ಟೋರಿ ಯನ್ನು ಅತ್ಯಂತ ನೈಜವಾಗಿ ಆಗಿ ತೋರಿಸಿದ ನಿರ್ದೇಶಕನ ಸಾಮರ್ಥ್ಯ ಇಲ್ಲಿ ಮೆಚ್ಚಲೇ ಬೇಕು. ಒಂದು ಮನೆಯಲ್ಲಿ ನಾಲ್ಕು ಪಾತ್ರಗಳನ್ನು ಇಟ್ಟುಕೊಂಡು 2 ಗಂಟೆ ಪ್ರೇಕ್ಷಕನನ್ನು ಕಾತರದಿಂದ ನೋಡುವಂತೆ ಮಾಡೋದು ಸವಾಲಿನ ವಿಚಾರ. ಇದರಲ್ಲಿ ಲೋಹಿತ್ ಸಂಪೂರ್ಣ ಯಶಸ್ಸು ಗಳಿಸಿದ್ದಾರೆ. ಇಡೀ ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿದ್ದಾರೆ.
ಚಿತ್ರದಲ್ಲಿ ವೇಣು ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಪಕ್ಕಾ ಬ್ಲೆಂಡ್ ಆಗಿದೆ ಎಂದರೆ, ಎಲ್ಲಿ ಎಡಿಟ್ ಆಗಿದೆ ಅಂತ ಗಮನಕ್ಕೆ ಬರೋದೆ ಇಲ್ಲ. ಅದರಲ್ಲೊಂದು ರಿದಂ ಇದೆ. ಬ್ಯೂಟಿ ಇದೆ. ಸ್ಮೂತ್ ಆಗಿ ಕಣ್ಮುಂದೆ ಹಾದು ಹೋಗುತ್ತದೆ. ಇವರಿಬ್ಬರು ಮಾಡಿರುವ ಮ್ಯಾಜಿಕ್ ಇಡೀ ಚಿತ್ರಕ್ಕೆ ಬೆನ್ನೆಲುಬು. ಇವರಿಗೆ ಸರಿಸಾಟಿಯಾಗಿ ಅಜನೀಶ್ ಹಿನ್ನೆಲೆ ಸಂಗೀತ, ರಾಜಕೃಷ್ಣ ಅವರ ಸೌಂಡ್ ಎಫೆಕ್ಟ್ ವಿಶಿಷ್ಟ ಅನುಭವ ನೀಡುತ್ತದೆ. ಕೆಲವೆಡೆ ನಾವೇ ಆ ಮನೆಯಲ್ಲಿ ಓಡಾಡುತ್ತಿದ್ದೇವೇನೋ ಎಂಬ ಭಾವನೆ ಮೂಡುವಂತೆ ಛಾಯಾಗ್ರಹಣ ಮಾಡಿದ್ದಾರೆ ವೇಣು. ಸಿನಿಮಾ ನೋಡಿ ಹೊರಬಂದ ಎಷ್ಟೋ ಹೊತ್ತು ಅದೇ ಮೂಡ್ನಲ್ಲಿರುತ್ತೇವೆ.
ಪ್ರಿಯಾಂಕಾ, ಯುವಿನಾರ ಸಹಜವಾದ ನಟನೆ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಇದುವರಿಗಿನ ಚಿತ್ರಗಳಲ್ಲಿ ಪ್ರಿಯಾಂಕಾ ಅತ್ಯುತ್ತಮ ನಟನೆಯನ್ನು ಈ ಚಿತ್ರದಲ್ಲಿ ನೋಡಬಹುದು. ಉಳಿದ ನಟ ನಟಿಯರೂ ಕೂಡಾ ಅಷ್ಟೇ ಚೆನ್ನಾಗಿ ನಟಿಸಿದ್ದಾರೆ. ಹಾರರ್ ಸಿನಿಮಾ ಇಷ್ಟಪಡದವರೂ, ದೆವ್ವವನ್ನು ನಂಬದವರಿಗೂ ಹಿಡಿಸುವ ಚಿತ್ರ ಇದು. ಭಾವುಕತೆ ಮತ್ತು ಹಾರರ್ ಎರಡೂ ಇದರಲ್ಲಿದೆ.
ಇಡೀ ಚಿತ್ರದಲ್ಲಿ ನಿರ್ದೇಶಕರ ಸಂಯಮ ಎದ್ದು ಕಾಣುತ್ತದೆ. ಚಿತ್ರದ ಸ್ಕ್ರಿಪ್ಟ್ಗೆ ತಕ್ಕಂತೆ ಬಿಗಿಯಾಗಿ, ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಅತಿರೇಕಗಳಾಗಲಿ, ವಿಕೃತವಾಗಲಿ ಇಲ್ಲಘಿ. ಪ್ರಬುದ್ಧವಾದ ನಿರ್ದೇಶನ ಕಾಣುತ್ತದೆ. ಕಣ್ಣಿಗೆ ಮಾತ್ರ ಅಲ್ಲ. ಒಂದು ಅನುಭವ ದಕ್ಕಿಸಿಕೊಳ್ಳಲಾದರೂ ಈ ಸಿನಿಮಾ ನೋಡಿ. ತಾಯ್ತನದ ಎದುರು ಯಾವ ದುಷ್ಟ ಶಕ್ತಿಯೂ ಏನೂ ಮಾಡಲಾರದು ಎಂಬ ಭಾವನಾತ್ಮಕ ಸಂದೇಶವೊಂದು ಚಿತ್ರದಲ್ಲಿದೆ.
ಕನ್ನಡ ಚಿತ್ರ